ಜನವರಿ 3 ರಿಂದ ತಿಂಗಳು ಪೂರ್ತಿ ʼಜನ ಗಣ ಮನʼ ಹೆಸರಿನ ಅಭಿಯಾನವನ್ನು ಭಾರತ್ ಜೋಡೋ ಅಭಿಯಾನ ಆಯೋಜಿಸಿದೆ. ಮಂಗಳವಾರ ಝೂಮ್ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಭಾರತ್ ಜೋಡೋ ಅಭಿಯಾನದ ಸಂಯೋಜಕರಾದ ಯೋಗೇಂದ್ರ ಯಾದವ್ ಮತ್ತು ವಿಜಯ್ ಮಹಾಜನ್ ಮಾಹಿತಿ ನೀಡಿದರು.
ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಸಂವಿಧಾನಿಕ ಮೌಲ್ಯಗಳ ಆಧಾರದ ಮೇಲೆ ನಾಗರಿಕ ಸಮಾಜವನ್ನು ಒಂದುಗೂಡಿಸುವುದು ಈ ಆಭಿಯಾನದ ಉದ್ದೇಶ. ಮುಂದಿನ ಇಪ್ಪತ್ತೇಳು ದಿನಗಳ ಕಾಲ ನಿರಂತರವಾಗಿ ದೇಶವ್ಯಾಪಿ ಆನ್ ಲೈನ್ ಮತ್ತು ಆಫ್ಲೈನ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಜ.3 ಸಾವಿತ್ರಿ ಭಾ ಫುಲೆ ಜನ್ಮದಿನ, ಜ.7ರಂದು ಫಾತಿಮಾ ಶೇಖ್ ಜನ್ಮದಿನ, ಜ 26 ಗಣರಾಜ್ಯೋತ್ಸವ, ಜನವರಿ 30 ರಂದು ಗಾಂಧಿ ಪುಣ್ಯತಿಥಿ. ಅಷ್ಟೇ ಅಲ್ಲ ಗುರು ಗೋವಿಂದ ಸಿಂಗ್ ಜಯಂತಿ, ಸಂಕ್ರಾಂತಿ ಸೇರಿದಂತೆ ಈ ತಿಂಗಳಲ್ಲಿ ಸುಮಾರು 20 ವಿಶೇಷ ದಿನಗಳಿವೆ. ಈ ದಿನಗಳಲ್ಲಿ ಸಾರ್ವಜನಿಕ ಸಮಾರಂಭಗಳು, ವೆಬಿನಾರ್ಗಳನ್ನು ನಡೆಸಲಿದ್ದೇವೆ. ಶಾಂತಿ -ಸೌಹಾರ್ದತೆಯ ಬದುಕು ಬಯಸುವ ಎಲ್ಲರೂ “ಜನ ಗಣ ಮನ” ಅಭಿಯಾನದ ಭಾಗವಾಗಬೇಕು ಎಂದು ಯೋಗೇಂದ್ರ ಯಾದವ್ ಕರೆ ನೀಡಿದರು.
ಭಾರತ್ ಜೋಡೋ ಅಭಿಯಾನ ಹಲವಾರು ಸಂಘಟನೆಗಳು ಸೇರಿಕೊಂಡ ನಾಗರಿಕ ಅಭಿಯಾನ. ಯಾತ್ರೆ ಸಾಗಿದ ಹದಿನೈದು ರಾಜ್ಯಗಳಲ್ಲಿ ಈ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ದೇಶದ ಬಹುತ್ವವನ್ನು ರಕ್ಷಿಸುವುದು, ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು, ಎಲ್ಲ ನಾಗರಿಕರಿಗೂ ಆರ್ಥಿಕ ಸಾಮಾಜಿಕ, ರಾಜಕೀಯ ನ್ಯಾಯಕ್ಕಾಗಿ ಶ್ರಮಿಸುವುದು, ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ರಕ್ಷಿಸುವುದು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಸಂರಕ್ಷಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಪ್ರಸ್ತುತ ಸಂಘಟಿತ ಕೋಮು ಉನ್ಮಾದದ ಯೋಜನೆಯಿಂದ ನಮ್ಮ ನಾಗರಿಕ ಪರಂಪರೆ, ಪ್ರಜಾಪ್ರಭುತ್ವ, ಜಾತ್ಯತೀತ ಗಣರಾಜ್ಯದ ಸಾಂವಿಧಾನಿಕ ವಿನ್ಯಾಸವನ್ನು ಮರೆಮಾಡಲು ಅವಕಾಶ ನೀಡಬಾರದು ಎಂಬ ನಮ್ಮ ಚಿಂತನೆಯೊಂದಿಗೆ ‘ಜನ ಗಣ ಮನ ಅಭಿಯಾನ’ ಬೇರೂರಿದೆ. ಬಹುಪಾಲು ಭಾರತೀಯರು ಶಾಂತಿಯನ್ನು ಬಯಸುತ್ತಾರೆ ಎಂದು ನಾವು ನಂಬುತ್ತೇವೆ ಎಂದರು.
