ಕೇಂದ್ರ ಗೃಹ ಇಲಾಖೆಯ ಮನವಿಯ ಮೇರೆಗೆ ರೈತರ ಹೋರಾಟದಲ್ಲಿ ಭಾಗಿಯಾದ 177 ಖಾತೆಗಳ ತಾತ್ಕಾಲಿಕ ಸ್ಥಗಿತಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್ ಗೆ ಆದೇಶಿಸಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ ಇದು ಭಾರತದ ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ತಿಳಿಸಿದ್ದಾರೆ.
“ಕೇಂದ್ರ ಸರ್ಕಾರ ‘ಎಕ್ಸ್’ ಸಂಸ್ಥೆಗೆ ಗಮನಾರ್ಹ ದಂಡಗಳು ಹಾಗೂ ಸೆರೆವಾಸದೊಂದಿಗೆ ಸಂಭಾವ್ಯ ದಂಡಗಳನ್ನು ಒಳಗೊಂಡು ನಿರ್ದಿಷ್ಟ ಖಾತೆಗಳು ಮತ್ತು ಪೋಸ್ಟ್ಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲು ಆದೇಶಿಸಿತ್ತು. ಆದೇಶದ ಅನುಸರಣೆಯೊಂದಿಗೆ ನಾವು ಭಾರತದಲ್ಲಿ ಮಾತ್ರ ಈ ಖಾತೆಗಳು ಮತ್ತು ಪೋಸ್ಟ್ಗಳನ್ನು ತಡೆ ಹಿಡಿಯುತ್ತೇವೆ. ಆದಾಗ್ಯೂ ಈ ರೀತಿಯ ಕ್ರಮಗಳನ್ನು ನಾವು ಒಪ್ಪಿಕೊಳ್ಳುವುದಿಲ್ಲ.ಈ ಪೋಸ್ಟ್ಗಳಿಗ ಅಭಿವ್ಯಕ್ತ ಸ್ವಾತಂತ್ರವನ್ನು ವಿಸ್ತರಿಸಲು ಬಯಸುತ್ತೇವೆ” ಎಂದು ಎಕ್ಸ್ ಖಾತೆಯ ಜಾಗತಿಕ ಸರ್ಕಾರಿ ವ್ಯವಹಾರಗಳ ಸಂಸ್ಥೆ ಪ್ರತಿಕ್ರಿಯೆ ನೀಡಿತ್ತು.
ಈ ಸುದ್ದಿ ಓದಿದ್ದೀರಾ? ರೈತ ಹೋರಾಟ | ಖಾತೆಗಳು, ಪೋಸ್ಟ್ಗಳನ್ನು ತಡೆಹಿಡಿಯಲು ಕೇಂದ್ರ ಸರ್ಕಾರ ಆದೇಶಿಸಿದೆ: ಎಕ್ಸ್
“ಕಾನೂನು ನಿರ್ಬಂಧಗಳ ಕಾರಣದಿಂದ ನಾವು ಸರ್ಕಾರಿ ಆದೇಶವನ್ನು ಪ್ರಕಟಿಸಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಸಾರ್ವಜನಿಕಗೊಳಿಸುವುದು ಪಾರದರ್ಶಕತೆಯ ಅಗತ್ಯತೆ ಎಂದು ನಾವು ನಂಬುತ್ತೇವೆ. ಈ ರೀತಿಯ ಬಹಿರಂಗಗೊಳಿಸದಿರುವುದು ಪಾರದರ್ಶಕತೆ ಕೊರತೆ ಹಾಗೂ ಅನಿಯಂತ್ರಿತ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣವಾಗಬಹುದು”ಎಂದು ಎಕ್ಸ್ ಖಾತೆಯಲ್ಲಿ ತಿಳಿಸಲಾಗಿತ್ತು.
ಕಂಪನಿಯು ಪ್ರಭಾವಿತ ಬಳಕೆದಾರರಿಗೆ ಸಂಸ್ಥೆಯ ನೀತಿಯ ಅನುಸಾರವಾಗಿ ಸರ್ಕಾರಿ ಆದೇಶದ ಕ್ರಮದ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಲಾಗಿತ್ತು.
ಎಂಎಸ್ಪಿ ಹಾಗೂ ಇತರ ಬೇಡಿಕೆಗಳಿಗಾಗಿ ದೇಶಾದ್ಯಂತವಿರುವ 200ಕ್ಕೂ ಹೆಚ್ಚು ರೈತ ಸಂಘಟನೆಗಳು ದೆಹಲಿ ಚಲೋ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದೆ.
ನಿನ್ನೆ(ಫೆ.22) ಹರಿಯಾಣ ಹಾಗೂ ಪಂಜಾಬ್ ಗಡಿಯಲ್ಲಿ ಪ್ರತಿಭಟನಾ ಸಮಯದಲ್ಲಿ ಪೊಲೀಸರು ನಡೆಸಿದ ದಾಳಿಯ ಪರಿಣಾಮ ಯುವ ರೈತನೊಬ್ಬ ಮೃತಪಟ್ಟಿದ್ದಾನೆ. ಘಟನೆಯಲ್ಲಿ 12 ಕ್ಕೂ ಹೆಚ್ಚು ಪೊಲೀಸರು ಸಹ ಗಾಯಗೊಂಡಿದ್ದಾರೆ.





