ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತು ಹಾಕಿ, ಭಾರತ ದೇಶವನ್ನ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವತ್ತ ಮುನ್ನಡೆಸುತ್ತೇನೆ ಎಂಬ ಪೊಳ್ಳು ಭರವಸೆಗಳೊಂದಿಗೆ 2014ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರದ ಚುಕ್ಕಾಣಿ ಹಿಡಿದರು. ಆದರೆ, ಅವರು ಅಧಿಕಾರದ ಚುಕ್ಕಾಣಿ ಹಿಡಿದ ನಂತರದಲ್ಲಿ ಏನಾಗುತ್ತಿದೆ ಎಂಬ ವಾಸ್ತವ ಎಲ್ಲರಿಗೂ ಕಾಣಿಸುತ್ತಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದ ಮೋದಿ ಸರ್ಕಾರ ಕಳೆದ 10 ವರ್ಷದ ಅವಧಿಯಲ್ಲಿಯೂ ಒಟ್ಟು 2 ಕೋಟಿ ಉದ್ಯೋಗ ಸೃಷ್ಟಿಸಲಾಗಿಲ್ಲ. ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಮೋದಿ ಅವರ ಆಡಳಿತದಲ್ಲಿ ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಶ್ರೀಮಂತರೂ ಮತ್ತಷ್ಟು ಉತ್ತುಂಗಕ್ಕೇರುತ್ತಿದ್ದಾರೆ.
2014ರಲ್ಲಿ ಮೋದಿ ಅವರು ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಇದೀಗ ಮೂರನೇ ಅವಧಿಗೆ ಪ್ರಧಾನಮಂತ್ರಿಗಳಾಗಿದ್ದಾರೆ. 2014ಕ್ಕೆ ಹೋಲಿಸಿದರೇ, ಭಾರತದಲ್ಲಿ ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಗಮನಾರ್ಹವಾಗಿ ಬದಲಾವಣೆಯಾಗಿದೆ. ಶ್ರೀಮಂತರ ಆದಾಯ ದ್ವಿಗುಣವಾಗಿದೆ. ಕಣಿವೆಯಂತೆ ವಿಸ್ತರಿಸಿದೆ ಎಂದು ಆರ್ಥಿಕ ಸಂಶೋಧಕರು ಹೇಳುತ್ತಾರೆ.
ಭಾರತದ ಆದಾಯ ಮತ್ತು ಸಂಪತ್ತಿನ ಅಸಮಾನತೆ ಅಂದರೆ ಇಡೀ ದೇಶದಲ್ಲಿಯೇ ಶ್ರೀಮಂತರ ಆಸ್ತಿ ಹೆಚ್ಚಾಗಿದೆ ಇದು ವಿಶ್ವದಲ್ಲಿಯೇ ಅತ್ಯಧಿಕವಾಗಿದೆ. ಚೀನಾ, ದಕ್ಷಿಣ ಆಫ್ರಿಕಾ ಹಾಗೂ ಯುನೈಟೆಡ್ ಸ್ಟೇಟ್ಸ್ಗಿಂತ ಕೆಟ್ಟದಾಗಿದೆ ಎಂದು ವಿಶ್ವ ಅಸಮಾನತೆ ಕುರಿತ ಹೊಸ ಅಧ್ಯಯನ ಬಹಿರಂಗಪಡಿಸಿದೆ.
ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ನೇತೃತ್ವದಲ್ಲಿ ಕಳೆದೊಂದು ಶತಮಾನದಲ್ಲಿ ಭಾರತದ ಆರ್ಥಿಕ ಅಸಮಾನತೆಯ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಕೆಲವು ಆಶ್ಚರ್ಯಕರ ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ. ಥಾಮಸ್ ಪಿಕೆಟ್ಟಿ ಸಿದ್ದಪಡಿಸಿದ – ‘ಇನ್ಕಮ್ ಅಂಡ್ ವೆಲ್ತ್ ಇನಿಕ್ವಾಲಿಟಿ ಇನ್ ಇಂಡಿಯಾ, 1922-2023: ದಿ ರೈಸ್ ಆಫ್ ದಿ ಬಿಲಿಯನೇರ್ ರಾಜ್’ (ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ, 1922-2023: ಕೋಟ್ಯಾಧಿಪತಿಗಳ ರಾಜ್ಯ ಉದಯ) – ವರದಿಯು ಪ್ರಸ್ತುತ ಭಾರತದಲ್ಲಿನ ಆರ್ಥಿಕ ಅಸಮಾನತೆಯು ಹಿಂದಿನ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗಿಂತ ಅತ್ಯಂತ ಕೆಟ್ಟದಾಗಿದೆ ಎಂದು ಹೇಳಿದೆ.
