ನವೆಂಬರ್ನಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯೊಂದಿಗೆ ಚಾಲ್ತಿಗೆ ಬರಲಿದೆ. ಖಾತೆಯ ‘ಕ್ಲೈಮ್’ ಇತ್ಯರ್ಥದಲ್ಲಿ ಏಕರೂಪತೆ ಮತ್ತು ದಕ್ಷತೆ ತರಲು ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗೆ ನಾಲ್ಕು ‘ನಾಮಿನಿ’ಗಳನ್ನು ಆಯ್ಕೆ/ಸೇರ್ಪಡೆ ಮಾಡಬಹುದು ಎಂದು ಹಣಕಾಸು ಸಚಿವಾಲಯ ಹೇಳಿದೆ.
ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯ್ದೆ-2025ರ ಅಡಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಾಮಿನಿ ಸೇರ್ಪಡೆಗೆ ಸಂಬಂಧಿಸಿದಂತೆ ಪ್ರಮುಖ ನಿಬಂಧನೆಗಳು ನವೆಂಬರ್ 1ರಿಂದ ಜಾರಿಗೆ ಬರಲಿವೆ ಎಂದು ಸಚಿವಾಲಯ ತಿಳಿಸಿದೆ.
ಹೊಸ ತಿದ್ದುಪಡಿ ಕಾಯ್ದೆಯನ್ನು 2025ರ ಏಪ್ರಿಲ್ 15ರಂದು ಅಧಿಸೂಚಿಸಲಾಗಿತ್ತು. ಇದು, ಐದು ಕಾನೂನುಗಳಲ್ಲಿ (ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ-1934, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ-1949, ಭಾರತೀಯ ಸ್ಟೇಟ್ ಬ್ಯಾಂಕ್ ಕಾಯ್ದೆ-1955 ಹಾಗೂ ಬ್ಯಾಂಕಿಂಗ್ ಕಂಪನಿಗಳು [ಸ್ವಾಧೀನ ಮತ್ತು ಉದ್ಯಮಗಳ ವರ್ಗಾವಣೆ] ಕಾಯ್ದೆ1970 ಮತ್ತು 1980) ಒಟ್ಟು 19 ತಿದ್ದುಪಡಿಗಳನ್ನು ಒಳಗೊಂಡಿದೆ ಎಂದು ಸಚಿವಾಲಯ ವಿವರಿಸಿದೆ.
ತಿದ್ದುಪಡಿಗಳ ಪ್ರಕಾರ, ಗ್ರಾಹಕರು ಏಕಕಾಲದಲ್ಲಿ ಅಥವಾ ಅನುಕ್ರಮವಾಗಿ ನಾಲ್ಕು ವ್ಯಕ್ತಿಗಳನ್ನು ತಮ್ಮ ಖಾತೆಗೆ ನಾಮಿನಿಗಳಾಗಿ ನಾಮನಿರ್ದೇಶನ ಮಾಡಬಹುದು. ಇದರಿಂದಾಗಿ ಠೇವಣಿದಾರರು ಮತ್ತು ಅವರ ನಾಮಿನಿಗಳು ಕ್ಲೈಮ್ಗಳನ್ನು ಸರಳವಾಗಿ ಇತ್ಯರ್ಥಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಸುರಕ್ಷಿತ ಕಸ್ಟಡಿ ಮತ್ತು ಸುರಕ್ಷತಾ ಲಾಕರ್ಗಳಲ್ಲಿರುವ ವಸ್ತುಗಳನ್ನು ಕ್ಲೈಮ್ ಮಾಡಲು ಠೇವಣಿದಾರರು ಸೂಚಿಸಿದ ಅನುಕ್ರಮಗಳ ಆಧಾರದ ಮೇಲೆ ಮಾತ್ರವೇ ನಾಮಿನಿಗಳನ್ನು ಅನುಮತಿಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.
