ಗೃಹಿಣಿಯರ ಕೆಲಸವನ್ನು ನಿರ್ಲಕ್ಷಿಸುವುದು ಅನ್ಯಾಯ. ಅವರು ಮನೆಯಲ್ಲಿ ದುಡಿಯುವುದು ಅವರ ಸಂಗಾತಿಯು (ಪತಿ) ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ.
ಅರ್ಜಿದಾರ ಮಹಿಳೆ ಮತ್ತು ಆಕೆಯ ಪತಿ 2012ರಲ್ಲಿ ವಿವಾಹವಾಗಿದ್ದರು. ಆದರೆ, 2020ರಲ್ಲಿ ಪತ್ನಿ ಮತ್ತು ಅಪ್ರಾಪ್ತ ಮಗುವನ್ನು ಪತಿಯು ಕೈಬಿಟ್ಟಿದ್ದರು. ಬಳಿಕ, ಮಹಿಳೆಯರು ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ‘ಮಹಿಳೆಯು ದೈಹಿಕವಾಗಿ ಸದೃಢಳಾಗಿದ್ದಾರೆ ಮತ್ತು ಸುಶಿಕ್ಷಿತಳಾಗಿದ್ದಾರೆ. ಆದರೆ, ಅವರು ಉದ್ಯೋಗ ಹುಡುಕುತ್ತಿಲ್ಲ’ ಎಂಬ ಕಾರಣ ನೀಡಿ ಜೀವನಾಂಶ ನೀಡಲು ನಿರಾಕರಿಸಿತ್ತು. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅವರ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ವಿಚಾರಣೆ ನಡೆಸಿದ್ದಾರೆ. “ಪತ್ನಿಯು ಹೊರಗೆ ದುಡಿಯುತ್ತಿಲ್ಲ ಎಂಬ ಕಾರಣಕ್ಕಾಗಿ ಆಕೆಯನ್ನು ಸೋಮಾರಿಯೆಂದು ಆಲಸ್ಯ ಮಾಡುವುದು ಅಥವಾ ಉದ್ದೇಶಪೂರ್ವಕ ಅವಲಂಬನೆಯೆಂದು ಬೊಟ್ಟುಮಾಡುವುದು ಸರಿಯಲ್ಲ. ಜೀವನಾಂಶವನ್ನು ನಿರ್ಧರಿಸುವಾಗ, ಕಾನೂನು ಕೇವಲ ಆರ್ಥಿಕ ಗಳಿಕೆಯನ್ನು ಮಾತ್ರವಲ್ಲದೆ, ಆಕೆ ಕುಟುಂಬ ಮತ್ತು ಮನೆಗೆ ನೀಡುವ ಕೊಡುಗೆಯ ಆರ್ಥಿಕ ಮೌಲ್ಯವನ್ನು ಗುರುತಿಸಬೇಕು” ಎಂದು ಹೇಳಿದ್ದಾರೆ.
“ಗಳಿಕೆಯಿಲ್ಲದ ಸಂಗಾತಿಯು (ಪತ್ನಿ) ‘ಸೋಮಾರಿ’ ಎಂಬುದು ಕೌಟುಂಬಿಕ ಕೊಡುಗೆಗಳ ಬಗ್ಗೆ ಇರುವ ತಪ್ಪು ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಉದ್ಯೋಗವಿಲ್ಲದಿರುವುದನ್ನು ಸೋಮಾರಿತನ ಎಂದು ಬಣ್ಣಿಸುವುದು ಸುಲಭ; ಆದರೆ ಮನೆಯನ್ನು ಸುಸ್ಥಿತಿಯಲ್ಲಿಡಲು ಮಹಿಳೆಯರು ವ್ಯಯಿಸುವ ಶ್ರಮವನ್ನು ಗುರುತಿಸುವುದು ಹೆಚ್ಚು ಕಷ್ಟಕರ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
“ಗೃಹಿಣಿಯಾದವಳು ಸುಮ್ಮನೆ ಸೋಮಾರಿಯಾಗಿ ಕೂರುವುದಿಲ್ಲ; ತನ್ನ ಪತಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಆಕೆ ತನ್ನ ಶ್ರಮವನ್ನು ವ್ಯಯಿಸುತ್ತಾಳೆ. ಮನೆಯನ್ನು ನಿರ್ವಹಿಸುವುದು, ಮಕ್ಕಳನ್ನು ಪಾಲಿಸುವುದು, ಕುಟುಂಬಕ್ಕೆ ಬೆಂಬಲ ನೀಡುವುದು ಹಾಗೂ ದುಡಿಯುವ ಸಂಗಾತಿಯ ವೃತ್ತಿಜೀವನ ಮತ್ತು ವರ್ಗಾವಣೆಗಳಿಗೆ ಅನುಗುಣವಾಗಿ ತನ್ನ ಜೀವನವನ್ನು ಹೊಂದಿಸಿಕೊಳ್ಳುವುದು ಎಲ್ಲವೂ ಕೆಲಸದ ರೂಪಗಳೇ ಆಗಿವೆ; ಅವುಗಳಿಗೆ ಹಣ ಪಾವತಿಸದಿದ್ದರೂ ಮತ್ತು ಅವುಗಳನ್ನು ಹೆಚ್ಚಾಗಿ ಗುರುತಿಸದಿದ್ದರೂ ಅವು ಶ್ರಮವೇ. ಈ ಜವಾಬ್ದಾರಿಗಳು ಬ್ಯಾಂಕ್ ಸ್ಟೇಟ್ಮೆಂಟ್ಗಳಲ್ಲಿ ಕಾಣಿಸುವುದಿಲ್ಲ ಅಥವಾ ತೆರಿಗೆಗೆ ಒಳಪಡುವ ಆದಾಯವನ್ನು ಸೃಷ್ಟಿಸುವುದಿಲ್ಲ. ಆದರೂ ಅವು ಅನೇಕ ಕುಟುಂಬಗಳು ಕಾರ್ಯನಿರ್ವಹಿಸುವ ಅದೃಶ್ಯ ಅಡಿಪಾಯಗಳಾಗಿವೆ. ಜೀವನಾಂಶದ ಹಕ್ಕುಗಳನ್ನು ನಿರ್ಧರಿಸುವಾಗ ಈ ಕೊಡುಗೆಯನ್ನು ನಿರ್ಲಕ್ಷಿಸುವುದು ಅವಾಸ್ತವಿಕ ಮತ್ತು ಅನ್ಯಾಯದಾಯಕವಾಗಿರುತ್ತದೆ” ಎಂದಿದ್ದಾರೆ.