ಭಾರತದಲ್ಲಿ ಸಂಪತ್ತಿನ ಅಂತರವು ರಾಜಕೀಯ ಪ್ಲ್ಯಾಶ್ ಪಾಯಿಂಟ್ ಆಗಿ ಹೊರಹೊಮ್ಮಿದೆ. ಮೋದಿಯವರ ಆಡಳಿತದಲ್ಲಿ ಹಿಂದುಳಿದ ಸಮುದಾಯಗಳು ಎಷ್ಟು ಸಂಕಷ್ಟಕ್ಕೆ ಒಳಗಾಗಿವೆ ಎಂಬುದನ್ನ ತೋರಿಸಲು ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಿದ್ದರೇ, ಜಾತಿ ಗಣತಿ ನಡೆಸಿ ಮಾಹಿತಿ ಬಹಿರಂಗ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಏರಿದೆ.
ಭಾರತೀಯ ದುರದೃಷ್ಟ ಎಂಬಂತೆ, ಮೋದಿ ಅವರ ಕಾಲದಲ್ಲಿ ಬ್ರಿಟಿಷರಿಗಿಂತ ಕೆಟ್ಟ ಆದಾಯದ ಅಸಮಾನತೆ ದೇಶದಲ್ಲಿ ಎದುರಾಗಿದೆ. 1930ರ ದಶಕದಲ್ಲಿ ಬ್ರಿಟಿಷರು ಭಾರತವನ್ನ ಆಳಿದ ಸಮಯದಲ್ಲಿ ಈ ದೇಶವನ್ನ ಬ್ರಿಟಿಷ್ ಸಾಮ್ರಾಜ್ಯದ ರತ್ನದ ಕಿರೀಟ ಎಂದು ಕರೆಯಲಾಗುತ್ತಿತ್ತು. 1% ಅತಿ ಶ್ರೀಮಂತರು ರಾಷ್ಟ್ರೀಯ ಆದಾಯದಲ್ಲಿ 20%ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದರು. ಎರಡನೇಯ ಮಹಾಯುದ್ಧದ ಸಮಯದಲ್ಲಿ ಆ ಪಾಲು ಕುಸಿಯಿತು. 1940ರ ದಶಕದಲ್ಲಿ 10%ಗೆ ಇಳಿಯಿತು. ಇನ್ನು 1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡಾಗ ಆ 1% ಶ್ರೀಮಂತರ ಪಾಲು 12.5% ಇತ್ತು. ಈ ಅಂಕೆ 1960ರವೆರಗೂ ಹಾಗೆಯೇ ಇತ್ತು. ಆ ನಂತರ, ಇಂದಿರಾಗಾಂಧಿ ಅವರು ಪ್ರಧಾನಿ ಆದ ಬಳಿಕ ಅವರು ಹಲವಾರು ಸಮಾಜವಾದಿ ಕ್ರಮಗಳನ್ನ ಕೈಗೊಂಡರು. ಬ್ಯಾಂಕ್ಗಳನ್ನ ರಾಷ್ಟ್ರೀಕರಣಗೊಳಿಸಿದರು. ಆದಾಯ ತೆರಿಗೆಯನ್ನು ಹೆಚ್ಚಿಸಿದರು. ‘ಗರೀಬಿ ಹಠಾವೋ’ ಬಡತನ ತೊಡೆದುಹಾಕು ಎಂಬ ಪಣವನ್ನು ತೊಟ್ಟಿದ್ದರು. ಇದೆಲ್ಲದರ ಪರಿಣಾಮವಾಗಿ 1982ರ ವೇಳೆಗೆ 1% ಶ್ರೀಮಂತರ ರಾಷ್ಟ್ರೀಯ ಆದಾಯ ಸುಮಾರು 6%ಗೆ ಕುಸಿಯಿತು.
