ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ನಿತಿನ್ ನಬಿನ್ ಅವರು, ಜನವರಿ 20ರಂದು ಪಕ್ಷದ ಪೂರ್ಣಾವಧಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದು ಖಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ದೀರ್ಘಕಾಲದವರೆಗೆ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜೆ.ಪಿ. ನಡ್ಡಾ ಅವರ ಸ್ಥಾನವನ್ನು ನಿತಿನ್ ನಬಿನ್ ತುಂಬಲಿದ್ದಾರೆ. ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಾಗಿನಿಂದಲೂ ಪಕ್ಷದ ಹಿರಿಯ ನಾಯಕರ ವಿಶ್ವಾಸಗಳಿಸಿರುವ ನಬಿನ್ ಅವರ ಆಯ್ಕೆ ಪ್ರಕ್ರಿಯೆಯು ಕೇವಲ ಔಪಚಾರಿಕ ಎನ್ನಲಾಗಿದೆ. ಜನವರಿ 20ರಂದು ನಡೆಯುವ ಚುನಾವಣಾ ಪ್ರಕ್ರಿಯೆಯ ನಂತರ ಅಧಿಕೃತ ಘೋಷಣೆ ಹೊರಬೀಳಲಿದೆ.
ಯುವ ನಾಯಕತ್ವಕ್ಕೆ ಮಣೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಂಪೂರ್ಣ ಬೆಂಬಲ ಹೊಂದಿರುವ 46 ವರ್ಷದ ನಿತಿನ್ ನಬಿನ್, ಬಿಜೆಪಿಯ ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರೀಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅವರ ಈ ನೇಮಕಾತಿಯನ್ನು ಪಕ್ಷದಲ್ಲಿನ ಆಮೂಲಾಗ್ರ ಬದಲಾವಣೆಯ ಮುನ್ಸೂಚನೆ ಎಂದೇ ಬಿಂಬಿಸಲಾಗುತ್ತಿದೆ. ಯುವ ಉತ್ಸಾಹ ಮತ್ತು ಹಿರಿಯರ ಅನುಭವದ ಸಮ್ಮಿಳನದೊಂದಿಗೆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಅವರ ಹೆಗಲಿಗೇರಲಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಪಕ್ಷದ ಮೂಲಗಳ ಪ್ರಕಾರ, ಜನವರಿ 19ರಂದು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಮರುದಿನ (ಜ. 20) ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಪೂರ್ಣಗೊಂಡ ನಂತರ, ಜ. 20ರಂದು ನಬಿನ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಮುಖ್ಯಮಂತ್ರಿಗಳು, ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯ ಘಟಕಗಳ ಅಧ್ಯಕ್ಷರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಭಾಗವಹಿಸಲಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ರೋಮಿಯೋ-ಜ್ಯೂಲಿಯೆಟ್ ವಿನಾಯಿತಿ’ ಸುಪ್ರೀಮ್ ಸೂಚನೆ ಯಾಕಾಗಿ ಸೂಕ್ತ?
‘ಖರ್ಮಾಸ’ ಮುಕ್ತಾಯದ ಬಳಿಕ ಪದಗ್ರಹಣ
ಡಿಸೆಂಬರ್ 15ರಂದೇ ನಿತಿನ್ ನಬಿನ್ ಅವರನ್ನು ಬಿಜೆಪಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ, ಹಿಂದೂ ಸಂಪ್ರದಾಯದಂತೆ ಶುಭ ಕಾರ್ಯಗಳಿಗೆ ಅಡ್ಡಿಯಾಗುವ ‘ಖರ್ಮಾಸ’ (ಶೂನ್ಯ ಮಾಸ) ಜಾರಿಯಲ್ಲಿದ್ದ ಕಾರಣ, ಅವರ ಪೂರ್ಣಾವಧಿಯ ಅಧಿಕಾರ ಸ್ವೀಕಾರವನ್ನು ತಡೆಹಿಡಿಯಲಾಗಿತ್ತು. ಇದೀಗ ಖರ್ಮಾಸ ಮುಗಿಯುತ್ತಿದ್ದು, ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಯಾರು ಈ ನಿತಿನ್ ನಬಿನ್?
ಬಿಹಾರದ ಪಾಟ್ನಾ ಜಿಲ್ಲೆಯ ಬಂಕಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ನಿತಿನ್ ನಬಿನ್, ದಿವಂಗತ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರ. ಕಳೆದ ಎರಡು ದಶಕಗಳಿಂದ ಸಂಘಟನೆಯಲ್ಲಿ ಸಕ್ರಿಯರಾಗಿರುವ ಇವರು, ಭಾರತೀಯ ಜನತಾ ಯುವ ಮೋರ್ಚಾದ ಬಿಹಾರ ಘಟಕದ ಅಧ್ಯಕ್ಷರಾಗಿ ಹಾಗೂ ಛತ್ತೀಸ್ಗಢದ ಚುನಾವಣಾ ಉಸ್ತುವಾರಿಯಾಗಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಾಧ್ಯಕ್ಷರಾದ ನಂತರ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಿರಂತರವಾಗಿ ಕಾರ್ಯಕರ್ತರನ್ನು ಭೇಟಿಯಾಗುವ ಮೂಲಕ ಸಂಘಟನಾ ಚತುರ ಎಂಬ ಹೆಸರನ್ನೂ ಗಳಿಸಿದ್ದಾರೆ.





