ಬಂಗಾಳಕೊಲ್ಲಿಯಲ್ಲಿ ಬಿರುಸು ಪಡೆದುಕೊಂಡಿರುವ ‘ಮೊಂತಾ’ ಚಂಡಮಾರುತವು ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಿಂದ ಆಂಧ್ರಪ್ರದೇಶದ ಕರಾವಳಿಯತ್ತ ಚಲಿಸುತ್ತಿದೆ. ಮಂಗಳವಾರ ಸಂಜೆ ವೇಳೆಗೆ ಆಂಧ್ರದಲ್ಲಿ ಭಾರೀ ಮಳೆಯಾಗಲಿದ್ದು, ಭೂಕುಸಿತಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದಿಂದ ಆಂಧ್ರದ ಮಚಿಲಿಪಟ್ನಂ ಮತ್ತು ಕಳಿಂಗಪಟ್ಟಣಂ ಪ್ರದೇಶವು ಹೆಚ್ಚು ಅಪಾಯಗಳನ್ನು ಎದುಸಿರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ.
ಚಂಡಮಾರುತ ಪರಿಚಲನೆ ಮತ್ತು ಪರಿಣಾಮಗಳ 10 ಪ್ರಮುಖ ಅಂಶಗಳು ಹೀಗಿವೆ;
- ಮಂಗಳವಾರ ಬೆಳಿಗ್ಗೆ 9:30 ರ ಸುಮಾರಿಗೆ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಪರಿಚಲನೆಗೊಂಡಿರುವ ಚಂಡಮಾರುತವು ಉತ್ತರದಿಂದ ವಾಯುವ್ಯಕ್ಕೆ 15 ಕಿ.ಮೀ ವೇಗದಲ್ಲಿ ಚಲಿಸಿದೆ.
- ಮೊಂತಾ ಚಂಡಮಾರುತವು ಆಂಧ್ರಪ್ರದೇಶಕ್ಕೆ ಗರಿಷ್ಠ 90-100 ಕಿ.ಮೀ ವೇಗದಲ್ಲಿ ಅಪ್ಪಳಿಸುವ ನಿರೀಕ್ಷೆಯಿದೆ. ಆಂಧ್ರದ ಇಡೀ ಕರಾವಳಿ ಪ್ರದೇಶವು ಎಚ್ಚರಿಕೆಯಿಂದ ಇರಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ.
- ಮಂಗಳವಾರ ಸಂಜೆ ಮತ್ತು ರಾತ್ರಿ ಕಾಕಿನಾಡ, ಮಚಲಿಪಟ್ನಂ ಮತ್ತು ಕಳಿಂಗಪಟ್ಟಣಂ ಪ್ರದೇಶದಲ್ಲಿ ಭಾರೀ ಮಳೆ ಸುರಿಯಲಿದ್ದು, ಭೂಕುಸಿತದ ಸಂಭವವಿದೆ. ರಾತ್ರಿಯ ವೇಳೆಗೆ ಚಂಡಮಾರುತವು ಗಂಟೆಗೆ 110 ಕಿ.ಮೀ.ನಷ್ಟು ವೇಗ ಪಡೆದುಕೊಳ್ಳಲಿದೆ.
- ‘ಮೊಂತ’ ಚಂಡಮಾರುತವು ಆಂಧ್ರ ಕರಾವಳಿಯನ್ನು ಅಪ್ಪಳಿಸಿದ ನಂತರ, ಸ್ವಲ್ಪಮಟ್ಟಿಗೆ ನಿಧಾನಗೊಂಡು ಒಡಿಶಾ ಕಡೆಗೆ ಚಲಿಸಲಿದೆ.
- ಚಂಡಮಾರುತದಿಂದ ಆಂಧ್ರಪ್ರದೇಶ, ಒಡಿಶಾ ಹಾಗೂ ಛತ್ತೀಸ್ಗಢ ರಾಜ್ಯಗಳು ‘ಹೆಚ್ಚು ಪರಿಣಾಮ ಎದುರಿಸಲಿವೆ. ಅಕ್ಟೋಬರ್ 28 ರಿಂದ 30ರವರೆಗೆ ಆಂಧ್ರಪ್ರದೇಶ, ಒಡಿಶಾ, ಛತ್ತೀಸ್ಗಢ ಹಾಗೂ ತಮಿಳುನಾಡಿನಲ್ಲಿ ಭಾರೀ ಮಳೆಯಾಗಲಿದೆ.
- ಮುಂದಿನ ಎರಡು ದಿನಗಳವರೆಗೆ ದಕ್ಷಿಣ ಮಧ್ಯ ರೈಲ್ವೆ ಮತ್ತು ಪೂರ್ವ ಕರಾವಳಿ ರೈಲ್ವೆ 100ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿವೆ.
- ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ಸಹಕಾರ, ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
- ಆಂಧ್ರಪ್ರದೇಶ, ಒಡಿಶಾ, ಪುದುಚೇರಿ, ತಮಿಳುನಾಡು ಹಾಗೂ ಛತ್ತೀಸ್ಗಢಗಳಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 22 ತಂಡಗಳನ್ನು ನಿಯೋಜಿಸಿದೆ.
- ಜನರು ಮನೆಯೊಳಗೆ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಕರಾವಳಿ ಪ್ರದೇಶದ ಜನರು ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಲಾಗಿದೆ. ಸಮುದ್ರ ಪ್ರಕ್ಷುಬ್ಧವಾಗುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಪ್ರವಾಸಿಗರಿಗೆ ಎಲ್ಲ ಕಡಲತೀರಗಳನ್ನು ಮುಚ್ಚಲಾಗಿದೆ.
- ಒಡಿಶಾ ಸರ್ಕಾರವು ಸಂಭವನೀಯ ಹೆಚ್ಚು ಪ್ರವಾಹ ಪೀಡಿತ ಸ್ಥಳಗಳಿಂದ ಜನರನ್ನು ಸ್ಥಳಾಂತರಿಸಿದೆ. ಎಂಟು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದೆ.