ಆದರೆ, 1991ರಲ್ಲಿ ಭಾರತವು ತನ್ನ ಆರ್ಥಿಕತೆಯನ್ನ ಉದಾರೀಕರಣಗೊಳಿಸಿದಾಗ ಆದಾಯ ಅಸಮಾನತೆಯಲ್ಲಿ ಭಾರೀ ಬದಲಾವಣೆಗಳಾದವು. ಶತಮಾನದ ಅಂತ್ಯದ ವೇಳೆಗೆ, ಭಾರತದ 1% ಶ್ರೀಮಂತರ ಆದಾಯದ ಪಾಲು 15%ಗಿಂತ ಹೆಚ್ಚಾಗಿತ್ತು.
2014ರಲ್ಲಿ ಮೋದಿ ಅಧಿಕಾರಕ್ಕೆ ಬರುವ ವೇಳೆಗೆ ಆ ಪಾಲು 20%ಗೆ ಏರಿಕೆಯಾದರೆ, 2022-23ರ ವೇಳೆಗೆ 22.6%ಗೆ ಬಂದು ನಿಂತಿದೆ. ಅಂದರೆ, ಬ್ರಿಟಿಷ್ ಆಳ್ವಿಕೆಗೆ ಹೋಲಿಸಿದರೆ, ಬರೋಬ್ಬರಿ 12% ಅಧಿಕವಾಗಿದೆ. ಬ್ರಿಟಿಷ್ ಆಳ್ವಿಕೆಯಲ್ಲಿ ಶ್ರೀಮಂತರ ಪಾಲು 10% ಇತ್ತು.
ಇನ್ನು 2022ರಲ್ಲಿ ಭಾರತೀಯ ಜನಸಂಖ್ಯೆಯಲ್ಲಿ 1% ಇರುವ ಅತೀ ಶ್ರೀಮಂತರು ಭಾರತದಲ್ಲಿರುವ ಒಟ್ಟು ಸಂಪತ್ತಿನ 40.1%ರಷ್ಟು ಪಾಲನ್ನು ಹೊಂದಿದ್ದಾರೆ. ಒಟ್ಟು ರಾಷ್ಟ್ರೀಯ ಆದಾಯದಲ್ಲಿ 22.6%ರಷ್ಟನ್ನು ಆಕ್ರಮಿಸಿಕೊಂಡಿದ್ದಾರೆ. ಆದರೆ, ಹಿಂದುಳಿದ, ಬಡ, ತೀವ್ರ ಬಡತನದಲ್ಲಿರುವ 50% ಜನರು ಒಟ್ಟು ಸಂಪತ್ತಿನಲ್ಲಿ ಕೇವಲ 6.4% ಪಾಲನ್ನು ಮಾತ್ರ ಹೊಂದಿದ್ದಾರೆ. ಅವರು ಒಟ್ಟು ಆದಾಯದಲ್ಲಿ 15% ಗಳಿಕೆಯನ್ನು ಹೊಂದಿದ್ದಾರೆ. ಅಗ್ರ 10% ಜನರು ಒಟ್ಟು ಸಂಪತ್ತಿನ 65% ಪಾಲನ್ನು ಹೊಂದಿದ್ದಾರೆ. ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಅವರ ಪಾಲು 57.7% ಇದೆ. ಈ 10% ಜನರಿಗೆ ಹೋಲಿಸಿದರೆ, ಕೆಳಭಾಗದಲ್ಲಿರುವ 50% ಜನರ ಭವಿಷ್ಯವು ಅತ್ಯಂತ ಶೋಚನೀಯವಾಗಿದೆ.
