ಕೆಲಸದ ಅವಧಿಯ ವಿಚಾರವಾಗಿ ನಿರಂತರವಾಗಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ, ಚರ್ಚೆಗೆ ಗುರಿಯಾಗಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಈಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಪ್ರಧಾನಿ ಮೋದಿ ಅವರು ಮಾತ್ರವೇ ವಾರಕ್ಕೆ 100 ಗಂಟೆ (ದಿನಕ್ಕೆ 14.2 ಗಂಟೆ) ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ. ವಾರಕ್ಕೆ ಉದ್ಯೋಗಿಗಳು 70 ಗಂಟೆ ಕೆಲಸ ಮಾಡಬೇಕು ಎಂಬ ತಮ್ಮ ಹಿಂದಿನ ಹೇಳಿಕೆಗೆ ಪೂರಕವಾಗಿ ಈ ಹೊಸ ಹೇಳಿಕೆ ನೀಡಿದ್ದಾರೆ. ಮತ್ತೆ, ವಿವಾದ ಹುಟ್ಟುಹಾಕಿದ್ದಾರೆ.
ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುವಾಗ ನಾರಾಯಣಮೂರ್ತಿ ಜೊತೆಗೆ ಸೆಲ್ಫಿ ತೆಗೆದುಕೊಂಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಆ ಫೋಟೋವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ, “ರಾಷ್ಟ್ರೀಯ ಅಭಿವೃದ್ಧಿಯನ್ನು ಹೆಚ್ಚಿಸಲು ಯುವ ಭಾರತೀಯರು ಹೆಚ್ಚು ಸಮಯ ಕೆಲಸ ಮಾಡಬೇಕು ಎಂಬುದು ಮೂರ್ತಿ ಅವರ ಸಲಹೆ. ನಾನು 70 ಗಂಟೆ ಕೆಲಸದ ಬಗ್ಗೆ ಮಾತನಾಡಿದಾಗ ನಕ್ಕ ಮೂರ್ತಿ ಅವರು, ‘ನನಗೆ ತಿಳಿದಿರುವಂತೆ ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ ಪ್ರಧಾನಿ ಮೋದಿ ಮಾತ್ರ’ ಎಂಬುದಾಗಿ ಹೇಳಿದರು” ಎಂದು ತೇಜಸ್ವಿ ಸೂರ್ಯ ಬರೆದುಕೊಂಡಿದ್ದಾರೆ.
Had an inspiring conversation with the legendary NRN today on the way back to Bengaluru from Mumbai.
— Tejasvi Surya (@Tejasvi_Surya) July 15, 2025
NRN pioneered the Indian IT services sector, turning it into a global powerhouse. He created wealth for literally lakhs of middle class families through Infosys.
From AI to… pic.twitter.com/ZpcnRWmbQR
ಅಂದಹಾಗೆ, ಈ ಹಿಂದೆ, ನಾರಾಯಣ ಮೂರ್ತಿ ಅವರು ಉದ್ಯೋಗಿಗಳು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿದ್ದರು. ಕಳೆದ ವರ್ಷ ಡಿಸೆಂಬರ್ನಲ್ಲಿ ಕೋಲ್ಕತ್ತಾದಲ್ಲಿ ಮಾತನಾಡಿದ್ದ ನಾರಾಯಣ ಮೂರ್ತಿ, ಭಾರತವನ್ನು ನಂಬರ್ ಒನ್ ಮಾಡಲು ಮತ್ತು ತಾವೂ ಬಡತನದಿಂದ ಹೊರಬರಲು ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದರು. ಅಂತೆಯೇ, ಟೂಬ್ರೊ ಅಧ್ಯಕ್ಷ ಎಸ್.ಎನ್ ಸುಬ್ರಹ್ಮಣ್ಯನ್ ಅವರು ”ಎಷ್ಟು ಕಾಲ ನೀವು ನಿಮ್ಮ ಪತ್ನಿಯ ಮುಖವನ್ನೇ ನೋಡುತ್ತಾ ಕೂರುತ್ತೀರಿ? ಭಾನುವಾರಗಳಲ್ಲೂ ನಿಮ್ಮನ್ನು ಕೆಲಸ ಮಾಡುವಂತೆ ಮಾಡಲು ನನಗೆ ಸಾಧ್ಯವಾದರೆ, ನಾನು ಹೆಚ್ಚು ಸಂತೋಷಪಡುತ್ತೇನೆ. ನೀವು ಮನೆಯಲ್ಲಿ ಕಡಿಮೆ ಸಮಯ ಕಳೆದು, ಕಚೇರಿಯಲ್ಲಿ ಹೆಚ್ಚು ಸಮಯ ವ್ಯಯಿಸಿ. ವಾರಕ್ಕೆ 90 ಗಂಟೆ ಕೆಲಸ ಮಾಡಿ” ಎಂದು ಹೇಳಿದ್ದರು.