ಭಾರತ್ ಜೋಡೋ ಅಭಿಯಾನದ ರಾಷ್ಟ್ರೀಯ ಕಾರ್ಯದರ್ಶಿ ಕವಿತಾ ಕುರುಗುಂಟಿ ಮಾತನಾಡಿ, ಸಮಾನ ಮನಸ್ಕರು 7877722353 ನಂಬರಿಗೆ ಮಿಸ್ಡ್ ಕಾಲ್ ಕೊಟ್ಟು ಈ ನಾಗರಿಕ ಅಭಿಯಾನದಲ್ಲಿ ಪಾಳ್ಗೊಳ್ಳಬಹುದು. ಅಭಿಯಾನಕ್ಕಾಗಿ ಯೋಜಿಸಲಾದ ಚಟುವಟಿಕೆಗಳಲ್ಲಿ ವೀಡಿಯೊಗಳು, ಪೋಸ್ಟರ್ಗಳು, ಸಂವಾದ, ಆನ್ಲೈನ್ ಮತ್ತು ಆಫ್ಲೈನ್ ಕಾರ್ಯಕ್ರಮಗಳು ಸೇರಿವೆ ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸವರ್ಷದ ಹೊಸ್ತಿಲಲ್ಲಿ ನಮ್ಮನ್ನಗಲಿದ ನಿಜಾಯತಿಯ ಪತ್ರಕರ್ತ ಜಾನ್ ಪಿಲ್ಜರ್
ಈ ದೇಶದಲ್ಲಿ ದಲಿತರು, ಮಹಿಳೆಯರು, ರೈತರು, ಆದಿವಾಸಿಗಳು ಬಹುದೊಡ್ಡ ಸಮುದಾಯವಾಗಿದೆ. ಅವರ ಧ್ವನಿಯನ್ನು ಅಡಗಿಸಲಾಗಿದೆ. ಈ ಸಮುದಾಯಗಳ ಜೊತೆಗೆ ಸಮಾನ ಮನಸ್ಕರು ಬೆರೆಯುವ ಮೂಲಕ ಮುಖ್ಯವಾಹಿನಿಗೆ ತರುವುದು, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಈ ಸಮುದಾಯಗಳ ಮತದಾರರನ್ನು ಭೇಟಿಯಾಗುವುದು, ಬೂತ್ಗಳಲ್ಲಿ ಕೆಲಸ ಮಾಡುವುದು ನಮ್ಮ ಆದ್ಯತೆಯಾಗಿದೆ. ಆ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಸಂವಿಧಾನವನ್ನು ರಕ್ಷಣೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ದೇಶವು ಸಂಘಟಿತ ಕೋಮುವಾದದ ಉನ್ಮಾದಕ್ಕೆ ಸಾಕ್ಷಿಯಾಗುತ್ತಿದೆ. ಹೊಸ ವರ್ಷದ ಈ ತಿಂಗಳಲ್ಲಿ ದೇಶದಲ್ಲಿ ಏನು ನಡೆಯುತ್ತಿದೆ ಎಂದು ನೋಡುತ್ತಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಇದು ಮರ್ಯಾದೆ ಅಥವಾ ಆಸ್ಥೆ ಅಥವಾ ಧರ್ಮದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಆದರೆ 2024 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತದಾರರನ್ನು ಧಾರ್ಮಿಕ ನೆಲೆಯಲ್ಲಿ ಧ್ರುವೀಕರಿಸುವ ನಿರ್ಣಾಯಕ ಪ್ರಯತ್ನ ನಡೆಯುತ್ತಿದೆ. ಈ ಕವಲುದಾರಿಯಲ್ಲಿ, ದೇಶದ ನಾಗರಿಕರಿಗೆ ಈ “ಜನ ಗಣ ಮನ” ಅಭಿಯಾನದಲ್ಲಿ ಪಾಲ್ಗೊಂಡು ದೇಶದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಬೇಕು ಎಂದು ಭಾರತ್ ಜೋಡೋ ಅಭಿಯಾನ ಕರೆ ನೀಡಿದೆ.