ಭಾರತದ ತೆರಿಗೆ ವ್ಯವಸ್ಥೆಯು ಹೆಚ್ಚಾಗಿ ಜನರ ಆದಾಯವನ್ನು ಆಧರಿಸಿದೆ. ತೆರಿಗೆ ವ್ಯವಸ್ಥೆ ಹಿಂಜರಿತ ಕಾಣುತ್ತಿದೆ. ಇದರ ಪರಿಣಾಮ, ಶ್ರೀಮಂತರ ಮೇಲೆ ಸಂಪತ್ತಿನ ತೆರಿಗೆ ವಿಧಿಸಲು ಸರ್ಕಾರ ಮುಂದಾಗಬೇಕಾಗಿದೆ ಎಂದು ಸಂಶೋಧಕರು ವಾದಿಸುತ್ತಾರೆ. ದೇಶದಲ್ಲಿ ಅಸಮಾನತೆಯು ಹೆಚ್ಚುತ್ತಿದೆ. 2014ರಲ್ಲಿದ್ದಕ್ಕಿಂತ ಹೆಚ್ಚಾಗಿ ಜನರು ಈಗ ಕಷ್ಟಪಡುತ್ತಿದ್ದಾರೆ.
ಮೊದಲನೆಯದಾಗಿ, 1980ರ ದಶಕದಿಂದ ಭಾರತವು ಮಾರುಕಟ್ಟೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಪ್ರಾರಂಭಿಸಿದಾಗ ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ ತೀವ್ರವಾಗಿ ಏರಲು ಪ್ರಾರಂಭಿಸಿತು. ಉದಾಹರಣೆಗೆ, ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಕೆಳಗಿನ 50% ಜನರ ಸಂಪತ್ತಿನ ಪಾಲು 1982ರಲ್ಲಿ 23.6% ಇತ್ತು. ಈಗ 2022ರಲ್ಲಿ 15%ಕ್ಕೆ ಕುಸಿದಿದೆ. ಆದರೆ, ಇದೇ ಅವಧಿಯಲ್ಲಿ ಅಗ್ರ 10% ಶ್ರೀಮಂತರ ಆದಾಯದ ಪಾಲು 30.1% ರಿಂದ 57.7%ಗೆ ಏರಿದೆ. ಎರಡನೆಯದಾಗಿ, ಭಾರತದಲ್ಲಿನ ಆರ್ಥಿಕ ಬೆಳವಣಿಗೆಯು ಸಮಾಜವಾದಿ ದಶಕಗಳಲ್ಲಿ ನಿಶ್ಚಲವಾಗಿತ್ತು. 1990ರ ನಂತರ ಏರಿಕೆಯಾಗಲು ಪ್ರಾರಂಭಿಸಿತು. 1960 ಮತ್ತು 1990ರ ನಡುವೆ ಭಾರತದ ಆರ್ಥಿಕತೆಯು ಪ್ರತಿ ವರ್ಷ ಶೋಚನೀಯ 1.6% ರಷ್ಟು ಬೆಳವಣಿಗೆ ಕಾಣುತ್ತಿತ್ತು. ಆದರೆ, 1990 ಮತ್ತು 2022 ರ ನಡುವೆ ಪ್ರತಿ ವರ್ಷಕ್ಕೆ 3.6%ರಷ್ಟು ಏರಿಕೆಯಾಗುತ್ತಿದೆ ಎಂದು ಪಿಕೆಟ್ಟಿ ಅವರು ನಡೆಸಿದ ಅಧ್ಯಯನದ ವರದಿ ಹೇಳಿದೆ.
ಭಾರತದಲ್ಲಿ ಕಾಣುವ ವಿಪರೀತ ಸಂಪತ್ತಿನ ಅಸಮಾನತೆಗೆ ಮುಕ್ತ ಮಾರುಕಟ್ಟೆ ಕಾರಣವಲ್ಲ. ಬದಲಾಗಿ, ಈ ಅಗ್ರ 1% ಶ್ರೀಮಂತರು ಸರ್ಕಾರದಿಂದ ವಿಶೇಷ ಸವಲತ್ತುಗಳನ್ನು ಪಡೆಯುತ್ತಿರುವುದು ಕಾರಣ. ಸರ್ಕಾರದ ಸವಲತ್ತುಗಳು ಅವರನ್ನು ರಕ್ಷಿಸುತ್ತಿವೆ. ಪರಿಣಾಮ, ಆದಾಯದಲ್ಲಿ ಅವರ ಪಾಲನ್ನು ಗಣನೀಯವಾಗಿ ಕಡಿಮೆ ಮಾಡುವ ಮಾರುಕಟ್ಟೆ ಸ್ಪರ್ಧೆಯಿಂದ ಅವರು ಪಾರಾಗುತ್ತಿದ್ದಾರೆ. ಅಂತಹ ವಿಶೇಷ ಸವಲತ್ತುಗಳನ್ನು ತೊಡೆದುಹಾಕುವುದು ಮತ್ತು ಆರ್ಥಿಕತೆಯಲ್ಲಿ ಹೆಚ್ಚಿನ ಸ್ಪರ್ಧೆಗೆ ಅವಕಾಶ ನೀಡುವುದು ಮುಂದಿನ ಮಾರ್ಗವಾಗಿದೆ.
