ಪರಿಸರ ರಕ್ಷಣೆಯ ಕಾಳಜಿಯೊಂದಿಗೆ ಕಾರ್ಯನಿರ್ವಹಿಸಬೇಕಾದ ಮಂಡಳಿಯೇ, ಪರಿಸರ ನಾಶಕ್ಕೆ ಅನುಮತಿ ನೀಡಿದೆ. ಪರಿಸರ ಮತ್ತು ಮಾನವೀಯ ವಿನಾಶದ ಪ್ರಮಾಣವು ಅತಿ ದುಬಾರಿಯಾಗಿರುವುದರಿಂದ ದೀರ್ಘಕಾಲೀನವಾಗಿ ದೇಶಕ್ಕೆ ಹಾನಿಯಾಗಬಹುದು.
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಯೋಜನೆಗಳಲ್ಲಿ ಒಂದಾದ ‘ಗ್ರೇಟ್ ನಿಕೋಬಾರ್ ಯೋಜನೆ’ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಸಮ್ಮತಿ ನೀಡಿದೆ. ಸುಮಾರು 92,000 ಕೋಟಿ ರೂ. ವೆಚ್ಚದಲ್ಲಿ ನಿಕೋಬಾರ್ ದ್ವೀಪವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುತ್ತೇವೆಂದು ಮೋದಿ ಸರ್ಕಾರ 2021ರಲ್ಲಿ ಈ ಯೋಜನೆಯನ್ನು ರೂಪಿಸಿತ್ತು. ಆದರೆ, ಈ ಯೋಜನೆಯು ಪರಿಸರ ವ್ಯವಸ್ಥೆ ಮತ್ತು ಅಲ್ಲಿನ ನಿವಾಸಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆಂದು ವಿರೋಧ ವ್ಯಕ್ತವಾಗಿತ್ತು. ಆದಾಗ್ಯೂ, ಯೋಜನೆಗೆ ಎನ್ಜಿಟಿ ಅನುಮೋದನೆ ನೀಡಿದೆ. ಪರಿಸರ ಅನುಮತಿಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಸಮಂಜಸ ಕಾರಣಗಳಿಲ್ಲ ಎಂದು ಎನ್ಜಿಟಿ ಹೇಳಿದೆ. ಎನ್ಜಿಟಿ ಆದೇಶವು ನಿಕೋಬಾರ್ ನಿವಾಸಿಗಳಲ್ಲಿ ಆತಂಕ ಹುಟ್ಟುಹಾಕಿದೆ.
ಸೋಮವಾರ, ಯೋಜನೆಯ ದಾಖಲೆಗಳನ್ನು ಪರಿಶೀಲಿಸಿರುವ ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಪೀಠವು, “ಹಸ್ತಕ್ಷೇಪ ಮಾಡಲು ಯಾವುದೇ ಕಾರಣಗಳಿಲ್ಲ. ಯೋಜನೆಯಲ್ಲಿ ಪೂರಕ ರಕ್ಷಣಾ ಕ್ರಮಗಳು ಇರುವುದನ್ನು ನಾವು ಗಮನಿಸಿದ್ದೇವೆ. ಯೋಜನೆಯ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಹಾಗೆಯೇ, ದ್ವೀಪ ಕರಾವಳಿ ನಿಯಂತ್ರಣ ವಲಯದ (ICRZ) ನಿಯಮಗಳನ್ನು ನಿರ್ಲಕ್ಷಿಸುವಂತಿಲ್ಲ” ಎಂದು ಹೇಳಿದೆ.
ಅಂಡಮಾನ್-ನಿಕೋಬಾರ್ ದ್ವೀಪಸಮೂಹದ ದಕ್ಷಿಣ ಭಾಗದಲ್ಲಿರುವ ‘ಗ್ರೇಟ್ ನಿಕೋಬಾರ್ ದ್ವೀಪ’ದಲ್ಲಿ ಅಂತಾರಾಷ್ಟ್ರೀಯ ಕಂಟೈನರ್ ಟ್ರಾನ್ಸ್ಶಿಪ್ಮೆಂಟ್ ಬಂದರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿದ್ಯುತ್ ಸ್ಥಾವರ (ಗ್ಯಾಸ್ ಮತ್ತು ಸೌರ ಆಧಾರಿತ 450 MVA), ಏಕೀಕೃತ ಪಟ್ಟಣದ ಅಭಿವೃದ್ಧಿ ಹಾಗೂ ಸಂಬಂಧಿತ ಮೂಲಸೌಕರ್ಯಗಳನ್ನು ನಿರ್ಮಿಸುವುದು ಯೋಜನೆಯ ಪ್ರಮುಖ ಭಾಗವಾಗಿದೆ. ಯೋಜನೆಯು ಮಲಾಕ್ಕಾ ನದಿ ಕಣಿವೆಯನ್ನು ಭಾರತದ ಮುಖ್ಯ ಸಮುದ್ರ ಸಂಪರ್ಕ ಹಬ್ ಆಗಿ ನಿರ್ಮಿಸಿಕೊಳ್ಳುವುದು ಕೇಂದ್ರ ಸರ್ಕಾರದ ತಂತ್ರವಾಗಿದೆ.