ಮೂರ್ತಿ ಮತ್ತು ಸುಬ್ರಹ್ಮಣ್ಮನ್ ಅವರಂತಹ ಉದ್ಯಮಿಗಳ ಹೇಳಿಕೆಗಳು ಶ್ರಮ ಹೀರುವ ಶ್ರಮಭಾಕ ಸಂಸ್ಕೃತಿ ಪ್ರತಿಬಿಂಬವಾಗಿದೆ ಎಂದು ಹೋರಾಟಗಾರರು, ಉದ್ಯೋಗಗಳು, ಚಿಂತಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಂಡವಾಳಶಾಹಿ ಉದ್ಯಮಿಗಳು ಈಗಾಗಲೇ ಕಡಿಮೆ ವೇತನ ಕೊಟ್ಟು, ದುಪ್ಪಟ್ಟು ದುಡಿಸಿಕೊಳ್ಳುತ್ತಿದ್ದಾರೆ. ಉದ್ಯೋಗಿಗಳು ಕೆಲಸದ ಒತ್ತಡಕ್ಕೆ ಸಿಲುಕಿಕೊಂಡು ನರಳುತ್ತಿದ್ದಾರೆ. ಉದ್ಯೋಗ ಸ್ಥಳದಲ್ಲಿನ ಒತ್ತಡದಿಂದಾಗಿ ಆತ್ಮಹತ್ಯೆಗಳು ಸಂಭವಿಸುತ್ತಿರುವ, ಉದ್ಯೋಗಿಗಳು ಮೈಗ್ರೇನ್, ಡಯಾಬಿಟಿಸ್, ಮಾನಸಿಕ ಒತ್ತಡ ಅಥವಾ ಅನಾರೋಗ್ಯ ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಸಮಯದಲ್ಲಿ 70 ಗಂಟೆ, 90 ಗಂಟೆ ದುಡಿಯಬೇಕು ಎಂಬ ಉದ್ಯಮಿಗಳ ಹೇಳಿಕೆಗಳು ಉದ್ಯೋಗಿಗಳ ರಕ್ತ ಹೀರುವ ಪಿಪಾಸುಗಳಾಗಿ ಉದ್ಯಮಿಗಳು ರೂಪುಗೊಳ್ಳುತ್ತಿದ್ದಾರೆ ಎಂಬುಕ್ಕೆ ಪ್ರತಿಬಿಂಬವಾಗಿವೆ.
ಆದಾಗ್ಯೂ, ಉದ್ಯೋಗಿಗಳು ಹೆಚ್ಚು ದುಡಿಯಬೇಕು ಎಂಬ ಇಂತಹ ಮೂರ್ಖ ಮತ್ತು ಲಾಭಕೋರತನದ ಹೇಳಿಕೆಗಳನ್ನು ಕೆಲ ಉದ್ಯಮಿಗಳೇ ಅಲ್ಲಗಳೆದಿದ್ದಾರೆ. ಟೀಕಿಸಿದ್ದಾರೆ. ನಾರಾಯಣ ಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಉದ್ಯಮಿ, ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಸಿಇಒ ನಮಿತಾ ಥಾಪರ್, ”ನಾವು ಮಾಲೀಕರು. ಹೆಚ್ಚು ಬಂಡವಾಳ ಹಾಕಿರುತ್ತೇವೆ. ಲಾಭಗಳಿಕೆ ಆದ್ಯತೆಯಾಗಿರುತ್ತದೆ. ಅದಕ್ಕಾಗಿ ನಾವು ಟನ್ಗಟ್ಟಲೆ ಕೆಲಸ ಮಾಡಬಹುದು. ದಿನದ 24 ಗಂಟೆಯೂ ಕೆಲಸ ಮಾಡಬಹುದು. ಆದರೆ, ಉದ್ಯೋಗಿಗಳ ಕತೆ ಏನು? ಉದ್ಯೋಗಿಗಳು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ನಿರೀಕ್ಷಿಸುವುದು ಅವರ ಮೇಲೆ ಹೆಚ್ಚು ಒತ್ತಡ ಹೇರಿದಂತೆ ಆಗುತ್ತದೆ. ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಅದು ತಪ್ಪು. ಉದ್ಯೋಗಿಗಳಿಗೆ ಸಮಂಜಸವಾದ ಕೆಲಸದ ಸಮಯದ ಮಿತಿ ಇರಬೇಕು” ಎಂದು ಹೇಳಿದ್ದರು.
ಅಂತೆಯೇ, ಕ್ಯೂರ್ಫಿಟ್ ಸಂಸ್ಥಾಪಕ ಮುಖೇಶ್ ಬನ್ಸಾಲ್ ಅವರು, “ಉದ್ಯೋಗಿಗಳು ವಾರಕ್ಕೆ 70 ಗಂಟೆಗಳ ಕಾಲ ದುಡಿಯಬೇಕೆಂದು ನಿರೀಕ್ಷಿಸುವುದು ಮೂರ್ಖತನ. 40 ಗಂಟೆಗಳ ಸಂಬಳದಲ್ಲಿ 70-90 ಗಂಟೆಗಳ ಕೆಲಸ ಕೇಳಲು ಸಾಧ್ಯವಿಲ್ಲ. ಅದು ಸರಿಯಲ್ಲ” ಎಂದಿದ್ದರು.
ವಾರವೊಂದರಲ್ಲಿ 70 ಗಂಟೆಗಳ ಕಾಲ ದುಡಿಯವುದು ಉದ್ಯೋಗಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಬೊಜ್ಜು, ಅಧಿಕ ರಕ್ತದೊತ್ತಡದಂತಹ ಆರೋಗ್ಯದ ಸಮಸ್ಯೆಗಳು ತಲೆದೋರಬಹುದು ಎಂದು ವೈದ್ಯರು ಹೇಳುತ್ತಾರೆ.




