ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ದೆಹಲಿ ನ್ಯಾಯಾಲಯವು ದೊಡ್ಡ ಮಟ್ಟದ ನಿರಾಳತೆಯನ್ನು ನೀಡಿದೆ. ಆದರೆ, ದೆಹಲಿ ಪೊಲೀಸರು ದಾಖಲಿಸಿರುವ ಹೊಸ ಎಫ್ಐಆರ್ (FIR) ಕಾರಣದಿಂದಾಗಿ ಈ ಸಂಕಷ್ಟ ಇನ್ನೂ ಸಂಪೂರ್ಣವಾಗಿ ದೂರವಾಗಿಲ್ಲ.
ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಹಾಲಿ ಚಾರ್ಜ್ಶೀಟ್ (ದೋಷಾರೋಪ ಪಟ್ಟಿ) ಅನ್ನು ಪರಿಗಣಿಸಲು ದೆಹಲಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಶಾಲ್ ಗೋಗ್ನೆ ಅವರು ನಿರಾಕರಿಸಿದ್ದಾರೆ.
ಕಾರಣವೇನು?
ಇ.ಡಿಯ ಈ ತನಿಖೆಯು ಸುಬ್ರಮಣಿಯನ್ ಸ್ವಾಮಿ ಅವರು ನೀಡಿದ್ದ ‘ಖಾಸಗಿ ದೂರಿನ’ ಆಧಾರದ ಮೇಲೆ ನಡೆದಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖೆ ನಡೆಸಲು, ಪೊಲೀಸರು ದಾಖಲಿಸಿದ ಎಫ್ಐಆರ್ ಅಥವಾ ನಿರ್ದಿಷ್ಟ ಅಪರಾಧದ ಹಿನ್ನೆಲೆ ಇರಬೇಕಾಗುತ್ತದೆ. ಇಲ್ಲಿ ಪೊಲೀಸ್ ಎಫ್ಐಆರ್ ಇಲ್ಲದ ಕಾರಣ, ಇ.ಡಿ ಸಲ್ಲಿಸಿದ ಚಾರ್ಜ್ಶೀಟ್ ಕಾನೂನುಬದ್ಧವಲ್ಲ ಎಂದು ಕೋರ್ಟ್ ಹೇಳಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಡ್ಯದ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಸಿಗದ ಯುವಕರ ಹತಾಶೆ
ಈ ಆದೇಶದಿಂದಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಆರೋಪಿಗಳ ಮೇಲಿನ ವಿಚಾರಣೆ ಸದ್ಯಕ್ಕೆ ತಡೆಹಿಡಿಯಲ್ಪಟ್ಟಿದೆ. ಆದರೆ, ನ್ಯಾಯಾಲಯದ ಈ ಆದೇಶವು ಕೇವಲ ತಾಂತ್ರಿಕ ಕಾರಣಗಳಿಗಾಗಿ ನೀಡಿದ ತಾತ್ಕಾಲಿಕ ರಿಲೀಫ್ ಆಗಿದ್ದು, ಕಾನೂನು ಕುಣಿಕೆ ಇನ್ನೂ ಹಾಗೆಯೇ ಇದೆ. ಏಕೆಂದರೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು (EOW) ಇದೇ ಅಕ್ಟೋಬರ್ 3, 2025 ರಂದು ಗಾಂಧಿ ಕುಟುಂಬ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ನಂಬಿಕೆ ದ್ರೋಹದ ಆರೋಪದಡಿ ಹೊಸ ಎಫ್ಐಆರ್ ಒಂದನ್ನು ದಾಖಲಿಸಿದೆ.
ಹಳೆಯ ಚಾರ್ಜ್ಶೀಟ್ ತಿರಸ್ಕೃತಗೊಂಡಿದ್ದರೂ, ಇ.ಡಿ ಈ ಹೊಸ ಪೊಲೀಸ್ ಎಫ್ಐಆರ್ ಅನ್ನು ಆಧರಿಸಿ, ಕಾನೂನುಬದ್ಧವಾಗಿ ಮತ್ತೊಂದು ಹೊಸ ಚಾರ್ಜ್ಶೀಟ್ ಸಲ್ಲಿಸುವುದಾಗಿ ತಿಳಿಸಿದೆ.