“ಠೇವಣಿದಾರರು ಗರಿಷ್ಠ ನಾಲ್ಕು ವ್ಯಕ್ತಿಗಳನ್ನು ತಮ್ಮ ಖಾತೆಯ ಉತ್ತರದಾಯಿತ್ವಕ್ಕೆ ನಾಮಿನಿ ಮಾಡಬಹುದು. ಪ್ರತಿ ನಾಮಿನಿಗೆ ಅರ್ಹತೆಯ ಪಾಲು ಅಥವಾ ಶೇಕಡಾವಾರು ಪ್ರಮಾಣವನ್ನು ನಿರ್ದಿಷ್ಟಪಡಿಸಬಹುದು. ಒಟ್ಟು ಮೊತ್ತವು 100%ರಷ್ಟು ಸಮನಾಗಿರುತ್ತದೆ. ಎಲ್ಲ ನಾಮಿನಿಗಳಲ್ಲಿ ಪಾರದರ್ಶಕ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: 50% ಮಿತಿ ದಾಟಿದ ತೆಲಂಗಾಣ ಮೀಸಲಾತಿಗೆ ಸುಪ್ರೀಮ್ ತಡೆ; ಕರ್ನಾಟಕಕ್ಕೂ ಅಡೆ-ತಡೆ?
ಠೇವಣಿಗಳು ಅಥವಾ ವಸ್ತುಗಳನ್ನು ಸುರಕ್ಷಿತ ಕಸ್ಟಡಿಯಲ್ಲಿ ಅಥವಾ ಲಾಕರ್ಗಳಲ್ಲಿ ಇರಿಸಿ, ನಿರ್ವಹಿಸುವ ವ್ಯಕ್ತಿಗಳು ನಾಲ್ಕು ನಾಮಿನಿಗಳನ್ನು ಸೇರಿಸಬಹುದು. ಅದರಲ್ಲಿ, ಠೇವಣಿದಾರರಿಗೆ ಮೊದಲ ನಾಮಿನಿಯು ಉತ್ತರದಾಯಿ ಆಗಿರುತ್ತಾರೆ. ಮೊದಲ ನಾಮಿನಿಯ ಮರಣದ ನಂತರವೇ ಎರಡನೇ ನಾಮಿನಿ ಉತ್ತರದಾಯಿಯಾಗಿ ಕಾರ್ಯನಿರ್ವಹಿಸುತ್ತಾರೆ. ಇದು, ಹೀಗೆಯೇ ನಾಲ್ವರು ನಾಮಿನಿಗಳಿಗೆ ಮುಂದುವರೆಯುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯ್ದೆ-2025 ಬ್ಯಾಂಕಿಂಗ್ ವಲಯದಲ್ಲಿ ಆಡಳಿತ ಮಾನದಂಡಗಳನ್ನು ಬಲಪಡಿಸುತ್ತದೆ. ಅರ್ಬಿಐಗೆ ಬ್ಯಾಂಕುಗಳು ವರದಿ ಸಲ್ಲಿಸುವಲ್ಲಿ ಏಕರೂಪತೆಯನ್ನು ಖಚಿತಪಡಿಸುವುದು, ಠೇವಣಿದಾರರು ಮತ್ತು ಹೂಡಿಕೆದಾರರ ರಕ್ಷಣೆಯನ್ನು ಹೆಚ್ಚಿಸುವುದು, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಲೆಕ್ಕಪರಿಶೋಧನಾ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಸುಧಾರಿತ ನಾಮನಿರ್ದೇಶನ ಸೌಲಭ್ಯಗಳ ಮೂಲಕ ಗ್ರಾಹಕರಿಗೆ ಹಚ್ಚು ಅನುಕೂಲ ಒದಗಿಸುವುದು ತಿದ್ದುಪಡಿ ಕಾಯ್ದೆಯ ಉದ್ದೇಶವೆಂದು ಹಣಕಾಸು ಸಚಿವಾಲಯ ವಿವರಿಸಿದೆ.