“ಕೆಲಸ ಮಾಡಲು ಸಮರ್ಥರಾಗಿರುವ ಮತ್ತು ಇಚ್ಛೆಯಿರುವ ಮಹಿಳೆಯರನ್ನು ಪ್ರೋತ್ಸಾಹಿಸಬೇಕು. ಆದರೆ, ಆಕೆ ಗಳಿಸುವ ಸಾಮರ್ಥ್ಯ ಹೊಂದಿದ್ದಾಳೆ ಮತ್ತು ಪತಿಯ ಮೇಲೆ ಅವಲಂಬಿತಳಾಗಬಾರದು ಎಂಬ ಏಕೈಕ ಕಾರಣಕ್ಕಾಗಿ ಜೀವನಾಂಶವನ್ನು ನಿರಾಕರಿಸುವುದು ದೋಷಪೂರಿತ ವಿಧಾನ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
“ಭಾರತೀಯ ಸಮಾಜದಲ್ಲಿ, ವಿವಾಹದ ನಂತರ ಮಹಿಳೆಯು ಉದ್ಯೋಗವನ್ನು ಬಿಡಬೇಕೆಂದು ಇಂದಿಗೂ ನಿರೀಕ್ಷಿಸಲಾಗುತ್ತದೆ. ಆದರೆ ವೈವಾಹಿಕ ವಿವಾದಗಳ ಸಂದರ್ಭದಲ್ಲಿ ಪತಿ ತಮ್ಮ ‘ಉತ್ತಮ ವಿದ್ಯಾರ್ಹತೆ ಹೊಂದಿರುವ’ ಪತ್ನಿಗೆ ಜೀವನಾಂಶ ನಿರಾಕರಿಸಲು, ಆಕೆ ಉದ್ದೇಶಪೂರ್ವಕವಾಗಿ ನಿರುದ್ಯೋಗಿಯಾಗಿರಲು ನಿರ್ಧರಿಸಿದ್ದಾರೆಂದು ಆರೋಪಿಸುವ ಮೂಲಕ ವಿಭಿನ್ನ ನಿಲುವು ತೆಗೆದುಕೊಳ್ಳುತ್ತಾರೆ” ಎಂದು ನ್ಯಾಯಾಲಯ ಗಮನಿಸಿದೆ.
ಈ ಲೇಖನ ಓದಿದ್ದೀರಾ?: ಭಾರತದಲ್ಲಿ ಮಾವೋವಾದ ಅಳಿಯಿತೇ; ಕಮ್ಯೂನಿಸ್ಟ್ ವಿಚಾರಧಾರೆಗೆ ಸಂಘಪರಿವಾರ ಭಯಪಡುವುದೇಕೆ?
“ಇಂತಹ ನಿಲುವನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಕುಟುಂಬವನ್ನು ಕಟ್ಟಲು ಸಮಯ, ಶ್ರಮ ಹಾಗೂ ವರ್ಷಗಳನ್ನು ವ್ಯಯಿಸಿದ ಸಂಗಾತಿಯು ಆರ್ಥಿಕವಾಗಿ ಅಸಹಾಯಕ ಸ್ಥಿತಿಗೆ ತಲುಪದಂತೆ ಕಾನೂನು ಖಚಿತಪಡಿಸಿಕೊಳ್ಳಬೇಕು. ಮದುವೆ ಅಥವಾ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ತನ್ನ ವೃತ್ತಿಯಿಂದ ದೂರ ಸರಿದ ಮಹಿಳೆಯು, ನಂತರದ ದಿನಗಳಲ್ಲಿ ಅದೇ ಮಟ್ಟದ ಸಂಬಳ ಅಥವಾ ವೃತ್ತಿಪರ ಸ್ಥಾನಮಾನದೊಂದಿಗೆ ಮತ್ತೆ ಉದ್ಯೋಗವನ್ನು ಮುಂದುವರಿಸುತ್ತಾರೆ ಎನ್ನಲು ಸಾಧ್ಯವಿಲ್ಲ” ಎಂದು ಕೋರ್ಟ್ ಹೇಳಿದೆ.
“ಪ್ರಸ್ತುತ ಪ್ರಕರಣದಲ್ಲಿ, ಪತ್ನಿಯು ಈ ಹಿಂದೆ ಅಥವಾ ಪ್ರಸ್ತುತ ಕೆಲಸ ಮಾಡುತ್ತಿದ್ದ ಬಗ್ಗೆ ಅಥವಾ ಆಕೆಗೆ ಆದಾಯವಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ, ‘ಗೃಹ ಹಿಂಸೆ ತಡೆ ಕಾಯ್ದೆ’ಯಡಿ ಆಕೆಗೆ ಪತಿಯು 50,000 ರೂ. ಜೀವನಾಂಶವನ್ನು ನೀಡಬೇಕು” ಎಂದು ಆದೇಶಿಸಿದೆ.




