ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (ಟಿಐಎಸ್ಎಸ್) ವಿದ್ಯಾರ್ಥಿಗಳು, ಸಾಮಾಜಿಕ ಹೋರಾಟಗಾರ ಪ್ರೊಫೆಸರ್ ಜಿ ಎನ್ ಸಾಯಿಬಾಬಾ ಅವರ ನಿಧನದ ಮೊದಲ ವರ್ಷದ ಸ್ಮರಣೆಗಾಗಿ ಅಕ್ಟೋಬರ್ 12ರಂದು ಕ್ಯಾಂಪಸ್ನಲ್ಲಿ ಹಾಜರಾಗಿದ್ದ ಸಭೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸೋಮವಾರ (ಅಕ್ಟೋಬರ್ 13) ಕೆಲವು ವಿದ್ಯಾರ್ಥಿಗಳನ್ನು ಬಂಧಿಸಿ, ಭಾರತೀಯ ನ್ಯಾಯ ಸಂಹಿತೆಯ ಕೆಲವು ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳು ಕೇವಲ ಕ್ಯಾಂಪಸ್ನಲ್ಲಿ ಒಟ್ಟಿಗೆ ಸೇರಿ, ಸಾಯಿಬಾಬಾ ಅವರ ಭಾವಚಿತ್ರದ ಪೋಸ್ಟರ್ಗಳನ್ನು ಹಿಡಿದು, ಕೆಲವು ಮೇಣದ ಬತ್ತಿಗಳನ್ನು ಬೆಳಗಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಆದರೆ, ಪೊಲೀಸರು “ರಾಷ್ಟ್ರೀಯ ಹಿತಾಸಕ್ತಿಗೆ ಭಂಗ ತರುವಿಕೆ”, ಗುಂಪುಗಳ ನಡುವೆ ದ್ವೇಷವನ್ನು ಹುಟ್ಟುಹಾಕುವುದು ಮತ್ತು ಕಾನೂನುಬಾಹಿರ ಸಭೆಯ ಆರೋಪದಡಿಯಲ್ಲಿ ಕನಿಷ್ಠ ಹತ್ತು ವಿದ್ಯಾರ್ಥಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂಗಳನ್ನು ಜಾರಿಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟಿಐಎಎಸ್ಎಸ್ ಆಡಳಿತವು ವಿದ್ಯಾರ್ಥಿಗಳು ಯಾವುದೇ ಅಧಿಕೃತ ಅನುಮತಿ ಪಡೆಯದೇ ಕ್ಯಾಂಪಸ್ನಲ್ಲಿ ಸಭೆ ಆಯೋಜಿಸಿದ್ದರೆಂದು ಹೇಳಿದೆ. ಅದರೊಂದಿಗೆ, ಕೆಲವು ವಿದ್ಯಾರ್ಥಿಗಳು ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಪರ ಘೋಷಣೆಗಳನ್ನು ಕೂಗಿದ್ದಾರೆಂದು ಆರೋಪಿಸಲಾಗಿದೆ. ಆದರೆ ವಿದ್ಯಾರ್ಥಿಗಳು ಈ ಆರೋಪವನ್ನು ಸಂಪೂರ್ಣ ತಳ್ಳಿಹಾಕಿದ್ದಾರೆ.
ಆದರೆ, ನಂತರ ಬಲಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಡೆಮಾಕ್ರಟಿಕ್ ಸೆಕ್ಯುಲರ್ ಸ್ಟುಡೆಂಟ್ಸ್ ಫೋರಂ ಸದಸ್ಯರು ಸ್ಥಳಕ್ಕೆ ಬಂದು ಸಾಯಿ ಬಾಬಾ ಅವರ ಚಿತ್ರಗಳನ್ನು ಹರಿದು ಹಾಕಿದರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕೆಲವರು ಈ ಘಟನೆಗಳ ಫೋಟೋಗಳನ್ನು ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ಮುಂಬೈ ಪೊಲೀಸರು ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಟ್ಯಾಗ್ ಮಾಡಿದ್ದರು. ಇದಾದ ಬಳಿಕ ಟ್ರೊಂಬೇ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಹಲವು ವಾಹನಗಳಲ್ಲಿ ಕ್ಯಾಂಪಸ್ಗೆ ಆಗಮಿಸಿ, ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ವಿದ್ಯಾರ್ಥಿಗಳ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪಟೇಲರನ್ನು ಹೈಜಾಕ್ ಮಾಡುವುದು ಆರ್ಎಸ್ಎಸ್ಗೆ ಸುಲಭವಲ್ಲ!
