ಮುಂಬೈನ ಉಪನಗರ ಮುಲುಂಡ್ನಲ್ಲಿರುವ ಆರು ಅಂತಸ್ತಿನ ವಾಣಿಜ್ಯ ಮಳಿಗೆ ಕಟ್ಟಡದಲ್ಲಿ ಮಂಗಳವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 50 ಮಂದಿಯನ್ನು ರಕ್ಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಬಿಎಸ್ ರಸ್ತೆಯಲ್ಲಿರುವ ʼಏವಿಯರ್ ಕಾರ್ಪೊರೇಟ್ ಪಾರ್ಕ್ʼ ಕಟ್ಟಡದ ಆರನೇ ಮಹಡಿಯಲ್ಲಿ ಇಂದು ಬೆಳಿಗ್ಗೆ 9.25ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆರನೇ ಮಹಡಿಯಲ್ಲಿ ಹೊಗೆ ಆವರಿಸಿದ್ದು, ವಿವಿಧ ಮಹಡಿಗಳಲ್ಲಿ ಸಿಲುಕಿದ್ದವರನ್ನು ಮುಂಬೈ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
“ಘಟನೆಯಲ್ಲಿ ಸಿಲುಕಿದ್ದವರನ್ನು ಮೆಟ್ಟಿಲುಗಳ ಮೂಲಕ ಮತ್ತು ವಿದ್ಯುತ್ ಚಾಲಿತ ಏಣಿ(ಟರ್ನ್ಟೇಬಲ್ ಲ್ಯಾಡರ್)ಗಳ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿರುವುದು ಕಂಡುಬಂದಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ” ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
“ವಾಣಿಜ್ಯ ಮಳಿಗೆಗಳ ಕಟ್ಟಡದ ಸುಮಾರು 1,000 ಚದರ ಅಡಿ ಪ್ರದೇಶದಲ್ಲಿ ವೈರಿಂಗ್, ವಿದ್ಯುತ್ ಪರಿಕರಗಳು, ಎಸಿ ಘಟಕಗಳು, ಮರದ ಪೀಠೋಪಕರಣಗಳು ಮತ್ತು ಕಚೇರಿ ದಾಖಲೆಗಳಿಗೆ ಬೆಂಕಿ ತಗುಲಿದ್ದು, ವಸ್ತುಗಳು ಹಾನಿಯಾಗಿವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಜೈಲಿನಿಂದಲೇ ಅರವಿಂದ್ ಕೇಜ್ರಿವಾಲ್ ಅವರ 2ನೇ ಆದೇಶ
“ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ನಾಲ್ಕು ಅಗ್ನಿಶಾಮಕ ವಾಹನಗಳು, ಮೂರು ಜಂಬೋ ಟ್ಯಾಂಕರ್ಗಳು, ಎರಡು ಟರ್ನ್ ಟೇಬಲ್ ಏಣಿಗಳು ಮತ್ತು ಇತರ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ” ಎಂದು ಹೇಳಿದರು.
ಮುಂಬೈ ಪೊಲೀಸರು, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮತ್ತು ಇತರ ಏಜೆನ್ಸಿಗಳ ಸಿಬ್ಬಂದಿಯನ್ನು ಸ್ಥಳದಲ್ಲಿ ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು.





