ಸಂಸತ್ ಭವನದ ಆವರಣದಲ್ಲಿ ಬುಧವಾರ ಅಮಾನತುಗೊಂಡ ಸಂಸದರ ಪ್ರತಿಭಟನೆಯ ವೇಳೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರ ನಡುವೆ ಸ್ವಾರಸ್ಯಕರ ಹಾಗೂ ತುಸು ಖಾರವಾದ ವಾಗ್ವಾದ ನಡೆದ ಘಟನೆ ವರದಿಯಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ತಮ್ಮ ಹಳೆಯ ಒಡನಾಡಿ ಬಿಟ್ಟು ಅವರನ್ನು ರಾಹುಲ್ ಗಾಂಧಿ, “ನನ್ನ ಮಿತ್ರ ದ್ರೋಹಿ” ಎಂದು ಸಂಬೋಧಿಸುವ ಮೂಲಕ ಕುಟುಕಿದ್ದಾರೆ.
ಸಂಸತ್ತಿನ ಕಲಾಪದಿಂದ ಅಮಾನತುಗೊಂಡಿರುವ ವಿಪಕ್ಷಗಳ ಸಂಸದರು ಸಂಸತ್ ಭವನದ ‘ಮಕರ ದ್ವಾರ’ದ ಬಳಿ ಧರಣಿ ಕುಳಿತಿದ್ದರು. ಈ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಅದೇ ಮಾರ್ಗವಾಗಿ ಸಂಸತ್ತನ್ನು ಪ್ರವೇಶಿಸುತ್ತಿದ್ದ ಕೇಂದ್ರ ಸಚಿವ ರವನೀತ್ ಬಿಟ್ಟು, ಪ್ರತಿಭಟನಾ ನಿರತ ಸಂಸದರನ್ನು ನೋಡಿ, “ಇವರೇನೋ ಯುದ್ಧ ಗೆದ್ದು ಬಂದವರಂತೆ ಕುಳಿತಿದ್ದಾರಲ್ಲ,” ಎಂದು ವ್ಯಂಗ್ಯವಾಡಿದರು.
ಬಿಟ್ಟು ಅವರ ವ್ಯಂಗ್ಯಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಪಕ್ಕದಲ್ಲಿದ್ದ ಸಂಸದರನ್ನು ಉದ್ದೇಶಿಸಿ, “ನೋಡಿ, ಇಲ್ಲೊಬ್ಬ ದ್ರೋಹಿ ನಡೆದುಕೊಂಡು ಹೋಗುತ್ತಿದ್ದಾನೆ, ಅವರ ನಡಿಗೆಯ ವೇಗವನ್ನು ಗಮನಿಸಿ,” ಎಂದು ಚಟಾಕಿ ಹಾರಿಸಿದರು. ಅಷ್ಟೇ ಅಲ್ಲದೆ, ಬಿಟ್ಟು ಅವರತ್ತ ಸ್ನೇಹದಿಂದ ಕೈ ಚಾಚುತ್ತಾ, “ನನ್ನ ಮಿತ್ರ ದ್ರೋಹಿ” ಎಂದು ಹಸ್ತಲಾಘವಕ್ಕೆ ಮುಂದಾದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!
ಆದರೆ, ರಾಹುಲ್ ನೀಡಿದ ಹಸ್ತಲಾಘವವನ್ನು ಸ್ವೀಕರಿಸಲು ನಿರಾಕರಿಸಿದ ರವನೀತ್ ಬಿಟ್ಟು, “ಕಾಂಗ್ರೆಸ್ ಪಕ್ಷ ದೇಶವನ್ನೇ ಮಾರಾಟ ಮಾಡಿದೆ,” ಎಂದು ಗಂಭೀರ ಆರೋಪ ಮಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಕಾಂಗ್ರೆಸ್ ಸಂಸದರು, “ಬಿಜೆಪಿಯೇ ದೇಶವನ್ನು ಮಾರಾಟ ಮಾಡುತ್ತಿದೆ,” ಎಂದು ಘೋಷಣೆ ಕೂಗಿದರು. ವಾತಾವರಣ ಬಿಸಿಯಾಗುತ್ತಿದ್ದಂತೆ ರವನೀತ್ ಬಿಟ್ಟು ಅಲ್ಲಿಂದ ನಿರ್ಗಮಿಸಿದರು.

ಪಂಜಾಬ್ನ ಮಾಜಿ ಮುಖ್ಯಮಂತ್ರಿ ದಿವಂಗತ ಬಿಯಾಂತ್ ಸಿಂಗ್ ಅವರ ಮೊಮ್ಮಗನಾಗಿರುವ ರವನೀತ್ ಸಿಂಗ್ ಬಿಟ್ಟು, ದೀರ್ಘಕಾಲ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದರು. ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿದ್ದ ಅವರು, ಲೂಧಿಯಾನದಿಂದ ಕಾಂಗ್ರೆಸ್ ಸಂಸದರಾಗಿದ್ದರು.
ಆದರೆ, 2024ರ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಿಟ್ಟು, ಲುಧಿಯಾನ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ವಿರುದ್ಧ ಸೋಲು ಕಂಡಿದ್ದರು. ಚುನಾವಣೆಯಲ್ಲಿ ಸೋತರೂ, ಬಿಜೆಪಿ ಹೈಕಮಾಂಡ್ ಅವರನ್ನು ಮೋದಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ರೈಲ್ವೆ ಮತ್ತು ಆಹಾರ ಸಂಸ್ಕರಣಾ ಖಾತೆಗಳ ರಾಜ್ಯ ಸಚಿವ ಸ್ಥಾನವನ್ನು ನೀಡಿದೆ.





