2016ರಿಂದ ಹಾಲಿ ನ್ಯಾಯಾಧೀಶರ ವಿರುದ್ಧ 8,600ಕ್ಕೂ ಹೆಚ್ಚು ದೂರುಗಳು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿಗೆ ಬಂದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಶುಕ್ರವಾರ, ಲೋಕಸಭೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, “2016 ಮತ್ತು 2025ರ ನಡುವೆ ಹಾಲಿ ನ್ಯಾಯಾಧೀಶರ ವಿರುದ್ಧ 8,639 ದೂರುಗಳು ಬಂದಿವೆ. ಈ ಪೈಕಿ, 2024ರಲ್ಲಿಯೇ ಹಾಲಿ ನ್ಯಾಯಾಧೀಶರ ವಿರುದ್ಧ ಸಿಜೆಐ ಕಚೇರಿಗೆ 1,170 ದೂರುಗಳು ಬಂದಿವೆ” ಎಂದು ಹೇಳಿದ್ದಾರೆ.
ಹೈಕೋರ್ಟ್ಗಳ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಬಂದ ದೂರುಗಳನ್ನು ನ್ಯಾಯಾಂಗವು ‘ಆಂತರಿಕ ಕಾರ್ಯವಿಧಾನ’ದ ಮೂಲಕ ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
1997ರ ಮೇ ತಿಂಗಳಿನಲ್ಲಿ, ಸುಪ್ರೀಂ ಕೋರ್ಟ್ ಎರಡು ನಿರ್ಣಯಗಳನ್ನು ಅಂಗೀಕರಿಸಿತು – 1. ‘ನ್ಯಾಯಾಂಗ ಜೀವನದ ಮೌಲ್ಯಗಳ ಮರುಸ್ಥಾಪನೆ’; ಇದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು ಗಮನಿಸಬೇಕಾದ ಮತ್ತು ಅನುಸರಿಸಬೇಕಾದ ಕೆಲವು ನ್ಯಾಯಾಂಗ ಮಾನದಂಡಗಳು ಮತ್ತು ತತ್ವಗಳನ್ನು ನಿಗದಿಪಡಿಸುತ್ತದೆ. 2. ‘ಇನ್-ಹೌಸ್ ಪ್ರೊಸೀಜರ್’; ಇದು ನ್ಯಾಯಾಂಗ ಜೀವನದ ಮೌಲ್ಯಗಳ ಮರುಸ್ಥಾಪನೆ ಸೇರಿದಂತೆ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಮೌಲ್ಯಗಳನ್ನು ಅನುಸರಿಸದ ನ್ಯಾಯಾಧೀಶರ ವಿರುದ್ಧ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಈ ನಿರ್ಣಯಗಳ ಅಡಿಯಲ್ಲಿ ಸಿಜೆಐ ಅವರು ಎಸ್ಸಿ ನ್ಯಾಯಾಧೀಶರು ಮತ್ತು ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ದೂರುಗಳನ್ನು ಸ್ವೀಕರಿಸಬಹುದು. ಅದೇ ರೀತಿ, ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳು ಹೈಕೋರ್ಟ್ ನ್ಯಾಯಾಧೀಶರ ನಡವಳಿಕೆಯ ವಿರುದ್ಧ ದೂರುಗಳನ್ನು ಸ್ವೀಕರಿಸಬಹುದು.