ಆರ್ಥಿಕತೆಯಲ್ಲಿ ಸ್ಪರ್ಧೆಯು ಸ್ವಾಭಾವಿಕವಾಗಿ ಅಗ್ರ 1% ಶ್ರೀಮಂತರ ಸಂಪತ್ತಿನ ಪಾಲನ್ನು ಕಡಿಮೆ ಮಾಡುತ್ತದೆ. ಎಲ್ಲರಿಗೂ ವ್ಯಾಪಕ ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ. ಏಕೆಂದರೆ, ಹೂಡಿಕೆದಾರರ ಸಂಖ್ಯೆಯು ಹೆಚ್ಚಿದಂತೆ ‘ಆರ್ಥಿಕ ಪೈ’ಗಳು ಎನ್ನಿಸಿಕೊಂಡವರ ಸಂಖ್ಯೆ ಹಿಗ್ಗುತ್ತದೆ. ಈ ಸ್ಪರ್ಧೆಯು ಯಾರೊಬ್ಬರೂ ಶಾಶ್ವತವಾಗಿ ಅಗ್ರಸ್ಥಾನದಲ್ಲಿ ಉಳಿಯುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
ಸಂಪತ್ತು ತೆರಿಗೆ ವಿಧಿಸುವುರಿಂದ ಸಾಮಾನ್ಯವಾಗಿ, ಹೂಡಿಕೆದಾರರು ತಮ್ಮ ನಿರೀಕ್ಷಿತ ತೆರಿಗೆಗಿಂತಲೂ ಹೆಚ್ಚಿನ ತೆರಿಗೆ ಪಾವತಿಸಬೇಕಾಗುತ್ತದೆ. ಆಗ, ಅವರು ಅದರಿಂದ ತಪ್ಪಿಸಿಕೊಳ್ಳಲು ಯಾವುದೇ ಉದ್ಯಮಗಳ ಮೇಲಿನ ಹೂಡಿಕೆಗಳಲ್ಲಿ ತಮ್ಮ ಬಂಡವಾಳದ ಮೊತ್ತವನ್ನು ಕಡಿಮೆ ಮಾಡುತ್ತಾರೆ. ಅದು ಕಡಿಮೆ ವೇತನವನ್ನು ಪಡೆಯುವ ಕಾರ್ಮಿಕರ ಆದಾಯದ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ, ಅಸಮಾನತೆಯ ವಿರುದ್ಧ ಹೋರಾಡಲು ಮತ್ತು ಬಡವರಿಗೆ ಸಹಾಯ ಮಾಡಲು ಸರಿಯಾದ ಮಾರ್ಗವೆಂದರೆ, ಶ್ರೀಮಂತರ ಸಂಪತ್ತಿನ ಮೇಲೆ ತೆರಿಗೆ ವಿಧಿಸುವುದು ಮಾತ್ರವಲ್ಲ, ಬಡವರಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ನೀಡಬೇಕಾಗಿದೆ.