ನಿಕೋಬಾರ್ನ 166 ಚದರ ಕಿ.ಮೀ. ವ್ಯಾಪ್ತಿಯನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವ ಈ ಬೃಹತ್ ಯೋಜನೆಯು 130 ಚ.ಕಿ.ಮೀ. ಅರಣ್ಯ ಭೂಮಿಯನ್ನು ಒಳಗೊಳ್ಳಲಿದೆ. ಈ ಪ್ರದೇಶದ ಸುಮಾರು 80-85% ಭಾಗವು ಪ್ರಾಚೀನ ಉಷ್ಣವಲಯದ ಸದಾ ಹಸಿರು ಮಳೆಕಾಡುಗಳಿಂದ ಆವೃತವಾಗಿದೆ. ಇದು ‘ಸುಂದರಲ್ಯಾಂಡ್ ಬಯೋಡೈವರ್ಸಿಟಿ ಹಾಟ್ಸ್ಪಾಟ್’ನ ಭಾಗವಾಗಿದೆ. ಆದರೆ, ಈ ಮಳೆಕಾಡುಗಳಿಗೆ ಕೇಂದ್ರ ಸರ್ಕಾರ ಕೊಡಲಿ ಹಾಕಲು ಮುಂದಾಗಿದೆ. ಅದಕ್ಕೆ, ಎನ್ಜಿಟಿ ಕೂಡ ಅನುಮೋದನೆ ನೀಡಿದೆ.
ಯೋಜನೆಯಿಂದಾಗಿ ನಿಕೋಬಾರ್ ಪರಿಸರದ ಮೇಲಿನ ಪರಿಣಾಮಗಳು ಅತ್ಯಂತ ಭಯಾನಕವಾಗಿವೆ. ಕೇಂದ್ರ ಸರ್ಕಾರದ ಅಂದಾಜಿನ ಪ್ರಕಾರ ಸುಮಾರು 8.5 ಲಕ್ಷದಿಂದ 10 ಲಕ್ಷ ಮರಗಳನ್ನು ಕಡಿಯಲಾಗುತ್ತದೆ. ಆದರೆ, ಸ್ವತಂತ್ರ ಪರಿಸರ ತಜ್ಞರು ಮತ್ತು ಜೀವಶಾಸ್ತ್ರಜ್ಞರು ಹೇಳುವಂತೆ; ಯೋಜನೆಗಾಗಿ ಈ ಪ್ರದೇಶದಲ್ಲಿ ಕನಿಷ್ಠ 38 ಲಕ್ಷದಿಂದ 1 ಕೋಟಿ ಮರಗಳನ್ನು ಕಡಿಯುವ ಸಾಧ್ಯತೆಗಳಿವೆ. ಇದು ದ್ವೀಪದ ಸುಮಾರು 12-20% ಕಾಡನ್ನು ಸಂಪೂರ್ಣವಾಗಿ ನಾಶಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗಲತಿಯಾ ಬೇ (Galathea Bay)ಯಲ್ಲಿ ಬಂದರು ನಿರ್ಮಾಣಕ್ಕಾಗಿ ಡ್ರೆಡ್ಜಿಂಗ್ ಮಾಡುವುದರಿಂದ ಕೋರಲ್ ರೀಫ್ಗಳು, ಮ್ಯಾಂಗ್ರೋವ್ ಕಾಡುಗಳು ಹಾಗೂ ಸಮುದ್ರ ಹುಲ್ಲುಗಾವಲುಗಳು ಸಂಪೂರ್ಣವಾಗಿ ನಾಶವಾಗುವ ಅಪಾಯವಿದೆ. ಇದರಿಂದ, ದ್ವೀಪವು ಸುನಾಮಿ ಮತ್ತು ಚಂಡಮಾರುತಗಳಿಂದ ಸ್ವಾಭಾವಿಕ ರಕ್ಷಣೆಯನ್ನು ಕಳೆದುಕೊಳ್ಳುತ್ತದೆ.

