ಪ್ರಧಾನಿ ನರೇಂದ್ರ ಮೋದಿ ಗುರುವಾರ ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ ಕೆಲವು ಉನ್ನತ ಕೃತಕ ಬುದ್ಧಿಮತ್ತೆ (AI) ಕಂಪನಿಗಳ ನಾಯಕರನ್ನು ವೇದಿಕೆಗೆ ಆಹ್ವಾನಿಸಿದ್ದರು. ಜತೆಗೆ ಕೈಹಿಡಿದು ಮೇಲಕ್ಕೆ ಎತ್ತುವಂತೆ ತಿಳಿಸಿದ್ದರು. ಆದರೆ ಪ್ರಧಾನಿ ಮೋದಿ ಅವರ ಈ ನಡವಳಿಕೆಯು ಟೆಕ್ ನಾಯಕರುಗಳನ್ನು ಮುಜುಗರಕ್ಕೀಡು ಮಾಡಿದೆ.
ಈ ವಿಡಿಯೋದಲ್ಲಿ ಪ್ರೇಕ್ಷಕರ ಗಮನ ಸೆಳೆದದ್ದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇಬ್ಬರು ಪ್ರತಿಸ್ಪರ್ಧಿ ತಂತ್ರಜ್ಞಾನ ನಾಯಕರ ನಡುವಿನ ಘಟನೆ. ಮೋದಿ ಕೈ ಎತ್ತಿದ್ದಾಗ ಹಿಂದೆ ಮುಂದೆ ನೋಡಿದ ನಾಯಕರುಗಳಲ್ಲಿ ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮನ್ ಮತ್ತು ಆಂಥ್ರೊಪಿಕ್ ಸಿಇಒ ಡೇರಿಯೊ ಅಮೋಡೆ ಕೊನೆಗೂ ಪರಸ್ಪರ ಕೈಹಿಡಿಯದೆ, ಬರೀ ಮುಷ್ಠಿ ಪ್ರದರ್ಶಿಸಿದರು.
ಇದನ್ನು ಓದಿದ್ದೀರಾ? ಮೋದಿ ಸರ್ಕಾರದ ವಿರುದ್ಧ ಅರ್ನಬ್ ಹಠಾತ್ತನೆ ಆರ್ಭಟಿಸಿದ್ದೇಕೆ? ಸ್ವಾರ್ಥಕ್ಕೋ ಪರಮಾರ್ಥಕ್ಕೋ!
ನವದೆಹಲಿಯಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಎಡಕ್ಕಿದ್ದ ಆಲ್ಟ್ಮನ್ ಮತ್ತು ಬಲಕ್ಕೆ ಇದ್ದ ಗೂಗಲ್ ಸಿಇಒ ಸುಂದರ್ ಪಿಚೈ ಕೈಹಿಡಿದು ಮೇಲೆತ್ತಿದ್ದರು. ರಂಗಭೂಮಿ ನಟರುಗಳಂತೆ 13 ನಾಯಕರುಗಳು ಪರಸ್ಪರ ಕೈ ಎತ್ತಿಕೊಳ್ಳಲು ಪ್ರಧಾನಿ ಮೋದಿ ಪ್ರೋತ್ಸಾಹಿಸಿದರು. ಆದರೆ ಮೋದಿಯ ಈ ನಡೆಯು ಹಲವು ನಾಯಕರುಗಳನ್ನು ಮುಜುಗರಕ್ಕೆ ತಳ್ಳಿದೆ.