ಮೊದಲನೆಯದಾಗಿ, ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಕಡೆಯ 50% ಜನರ ಪಾಲು ಕುಸಿತವಾಗಿದೆ ಎಂದರೆ, ಅವರ ನೈಜ ಆದಾಯದ ಮಟ್ಟಗಳು ಅಥವಾ ಜೀವನ ಮಟ್ಟದಲ್ಲಿ ಕುಸಿತವಾಗಿದೆ ಎಂದು ಅರ್ಥವಲ್ಲ ಎಂದು ಪಿಕೆಟ್ಟಿ ಹೇಳುತ್ತಾರೆ. ವಿಶ್ವ ಅಸಮಾನತೆ ಪ್ರಯೋಗಾಲಯದ ಮಾಹಿತಿಯು 1991 ಮತ್ತು 2022ರ ನಡುವೆ ಕಡೆಯ 50% ಜನರ ಒಟ್ಟು ನೈಜ ಆದಾಯವು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಸೂಚಿಸುತ್ತದೆ. ಅದೇ ಅವಧಿಯಲ್ಲಿ ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಅವರ ಪಾಲು 23.6% ರಿಂದ 15%ಕ್ಕೆ ಕುಸಿದಿದೆ ಎಂಬುದೂ ವಾಸ್ತವ. ಇದನ್ನು, ಬೇರೆ ರೀತಿಯಲ್ಲಿ ಹೇಳುವುದಾದರೆ, ಕಳೆದ 30 ವರ್ಷಗಳಲ್ಲಿ ಭಾರತದ ಒಟ್ಟು ಆರ್ಥಿಕ ಗಾತ್ರವು ತುಂಬಾ ಬೆಳೆದಿದೆ. ಒಟ್ಟು ರಾಷ್ಟ್ರೀಯ ಆದಾಯದಲ್ಲಿ 50% ಜನರು ಕಡಿಮೆ ಪಾಲನ್ನು ಹೊಂದಿದ್ದರೂ, ಅವರ ನೈಜ ಆದಾಯದಲ್ಲಿ ಏರಿಕೆಯಾಗಿದೆ. ಆದರೆ, ಇದೇ ವೇಳೆ, ಶ್ರೀಮಂತರ ಆದಾಯ ಬಹುಪಟ್ಟುಗಳಲ್ಲಿ ಹೆಚ್ಚಾಗಿದೆ.
ಎರಡನೆಯದಾಗಿ, 1980ರ ದಶಕದಿಂದ ಈಚೆಗೆ ಆದಾಯದ ಷೇರುಗಳಲ್ಲಿ ಕಡೆಯ 50% ಜನರು ಅಗ್ರ 1% ಮತ್ತು 10% ಶ್ರೀಮಂತರಷ್ಟು ಆರ್ಥಿಕ ಸ್ವಾತಂತ್ರ್ಯವನ್ನು ಅನುಭವಿಸಿಲ್ಲ ಎಂಬುದನ್ನು ವರದಿ ತೋರುತ್ತದೆ. ಮಾರುಕಟ್ಟೆ ಆರ್ಥಿಕತೆಯಲ್ಲಿ ಯಾವುದೇ ಗುಂಪು – ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಹೆಚ್ಚಿನ ಪಾಲು ಪಡೆಯಲು ಮಾರುಕಟ್ಟೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸುವ ಗುಂಪಿನ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸಬೇಕು. ಭಾರತದಲ್ಲಿ ಅಗ್ರ 1% ಶ್ರೀಮಂತರು ವಾರ್ಷಿಕವಾಗಿ ಸರಾಸರಿ 53 ಲಕ್ಷ ರೂ. ಗಳಿಸುತ್ತಾರೆ. ಆದರೆ, ಕಡೆಯ 50% ಜನರು ಕೇವಲ 71 ರೂ. ಮಾತ್ರ ಗಳಿಸುತ್ತಾರೆ ಎಂದು ಪಿಕೆಟ್ಟಿ ಅಂದಾಜಿಸಿದ್ದಾರೆ.
ಈ 50% ಜನರು ತಮ್ಮ ಆಸ್ತಿ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಬೇಕಾಗಿದೆ. ಅವರ ಆಸ್ತಿ ಸರ್ಕಾರದ ಮೂಲಕ ಕೈಗಾರಿಕೋದ್ಯಮಗಳ ಕೈ ಸೇರುವ ಆತಂಕವೂ ಇರುತ್ತದೆ. ಅಲ್ಲದೆ, ಅವರಿಗೆ ಜೀವನೋಪಾಯವನ್ನು ಮಾಡಲು ಕಷ್ಟವಾಗುತ್ತದೆ. ಅವರು ಆದಾಯದ ಏಣಿಯ ಮೇಲೆ ಏರಲು ಕೂಡ ಅವಕಾಶಗಳು ದೊರೆಯುವುದಿಲ್ಲ. ಆದ್ದರಿಂದ, ಭಾರತದ ಬಡವರಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯದ ಅಗತ್ಯವಿದೆಯೇ ಹೊರತು, ಹೆಚ್ಚಿನ ಆದಾಯ ಗಳಿಸುವವರ ಮೇಲೆ ಹೆಚ್ಚಿನ ತೆರಿಗೆಗಳಲ್ಲ ಎಂಬುದನ್ನು ಪಿಕೆಟ್ಟಿ ಪ್ರತಿಪಾದಿಸಿದ್ದಾರೆ.
