ದೆಹಲಿ ಸ್ಫೋಟ ಪ್ರಕರಣದ ಆತ್ಮಹತ್ಯಾ ಬಾಂಬರ್ ಎಂದು ಹೇಳಲಾದ ಡಾ. ಉಮರ್ ಉನ್ ನಬಿಯ ಸಹಚರನನ್ನು ಭಯೋತ್ಪಾದನಾ ನಿಗ್ರಹ ಸಂಸ್ಥೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಭಾನುವಾರ ಬಂಧಿಸಿದೆ. ಈ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.
ಬಂಧಿತ ವ್ಯಕ್ತಿಯನ್ನು ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನಿವಾಸಿ ಅಮೀರ್ ರಶೀದ್ ಅಲಿ ಎಂದು ಗುರುತಿಸಲಾಗಿದೆ. ಬಂಧಿತ ವ್ಯಕ್ತಿ ಭಯೋತ್ಪಾದನಾ ದಾಳಿಯನ್ನು ನಡೆಸಲು ಆಪಾದಿತ ಆತ್ಮಹತ್ಯಾ ಬಾಂಬರ್ನೊಂದಿಗೆ ಸಂಚು ರೂಪಿಸಿದ್ದ. ದಾಳಿಯಲ್ಲಿ ಬಳಸಲಾಗಿರುವ ಬಿಳಿ i20 ಕಾರನ್ನು ಅಮೀರ್ ರಶೀದ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ | ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಸ್ಫೋಟ: ಎಂಟು ಮಂದಿ ಸಾವು
“ದೆಹಲಿ ಪೊಲೀಸ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಹರಿಯಾಣ ಪೊಲೀಸ್, ಯುಪಿ ಪೊಲೀಸ್ ಮತ್ತು ವಿವಿಧ ಸಂಸ್ಥೆಗಳ ಸಮನ್ವಯದೊಂದಿಗೆ ಎನ್ಐಎ ಕಾರ್ಯನಿರ್ವಹಿಸುತ್ತಿದ್ದು, ತನ್ನ ತನಿಖೆಯನ್ನು ಮುಂದುವರಿಸಿದೆ. ಬಾಂಬ್ ಸ್ಫೋಟದ ಹಿಂದಿನ ದೊಡ್ಡ ಪಿತೂರಿಯನ್ನು ಬಯಲು ಮಾಡಲು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ” ಎಂದು ತನಿಖಾ ಸಂಸ್ಥೆ ಹೇಳಿದೆ.
ಇನ್ನು ದೆಹಲಿ ಸ್ಫೋಟ ನಡೆಸಿದ ವ್ಯಕ್ತಿ ಡಾ. ಉಮರ್ ಉನ್ ನಬಿ ಎಂದು ದೆಹಲಿ ಪೊಲೀಸರು ಗುರುವಾರ ದೃಢಪಡಿಸಿದ್ದಾರೆ. ಉಮರ್ ಹರಿಯಾಣದ ಫರಿದಾಬಾದ್ನ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.