ಅಲ್ಲದೆ, ನಿಕೊಬಾರ್ ದ್ವೀಪವು ನಿಕೋಬಾರ್ ಮೆಗಾಪೋಡ್ (ನಿಕೋಬಾರ್ನಲ್ಲಿ ಮಾತ್ರವೇ ಕಂಡುಬರುವ ಪಕ್ಷಿ), ಲೆದರ್ಬ್ಯಾಕ್ ಟರ್ಟಲ್, ನಿಕೋಬಾರ್ ಮ್ಯಾಕಾಕ್, ಉಪ್ಪು ನೀರಿನ ಮೊಸಳೆಗಳು ಮುಂತಾದ ಅಪರೂಪದ ಮತ್ತು ಸ್ಥಳೀಯ ಪ್ರಭೇದಗಳ ಆವಾಸ ಸ್ಥಾನವಾಗಿದೆ. ಇಲ್ಲಿನ ಅರಣ್ಯ ನಾಶವು ಈ ಪ್ರಭೇದಗಳ ನೆಲೆಗಳನ್ನು ಸಂಪೂರ್ಣವಾಗಿ ಹಾನಿ ಮಾಡುತ್ತದೆ. ಪ್ರಭೇದಗಳ ಅವನತಿಗೂ ಕಾರಣವಾಗುತ್ತದೆ. ಅನೇಕ ಜಾತಿಯ ಪ್ರಾಣಿ-ಪಕ್ಷಗಳನ್ನು ವಿನಾಶದ ಅಂಚಿಗೆ ದೂಡುತ್ತದೆ.
ಮುಖ್ಯವಾಗಿ, ನಿಕೊಬಾರ್ನ ಮೂಲನಿವಾಸಿ ಸಮುದಾಯಗಳ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಉದ್ದೇಶಿತ ಯೋಜನೆಗೆ ಬಳಕೆಯಾಗುವ 166.10 ಚ.ಕಿ.ಮೀ. ಭೂಮಿಯಲ್ಲಿ ಸುಮಾರು 84.10 ಚ.ಕಿ.ಮೀ ಭೂಮಿಯು ನಿಕೋಬಾರ್ ಮೂಲನಿವಾಸಿಗಳ ವಾಸಸ್ಥಳ. ಇದೇ ಪ್ರದೇಶದಲ್ಲಿ 2004ರಲ್ಲಿ ಅಪ್ಪಳಿಸಿದ ಸುನಾಮಿಗೆ ನಿಕೋಬಾರ್ನ ನೂರಾರು ಮಂದಿ ಬಲಿಯಾಗಿದ್ದರು. ಇದೀಗ, ಅಲ್ಲಿನ ಜನರು ತಮ್ಮ ಪೂರ್ವಜರ ಭೂಮಿಯನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ಪ್ರಸ್ತುತ, ಭೂಸ್ವಾಧೀನಕ್ಕೆ ಒಳಗಾಗುವ ಭೂಮಿಯಲ್ಲಿ ‘ಶೋಂಪೆನ್’ ಮತ್ತು ‘ನಿಕೋಬಾರೀಸ್’ ಎಂಬ ಎರಡು ಮೂಲನಿವಾಸಿ ಸಮುದಾಯಗಳ ಸುಮಾರು 1,700-2,000 ಜನರು ವಾಸಿಸುತ್ತಿದ್ದಾರೆ. ಇವರಲ್ಲಿ, ಶೋಂಪೆನ್ ಸಮುದಾಯದ ಸುಮಾರು 200-400 ಜನರು ಪೂರ್ಣ ಅಥವಾ ಭಾಗಶಃ ಸಂಪರ್ಕರಹಿತರಾಗಿದ್ದಾರೆ. ಅವರು ತಮ್ಮ ಇಡೀ ಬದುಕಿಗೆ ಮಳೆಕಾಡನ್ನೇ ಆಶ್ರಯಿಸಿದ್ದಾರೆ. ಅವರು ಸಾವಿರಾರು ವರ್ಷಗಳಿಂದ ಕಾಡುಗಳಲ್ಲಿ ಬೇಟೆ ಮತ್ತು ಸಣ್ಣ ಕೃಷಿಕರಾಗಿ ಜೀವಿಸುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ಆಂಧ್ರ ಚುನಾವಣೆಯಲ್ಲಿ ಮಹಾಮೋಸದ ಸಾಧ್ಯತೆ!- ಪರಕಾಲ ಪ್ರಭಾಕರ್ ಆಸ್ಫೋಟಕ ವಿಶ್ಲೇಷಣೆ