ಈ ಕಾರ್ಯಕ್ರಮದ ಬಗ್ಗೆ ಟಿಐಎಸ್ಎಸ್ ಆಡಳಿತಕ್ಕೆ ಸಾಮಾಜಿಕ ಮಾಧ್ಯಮದ ಪೋಸ್ಟ್ಗಳ ಮೂಲಕ ತಿಳಿದುಬಂದಿದೆ. ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಅಥವಾ ಪೊಲೀಸರಿಂದ ಅಗತ್ಯ ಅನುಮತಿಗಳನ್ನು ಪಡೆಯದೇ ಸಭೆಯನ್ನು ಆಯೋಜಿಸಿದ್ದಾರೆ ಎಂದು ಆಡಳಿತ ಮಂಡಳಿ ಆರೋಪಿಸಿದೆ. ಅಲ್ಲದೆ, ವಿದ್ಯಾರ್ಥಿಗಳು 2020ರ ದೆಹಲಿ ಗಲಭೆ ಪ್ರಕರಣದಲ್ಲಿ ದೀರ್ಘಕಾಲದ ಕಾರಾಗೃಹವಾಸ ಅನುಭವಿಸಿರುವ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ಗೆ ಬೆಂಬಲವಾಗಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿಯು ಆರೋಪಿಸಿದೆ. ಆದರೆ, ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಯಾವುದೇ ಘೋಷಣೆಗಳನ್ನು ಕೂಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಂಧಿತರಲ್ಲಿ ಕೆಲವರಿಗೆ ಪೊಲೀಸರು ವಾರಂಟ್ ನೀಡಿದರೆಂದು ತಿಳಿದುಬಂದಿದ್ದು, ಅದು ಬಂಧನ ಅಥವಾ ಶೋಧ ವಾರಂಟ್ ಎನ್ನುವುದು ಸ್ಪಷ್ಟವಾಗಿಲ್ಲ. ಬಂಧಿತ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಹಾಸ್ಟೆಲ್ ಹೊರಗೆ ಸೇರಿದ್ದ ಇತರ ವಿದ್ಯಾರ್ಥಿಗಳ ವಿವರಗಳನ್ನೂ ಪೊಲೀಸರು ದಾಖಲಿಸಿದ್ದಾರೆ.
ಶೇ. 90 ಕ್ಕಿಂತ ಹೆಚ್ಚು ಅಂಗವೈಕಲ್ಯದಿಂದ ಬಳಲುತ್ತಿದ್ದ ಮತ್ತು ವೀಲ್ಚೇರ್ಗೆ ಸೀಮಿತರಾಗಿದ್ದ ಸಾಮಾಜಿಕ ಹೋರಾಟಗಾರರಾದ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಜೊತೆಗಿನ ಆರೋಪದ ಮೇಲೆ ಸುಮಾರು ಒಂದು ದಶಕದವರೆಗೆ ಕಾರಾಗೃಹದಲ್ಲಿದ್ದರು. ಆದಾಗ್ಯೂ, ಕಳೆದ ವರ್ಷದ ಆರಂಭದಲ್ಲಿ ಅವರ ಮೇಲಿನ ಎಲ್ಲ ಆರೋಪಗಳಿಂದ ಅವರು ಖುಲಾಸೆಗೊಂಡಿದ್ದರು. ಆದರೆ, ಕೆಲವೇ ತಿಂಗಳುಗಳಲ್ಲಿ ಆರೋಗ್ಯವು ಮತ್ತಷ್ಟು ಕ್ಷೀಣಿಸಿ, ಕಳೆದ ವರ್ಷ ಅಕ್ಟೋಬರ್ 12ರಂದು ಅವರು ನಿಧನರಾದರು.
GN Saibaba was accused of helping Naxals.
— Harshil (હર્ષિલ) (@MehHarshil) October 12, 2025
His death anniversary being celebrated in TISS without any approval.
What Mumbai Police and TISS VC Badri Narayan Tiwari doing?
Hope CM Dev Fadnavis shows some action now! @MumbaiPolice @Dev_Fadnavis pic.twitter.com/ItFJJxfJBN





