ದೇವಾಲಯದ ಮುಂಭಾಗದಲ್ಲಿದ್ದ ಖಾಲಿ ಜಾಗದಲ್ಲಿ ನಮಾಜ್ ಮಾಡಿದ್ದಕ್ಕಾಗಿ, ಮುಸ್ಲಿಂ ವೃದ್ಧನ ಮೇಲೆ ಹಿಂದುತ್ವ ಕೋಮುವಾದಿ ದುರುಳರು ಭೀಕರವಾಗಿ ಹಲ್ಲೆ ನಡೆಸಿರುವ ಅಮಾನುಷ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಉತ್ತರಾಖಂಡದ ರುದ್ರಪುರದಲ್ಲಿ ಘಟನೆ ನಡೆದಿದೆ. ರೇಷಮ್ ಬಾರಿ ಪ್ರದೇಶದ ನಿವಾಸಿಯಾದ ಶಾಹಿದ್ ಎಂಬವರು ಅತ್ರಿಯ ದೇವಾಲಯದ ಬಳಿ ಕೆಲಸ ಮಾಡುತ್ತಿದ್ದರು. ರಂಜಾನ್ ಹಿನ್ನೆಲೆ ಸಂಜೆ ವೇಳೆ ದೇವಾಲಯದ ಬಳಿಯ ಖಾಲಿ ಜಾಗದಲ್ಲಿ ನಮಾಜ್ ಮಾಡುತ್ತಿದ್ದರು. ಅಲ್ಲಿಗೆ ಬಂದ ದುರುಳರು, ಮುಸ್ಲಿಂ ವೃದ್ಧನ ಮೇಲೆ ಹಲ್ಲೆಗೈದು, ಹಿಂದುತ್ವವಾದಿ ಘೋಷಣೆಗಳನ್ನು ಕೂಗುವಂತೆ ಆತನನ್ನು ಒತ್ತಾಯಿಸಿದ್ದಾರೆ. ವಿಕೃತಿ ಮರೆದಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವೀಡಿಯೊದಲ್ಲಿ; ಆರೋಪಿಗಳು ವೃದ್ಧನನ್ನು ಕೋಲುಗಳಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡುಬಂದಿದೆ. ಘಟನೆ ಬಳಿಕ ಸಂತ್ರಸ್ತ ಶಾಹಿದ್ ಜೊತೆಗೆ ಮುಸ್ಲಿಂ ಸಮುದಾಯದ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಹಲ್ಲೆ ಎಸಗಿದ ಆರೋಪಿಗಳಲ್ಲಿ ಒಬ್ಬ ಕೊಲೆ ಅಪರಾಧಿಯಾಗಿದ್ದಾನೆ. ಪ್ರಸ್ತುತ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತಲುಪಿ ಎರಡೂ ಸಮುದಾಯಗಳು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಶಾಹಿದ್ ಅವರನ್ನು ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ದೂರಿನ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನಗರಪಾಲಿಕೆ ಸದಸ್ಯ ಪರ್ವೇಜ್ ಖುರೇಷಿ ಈ ಘಟನೆಯನ್ನು ಖಂಡಿಸಿದ್ದಾರೆ. “ವಿಷಯವು ಅತ್ಯಂತ ಗಂಭೀರವಾಗಿದೆ. ವ್ಯಕ್ತಿಯ ಮೇಲೆ ಹಲ್ಲೆ ನಡೆಸುವುದು ಸ್ವೀಕಾರಾರ್ಹವಲ್ಲ. ಯಾರಿಗಾದರೂ ಯಾವುದೇ ಆಕ್ಷೇಪವಿದ್ದರೆ, ಆಡಳಿತಕ್ಕೆ ತಿಳಿಸಬೇಕಿತ್ತು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಿಷ್ಪಕ್ಷಪಾತ ತನಿಖೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದಿದ್ದಾರೆ.
ಕಾಂಗ್ರೆಸ್ ನಾಯಕಿ ಸೋಫಿಯಾ ನಾಜ್, “ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಹಿಂಸಾಚಾರ ಮತ್ತು ಧರ್ಮದ ಹೆಸರಿನಲ್ಲಿ ಬಲವಂತದ ಘೋಷಣೆಗಳನ್ನು ಕೂಗುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಆಡಳಿತವು ತಕ್ಷಣ ಕ್ರಮ ಕೈಗೊಂಡು ಸಂತ್ರಸ್ತನಿಗೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.