ಮತ್ತೊಂಡೆದೆ, ಭಾರತದಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. 2024ರ 19ನೇ ಜಾಗತಿಕ ಹಸಿವು ಸೂಚ್ಯಂಕ ವರದಿಯ ಪ್ರಕಾರ, 127 ದೇಶಗಳಲ್ಲಿ ಗಂಭೀರ ಹಸಿವಿನ ಸಮಸ್ಯೆಗಳಿರುವ ರಾಷ್ಟ್ರಗಳ ಜತೆಗೆ ಭಾರತವೂ 105ನೇ ಸ್ಥಾನದಲ್ಲಿದೆ. ಭಾರತದ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಕ್ಕಿಂತ ಹಿಂದುಳಿದೆ. ಆದರೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕಿಂತ ಸ್ವಲ್ಪ ಮೇಲಿದೆ. ಅಲ್ಲದೇ, ಭಾರತದ ನೆರೆಯ ರಾಷ್ಟ್ರಗಳು ಹಸಿವಿಗೆ ಸಂಬಂಧಿಸಿದಂತೆ ಭಾರತಕ್ಕಿಂತ ಮೇಲಿರುವುದು ಭಾರತದ ಪಾಲಿಗೆ ಗಂಭೀರ ವಿಷಯವಾಗಬೇಕು ಎಂದು ಹೇಳಲಾಗಿದೆ.
ಮೋದಿ ಅವರ ಆಡಳಿತ ಅವಧಿಯಲ್ಲಿ ಬಡವರು ಇನ್ನು ಕೂಡ ಬಡವರಾಗಿಯೇ ಇದ್ದಾರೆ. ಅವರು ಕಂಡ ಚಿಕ್ಕ ಚಿಕ್ಕ ಕನಸುಗಳನ್ನ ಸಹ ಈಡೇರಿಸಿಕೊಳ್ಳದ ಪರಿಸ್ಥಿತಿಯಲ್ಲಿ ಬಡ ಭಾರತೀಯರು ಇದ್ದಾರೆ. ಒಂದೊತ್ತಿನ ಊಟಕ್ಕೂ ಕೂಡ ಜನರು ಪರಡಾಡುತ್ತಿದ್ದಾರೆ. ಇದರ ಬಗ್ಗೆ ಸ್ವತಃ ಜಾಗತಿಕ ಹಸಿವು ಸೂಚ್ಯಂಕ ತನ್ನ ವರದಿಯಲ್ಲಿ ತಿಳಿಸುತ್ತದೆ. ಮರ್ಸಿಡಿಸ್ ಬೆಂಜ್ ಕಾರು ತೆಗೆದುಕೊಳ್ಳುವವರಿಗೆ ಮೋದಿ ಅವರು ಶತಮೀರಿ ಪ್ರಯತ್ನ ಪಡುತ್ತಿದ್ದಾರೆ. ಅದೇ ಒಂದೊತ್ತಿನ ಊಟಕ್ಕೆ ಪರದಾಡುತ್ತಿರುವವರ ಬಗ್ಗೆ ಅವರಿಗೆ ಲೆಕ್ಕಕ್ಕೆ ಇಲ್ಲ. ಇದು ಆದಾಯ ಮತ್ತು ಸಂಪತ್ತಿನ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಮಿತಿಮೀರಿದ ಯತ್ನಾಳ ವರ್ತನೆ; ಕೋಮುದ್ವೇಷ ಭಾಷಣಕ್ಕೆ ಇಲ್ಲವೇ ಬ್ರೇಕ್?!