ಪ್ರಧಾನಿ ಆಲ್ಟ್ಮನ್ ಮತ್ತು ಸುಂದರ್ ಪಿಚೈ ಕೈಹಿಡಿದು ಮೇಲಕ್ಕೆ ಎತ್ತಿದ ಕೆಲವು ಸೆಕೆಂಡುಗಳ ಕಾಲ ಕೊಂಚ ಗೊಂದಲ ಕಂಡುಬಂದಿತ್ತು. ಬಳಿಕ ಒಬ್ಬೊಬ್ಬರಾಗಿ ಕೈಹಿಡಿದು ಮೇಲಕ್ಕೆ ಎತ್ತಿದರೆ, ಆಲ್ಟ್ಮನ್ ಮತ್ತು ಅಮೋಡೆ ಮಾತ್ರ ಪರಸ್ಪರರ ಕೈಹಿಡಿಯುವುದನ್ನು ತಪ್ಪಿಸಿಕೊಂಡರು. ಇಬ್ಬರೂ ಅತ್ತಿತ್ತ ನೋಡಿ ಕೊನೆಗೆ ಇಬ್ಬರೂ ತಮ್ಮ ಮುಷ್ಟಿಯನ್ನು ಮೇಲಕ್ಕೆತ್ತಿದರು. AI ಉದ್ಯಮದಲ್ಲಿ, ವಿಶೇಷವಾಗಿ ಓಪನ್ಎಐ ಮತ್ತು ಆಂಥ್ರೊಪಿಕ್ ನಡುವೆ ಪೈಪೋಟಿಗೂ ಈ ನಾಯಕರುಗಳ ವರ್ತನೆಗೂ ಸದ್ಯ ನೆಟ್ಟಿಗರು ನಂಟು ಕಲ್ಪಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಮನಿ ಕಂಟ್ರೋಲ್ಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಮಾತನಾಡಿದ ಆಲ್ಟ್ಮನ್, “ಏನು ನಡೆಯುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ಅವರು “(ಮೋದಿ) ನನ್ನ ಕೈ ಹಿಡಿದು ಅದನ್ನು ಎತ್ತಿ ಹಿಡಿದಾಗ, ನಾವು ಏನು ಮಾಡಬೇಕೆಂದು ನನಗೆ ಗೊತ್ತಾಗಲಿಲ್ಲ. ಆದ್ದರಿಂದ ನಾನು ಗೊಂದಕ್ಕೆ ಒಳಗಾದೆ” ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ಅಮೋಡೆ ಮತ್ತು ಆಂಥ್ರೊಪಿಕ್ ಸಂಸ್ಥೆ ನಿರಾಕರಿಸಿದೆ.
ಮೋದಿ ನಡವಳಿಕೆಯು ಜಾಗತಿಕ ನಾಯಕರುಗಳನ್ನು ಮುಜುಗರಕ್ಕೀಡು ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಮೋದಿ ಅವರ ಅತಿಯಾದ ಆಲಿಂಗನ ಅಥವಾ ಕೈ ಹಿಡಿಯುವ ಶೈಲಿಯು ಕೆಲವು ಅಂತಾರಾಷ್ಟ್ರೀಯ ನಾಯಕರುಗಳಿಗೆ ಮುಜುಗರ ಉಂಟುಮಾಡಿದೆ. ಕೆಲವು ವಿಮರ್ಶಕರು ಇದನ್ನು ರಾಜತಾಂತ್ರಿಕ ಶಿಷ್ಟಾಚಾರದ ಉಲ್ಲಂಘನೆ ಎಂದೂ ಬಣ್ಣಿಸಿದ್ದಾರೆ.
2025ರ ಡಿಸೆಂಬರ್ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವಾಗತಿಸಲು ಮೋದಿ ಶಿಷ್ಟಾಚಾರವನ್ನು ಮುರಿದು ವಿಮಾನ ನಿಲ್ದಾಣಕ್ಕೆ ಹೋಗಿದ್ದು ಸುದ್ದಿಯಾಗಿತ್ತು. ಸರ್ಕಾರ ಮಾತ್ರ ಇದು ಭಾರತ-ರಷ್ಯಾ ಸಂಬಂಧದ ಗಾಢತೆಗೆ ಸಾಕ್ಷಿ ಎಂದು ಹೇಳಿಕೊಂಡಿತ್ತು. ಆದರೆ ವಿಪಕ್ಷಗಳು ತೀವ್ರವಾಗಿ ಟೀಕಿಸಿತ್ತು.