ಮೋದಿ ಸರ್ಕಾರದ ಯೋಜನೆಯು ಅವರ ಭೂಮಿ, ಅರಣ್ಯ ಮತ್ತು ಜೀವನಾಧಾರ ಸಂಪೂರ್ಣವಾಗಿ ಕಸಿದುಕೊಳ್ಳುತ್ತದೆ. ಅಲ್ಲದೆ, ಯೋಜನೆ ಅಡಿಯಲ್ಲಿ ನಿರ್ಮಾಣವಾಗುವ ಪಟ್ಟಣಕ್ಕೆ ಸುಮಾರು 3.5 ಲಕ್ಷಕ್ಕೂ ಹೆಚ್ಚು ಹೊರಗಿನವರು ದಾಂಗುಡಿ ಇಡಲಿದ್ದಾರೆ. ಇವರ ದುಂಡಾವರ್ತನೆಗಳು ಸ್ಥಳೀಯ ಸಂಸ್ಕೃತಿ, ಭಾಷೆ ಹಾಗೂ ಜೀವನಶೈಲಿಯನ್ನು ಹಾಳುಗೆವುವ ಅಪಾಯವಿದೆ. ‘ಫಾರೆಸ್ಟ್ ರೈಟ್ಸ್ ಆಕ್ಟ್-2006’ರಂತೆ ಮೂಲನಿವಾಸಿಗಳ ಸಮ್ಮತಿ ಇಲ್ಲದೆ ಯೋಜನೆ ಮುಂದುವರೆಯುತ್ತಿರುವುದು ಕಾನೂನು ಉಲ್ಲಂಘನೆಯೂ ಆಗಿದೆ.
ಹೀಗಾಗಿ, ಸರ್ವೈವಲ್ ಇಂಟರ್ನ್ಯಾಷನಲ್ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಸರ್ಕಾರದ ಯೋಜನೆಯನ್ನು ‘ಗುಂಪು ನರಮೇಧ’ ಎಂದು ಕರೆದಿವೆ. 2024ರಲ್ಲಿ 39 ಜಾಗತಿಕ ತಜ್ಞರು ‘ಶೋಂಪೆನ್ಗೆ ಮರಣದಂಡನೆ’ ಎಂದು ಯೋಜನೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಯೋಜನೆಯನ್ನು ‘ಪರಿಸರ ದುರಂತ’ವೆಂದು ಕರೆದಿವೆ. ಯೋಜನೆಯ ರದ್ದತಿಗೆ ಒತ್ತಾಯಿಸಿವೆ.
ಆದರೂ, ಯೋಜನೆಗೆ ಎನ್ಜಿಟಿ ಅನುಮೋದನೆ ನೀಡಿದೆ. ಪರಿಸರ ರಕ್ಷಣೆಯ ಕಾಳಜಿಯೊಂದಿಗೆ ಕಾರ್ಯನಿರ್ವಹಿಸಬೇಕಾದ ಮಂಡಳಿಯೇ, ಪರಿಸರ ನಾಶಕ್ಕೆ ಅನುಮತಿ ನೀಡಿರುವುದು ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಆಗಿದೆ. ಪರಿಸರ ಮತ್ತು ಮಾನವೀಯ ವಿನಾಶದ ಪ್ರಮಾಣವು ಅತಿ ದುಬಾರಿಯಾಗಿರುವುದರಿಂದ ದೀರ್ಘಕಾಲೀನವಾಗಿ ದೇಶಕ್ಕೆ ಹಾನಿಯಾಗಬಹುದು.
ಅರಣ್ಯವನ್ನು ನಾಶ ಮಾಡಿ, ಆ ಜಾಗದಲ್ಲಿ ಟ್ರಾನ್ಸ್ಶಿಪ್ಮೆಂಟ್ ಬಂದರು, ಸಮಗ್ರ ಪಟ್ಟಣ, ನಾಗರಿಕ ಮತ್ತು ಮಿಲಿಟರಿ ವಿಮಾನ ನಿಲ್ದಾಣ ಹಾಗೂ 450-MVA ಗ್ಯಾಸ್ ಮತ್ತು ಸೌರಶಕ್ತಿ ಆಧಾರಿತ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವುದು ಅಭಿವೃದ್ಧಿಯಲ್ಲ ವಿನಾಶ ಎಂಬುದನ್ನು ಸರ್ಕಾರವೂ, ಎನ್ಜಿಟಿಯೂ ಅರಿತುಕೊಳ್ಳಬೇಕಿದೆ.