ಕಾರ್ಪೊರೇಟ್ ತೆರಿಗೆ ದರಗಳನ್ನು 30% ನಿಂದ 25.17% ಕ್ಕೆ ಎಲ್ಲಾ ಸೆಸ್ ಕಡಿತಗೊಳಿಸಲಾಯಿತು. ಈ ತೆರಿಗೆ ಕಡಿತ ವಾಸ್ತವವಾಗಿ ತೆರಿಗೆ ನಷ್ಟವನ್ನ ಸೂಚಿಸುತ್ತದೆ. ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟವಾಗುತ್ತಿದೆ ಎಂದು ಡಿಸೇಲ್, ಪೆಟ್ರೋಲ್ ದರವನ್ನ ಹೆಚ್ಚಳ ಮಾಡಿದ್ದರು. ಕೋವಿಡ್ ಸಮಯದಲ್ಲಿ ಇಡೀ ದೇಶವೇ ಸ್ತಭ್ದವಾಗಿತ್ತು. ಎಲ್ಲ ವ್ಯಾಪಾರ ವಹಿವಾಟು ಬಂದಾಗಿತ್ತು. ಜನರು ಊಟಕ್ಕಾಗಿಯೂ ಕೂಡ ಈ ಸಮಯದಲ್ಲಿ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಈ ಸಮಯದಲ್ಲಿ ಅಂದರೆ, 2021-22 ರಲ್ಲಿ ಜಿಡಿಪಿ ದರ 8.7% ಕುಸಿದಿತ್ತು. ಈ ಸಮಯದಲ್ಲಿ ಅದಾನಿ – ಅಂಬಾನಿ ಪ್ರಾಪರ್ಟಿ ವ್ಯಾಲ್ಯೂ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿತ್ತು. ಇದೇ ಸಮಯದಲ್ಲಿ ದೇಶದಲ್ಲಿ 50 ಹೊಸ ಬಿಲಿಯನರ್ಗಳು ಹುಟ್ಟಿಕೊಂಡಿದ್ದರು. ಮೋದಿ ಅವರು ರೂಪಿಸಿದ್ದ ಮೂರು ದೊಡ್ಡ ನೀತಿಗಳಾದ ನೋಟು ಅಮಾನ್ಯೀಕರಣ, ಜಿಎಸ್ಟಿ ಹಾಗೂ ಲಾಕ್ಡೌನ್ ಬಡವರನ್ನ ಹೆಚ್ಚು ಭಾಧಿಸುತ್ತಿದೆ.
ನಿರುದ್ಯೋಗ, ಬೆಲೆ ಏರಿಕೆ ಜನರಿಗೆ ದೊಡ್ಡ ಸಂಕಟವಾಗಿದೆ. ಅಲ್ಲದೇ, ಜೀವನ ಸಾಗಿಸಲು ಕೆಲವರು ಸ್ಟ್ರಗಲ್ ಮಾಡಿ ತನ್ನ ಜೀವನ ನಡೆಸಲು ಅವಿರತವಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಕೆಲಸಗಳೇ ಸಿಗದ ಇಂತಹ ಸಮಯದಲ್ಲಿ ಸಿಕ್ಕ ಉದ್ಯೋಗವನ್ನ ಬಿಡುವುದಕ್ಕೂ ಆಗದೆ, ಹಲವು ಯುವಕರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಸುಮಾರು 90% ಭಾರತೀಯ ಉದ್ಯೋಗಿಗಳು ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ. ಇದರಲ್ಲಿ 40% ಕ್ಕಿಂತ ಹೆಚ್ಚು ಜನರು ದುಃಖಿತರಾಗಿದ್ದಾರೆ ಎಂದು 2024ರ ಗ್ಯಾಲಪ್ ಸ್ಟೇಟ್ ಆಫ್ ದಿ ಗ್ಲೋಬಲ್ ವರ್ಕ್ ಪ್ಲೇಸ್ ವರದಿ ತಿಳಿಸಿದೆ. ಜನರು ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ತಿನ್ನುವುದಕ್ಕೆ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿಗೆ ಯಾರು ಕಾರಣ ಎಂಬುದನ್ನ ನೀವೆ ಊಹೆ ಮಾಡಿಕೊಳ್ಳಿ…




