ಮುಂಬೈ ಮೂಲದ ‘ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್’ ಆನ್ವಿ ಕಾಮ್ದಾರ್ (27) ರೀಲ್ಸ್ ಮಾಡುವ ವೇಳೆ ಸುಮಾರು 300 ಅಡಿ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ @theglocaljournal ಎಂಬ ಹ್ಯಾಂಡಲ್ ಮೂಲಕ ತನ್ನ ಪ್ರಯಾಣದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಚಾರ್ಟರ್ಡ್ ಅಕೌಂಟೆಂಟ್ ಆನ್ವಿ ಕಾಮ್ದಾರ್ ತನ್ನ ಸ್ನೇಹಿತರೊಂದಿಗೆ ಕುಂಭೆ ಜಲಪಾತಕ್ಕೆ ಹೋಗಿದ್ದು ಅಲ್ಲಿ ಜಲಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಕಾಮ್ದಾರ್ ತನ್ನ 7 ಸ್ನೇಹಿತರ ತಂಡದೊಂದಿಗೆ ಜುಲೈ 16ರಂದು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪ್ರಸಿದ್ಧ ಕುಂಭೆ ಜಲಪಾತಕ್ಕೆ ವಿಹಾರಕ್ಕೆ ತೆರಳಿದ್ದರು. ವಿಡಿಯೋ ಚಿತ್ರೀಕರಣ ಮಾಡುವಾಗ ಕಾಮ್ದಾರ್ ಸುಮಾರು 300 ಅಡಿ ಕಮರಿಗೆ ಜಾರಿ ಬಿದ್ದಿದ್ದಾರೆ ಎಂದು ಮಂಗಾವ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ತ್ವರಿತವಾಗಿ ರಕ್ಷಣಾ ಕಾರ್ಯವನ್ನು ಆರಂಭಿಸಿದರು. ರಕ್ಷಣಾ ತಂಡಕ್ಕೆ ಕೋಸ್ಟ್ ಗಾರ್ಡ್, ಕೋಲಾಡ್ ರಕ್ಷಣಾ ತಂಡ ಮತ್ತು ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಳಿಯ ಸಿಬ್ಬಂದಿಗಳು ಬೆಂಬಲ ನೀಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಮುಂಬೈ: ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ 5 ಮಂದಿ
“ನಾವು ಸ್ಥಳವನ್ನು ತಲುಪುವಷ್ಟರಲ್ಲಿ ಯುವತಿ ಸುಮಾರು 300-350 ಅಡಿ ಕೆಳಗೆ ಬಿದ್ದಿದ್ದಾಳೆ ಎಂಬುವುದು ನಮಗೆ ತಿಳಿಯಿತು. ಅವಳನ್ನು ನಾವು ಪತ್ತೆ ಹಚ್ಚಿದ ಬಳಿಕವೂ ಆಕೆಗೆ ಅಧಿಕ ಗಾಯಗಳಾಗಿದ್ದರಿಂದ ಮತ್ತು ಜೋರಾಗಿ ಮಳೆಯಾಗುತ್ತಿದ್ದರಿಂದ ಅವಳನ್ನು ಎಬ್ಬಿಸಲು ಕಷ್ಟವಾಯಿತು. ಆದ್ದರಿಂದ ಲಂಬವಾದ ರಾಟೆ ಬಳಸಿ ಅವಳನ್ನು ಹೊರಕರೆತರಲು ನಾವು ನಿರ್ಧರಿಸಿದೆವು” ಅಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ.
ಜಲಪಾತದಡಿ ದೊಡ್ಡ ಕಲ್ಲುಗಳು ಬೀಳುತ್ತಲೇ ಇದ್ದ ಕಾರಣ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಜಟಿಲವಾಗಿದೆ ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಮತ್ತೊಬ್ಬ ವ್ಯಕ್ತಿ ತಿಳಿಸಿದ್ದಾರೆ. ಆರು ಗಂಟೆಗಳ ಕಾರ್ಯಾಚರಣೆಯ ನಂತರ ಕಾಮ್ದಾರ್ ಅವರನ್ನು ಜಲಪಾತದಿಂದ ಮೇಲಕ್ಕೆತ್ತಲಾಗಿದೆ.
Aanvi Kamdar, 27-year-old travel influencer, died after she fell into a gorge while making a video in Maharashtra’s Raigad. She slipped in an attempt to capture the famous Kumbhe waterfall.
Reports suggest it was raining in the area while she was out with her friends to film… pic.twitter.com/UIC0l4lhx0
— Vani Mehrotra (@vani_mehrotra) July 18, 2024
ಆನ್ವಿ ಕಾಮ್ದಾರ್ರನ್ನು ರಕ್ಷಿಸಿದವರು ಸಮೀಪದ ಮಂಗಾವ್ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಆದರೆ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆನ್ವಿ ಕಾಮ್ದಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಮಳೆಗಾಲದಲ್ಲಿ ಜಲಪಾತಗಳಿಗೆ ಭೇಟಿ ನೀಡುವ ಪ್ರವಾಸಿಗರು ಹೆಚ್ಚಿನ ಜಾಗರೂಕರಾಗಿರಲು ಅಧಿಕಾರಿಗಳು ಒತ್ತಾಯಿಸಿದ್ದಾರೆ.




