“ನೋಟುಗಳನ್ನು ಹಿಂಪಡೆದ ವೇಳೆ, ಜನಸಾಮಾನ್ಯರು ಅನುಭವಿಸಿದ ಕಷ್ಟ ಕಾರ್ಪಣ್ಯಗಳ ಬಗ್ಗೆ ನಾನು ಚಿಂತಿತಳಾಗಿದ್ದೆ. ನೋಟ್ ಬ್ಯಾನ್ ಅನ್ನು ತರಾತುರಿಯಲ್ಲಿ ಮಾಡಲಾಗಿದೆ. ಕಾನೂನಿಗೆ ಅನುಸಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಇರಲಿಲ್ಲ. ಅಲ್ಲದೇ, ಈ ಬಗ್ಗೆ ಸ್ವತಃ ಹಣಕಾಸು ಸಚಿವರಿಗೂ ತಿಳಿದಿರಲಿಲ್ಲ ಎಂದು ಕೆಲವರು ಹೇಳುತ್ತಾರೆ” ಎಂದು ನೋಟು ಅಮಾನ್ಯೀಕರಣ ವಿಚಾರದಲ್ಲಿ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನಾಗರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ನ ನಲ್ಸಾರ್ ಕಾನೂನು ವಿಶ್ವವಿದ್ಯಾಲಯ ಆಯೋಜಿಸಿದ್ದ ನ್ಯಾಯಾಲಯಗಳು ಮತ್ತು ಸಂವಿಧಾನ ಸಮ್ಮೇಳನ 2024ನ್ನು ಉದ್ದೇಶಿಸಿ ಮಾತನಾಡಿದ ಅವರು, “ನೋಟ್ ಬ್ಯಾನ್ ಮಾಡಿದ ರೀತಿ ಸರಿಯಿಲ್ಲ. ಸಾಯಂಕಾಲ ನೋಟು ಬ್ಯಾನ್ ಮಾಡುವ ಬಗ್ಗೆ ಮಾತನಾಡಿ ಮರುದಿನ ಬ್ಯಾನ್ ಮಾಡಲಾಗಿದೆ. ಪೇಪರ್ ಕರೆನ್ಸಿಯಿಂದ ಪ್ಲಾಸ್ಟಿಕ್ ಕರೆನ್ಸಿಗೆ ಹೋಗಲು ಬಯಸಿದರೆ, ಖಂಡಿತವಾಗಿ, ನೋಟು ಬ್ಯಾನ್ ಅದಕ್ಕೆ ಕಾರಣವಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
“2016ರ ನವೆಂಬರ್ 8ರಂದು ಏನಾಯಿತು. ಆಗ ₹500 ಮತ್ತು ₹1000 ನೋಟುಗಳನ್ನು ಬ್ಯಾನ್ ಮಾಡಿದಾಗ ಏನಾಯಿತು ಎಂಬ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರಲ್ಲಿ ಕುತೂಹಲಕಾರಿ ಅಂಶವೆಂದರೆ, ಆ ಕಾಲದ ಭಾರತೀಯ ಆರ್ಥಿಕತೆಯಲ್ಲಿ 86% ಕರೆನ್ಸಿಯು ₹500 ಮತ್ತು ₹1,000 ನೋಟು ಒಳಗೊಂಡಿತ್ತು. ಕೇಂದ್ರ ಸರ್ಕಾರ ಇದನ್ನು ಗಮನಿಸದೇ ಹೋಯಿತು ಎಂದು ನನಗೆ ಅನಿಸುತ್ತದೆ” ಎಂದು ತಿಳಿಸಿದ್ದಾರೆ.
ಈ ಆರ್ಥಿಕತೆಯ 86% ರಷ್ಟು ಕರೆನ್ಸಿಯೂ ₹500 ಮತ್ತು ₹1000 ನೋಟುಗಳಾಗಿದ್ದವು. ಆ ದಿನಗಳಲ್ಲಿ ಕಾರ್ಮಿಕನೊಬ್ಬ ತನ್ನ ದೈನಂದಿನ ಅಗತ್ಯಗಳಿಗಾಗಿ ಈ ನೋಟುಗಳನ್ನು ಬದಲಿಸಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಈ ಬಗ್ಗೆ ಒಮ್ಮೆ ಊಹಿಸಿ. ಅಲ್ಲದೆ, ಶೇ. 98ರಷ್ಟು ನೋಟುಗಳು ಮರಳಿ ಆರ್ಬಿಐಗೆ ಬಂದಿವೆ. ಹಾಗಾದರೆ ನೋಟು ಅಮಾನ್ಯೀಕರಣದ ಉದ್ದೇಶವಾಗಿದ್ದ ಕಪ್ಪು ಹಣ ನಿರ್ಮೂಲನೆ ವಿಚಾರದಲ್ಲಿ ನಾವು ಎಲ್ಲಿದ್ದೇವೆ? ನೋಟು ರದ್ದತಿಯ ಗುರಿ ಏನು” ಎಂದು ಪ್ರಶ್ನಿಸಿದರು.
“ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಲು, ಲೆಕ್ಕದಲ್ಲಿಲ್ಲದ ಹಣ ವ್ಯವಸ್ಥೆಗೆ ಪ್ರವೇಶಿಸಲು ಇದು ಉತ್ತಮ ಮಾರ್ಗವಾಯಿತು ಎಂದು ಭಾವಿಸಿದೆ. ಅಲ್ಲದೇ, ಈ ಬಳಿಕ ಆದಾಯ ತೆರಿಗೆ ಪ್ರಕ್ರಿಯೆ ಸಂಬಂಧಿಸಿದಂತೆ ಏನಾಯಿತು ಎಂಬ ಬಗ್ಗೆ ಈವರೆಗೂ ತಿಳಿದಿಲ್ಲ. ಸಾಮಾನ್ಯ ಮನುಷ್ಯನ ದುಃಸ್ಥಿತಿ ನಿಜವಾಗಿಯೂ ನನ್ನನ್ನು ಚಿಂತಿತಳನ್ನಾಗಿಸಿತು. ‘ವಿವೇಕ್ ನಾರಾಯಣ ಶರ್ಮಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ’ ಭಿನ್ನ ತೀರ್ಪು ನೀಡುವಂತೆ ಮಾಡಿತು. ಆ ತೀರ್ಪು ನೀಡಿದ ಪೀಠದ ಭಾಗವಾಗಿದ್ದಕ್ಕೆ ನಾನು ಖುಷಿ ಪಡುತ್ತೇನೆ” ಎಂದಿದ್ದಾರೆ.
ಲಾಕ್ಡೌನ್ನಿಂದಾಗಿ ಸುಪ್ರೀಂಕೋರ್ಟ್ ಮತ್ತು ಇತರ ನ್ಯಾಯಾಲಯಗಳಲ್ಲಿನ ವಿಚಾರಣೆಗಳು ಕಡಿಮೆಯಾದವು ಮತ್ತು ವಿಚಾರಣೆಗಳನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಸಲಾಗುತ್ತಿತ್ತು. ಸಾಂಕ್ರಾಮಿಕ ರೋಗದ ನಂತರ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ನ್ಯಾಯಮೂರ್ತಿ ಯುಯು ಲಲಿತ್ ಅವರು ಎಸ್ಸಿಯ ಕೆಲಸವನ್ನು ಶ್ರದ್ಧೆಯಿಂದ ಮುನ್ನಡೆಸಿದರು.
ಈ ಸುದ್ದಿ ಓದಿದ್ದೀರಾ? ಸಂವಿಧಾನಕ್ಕೆ ಬದ್ಧರಾಗಿ ರಾಜ್ಯಪಾಲರು ಕಾರ್ಯನಿರ್ವಹಿಸಬೇಕು: ಸುಪ್ರೀಂ ಕೋರ್ಟ್ ನ್ಯಾ. ನಾಗರತ್ನ
“ಅವರು ದೀರ್ಘಕಾಲ ಬಾಕಿ ಇರುವ ಪ್ರಕರಣಗಳನ್ನು ಸುಧಾರಿಸಲು ಮತ್ತು ವಿಲೇವಾರಿ ಮಾಡಲು ನಿರ್ಧರಿಸಿದರು. ಆದ್ದರಿಂದ, ಅವರು 5 ಸಂವಿಧಾನ ಪೀಠಗಳನ್ನು ಸ್ಥಾಪಿಸಿದರು. ತೀರಾ ಇತ್ತೀಚೆಗೆ ಹೈಕೋರ್ಟ್ಗೆ ಸೇರಿದ್ದ ನನ್ನನ್ನೂ ಒಳಗೊಂಡಂತೆ ಸುಪ್ರೀಂಕೋರ್ಟ್ನ ಎಲ್ಲ 30 ನ್ಯಾಯಾಧೀಶರಿಗೆ ಸಂವಿಧಾನ ಪೀಠದಲ್ಲಿ ಅವಕಾಶ ಸಿಕ್ಕಿದೆ” ಎಂದು ಹೇಳಿದ್ದಾರೆ
“ಸಾಂವಿಧಾನಿಕ ಪೀಠಗಳು ಕಾನೂನು ವ್ಯಾಪ್ತಿಗೆ ಒಳಪಡುವ 25 ದೀರ್ಘ ಬಾಕಿ ಪ್ರಕರಣಗಳನ್ನು ಕೈಗೆತ್ತಿಕೊಂಡವು. ವಿವೇಕ್ ನಾರಾಯಣ ಶರ್ಮಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ 2023ರ ಪ್ರಕರಣವನ್ನು ಎಲ್ಲರೂ ಓದಲೇಬೇಕು. ಇದು ನೋಟು ಅಮಾನ್ಯೀಕರಣ ಕೇಸ್ ಎಂದು ಜನಪ್ರಿಯವಾಗಿದೆ. ಆ ಪೀಠದ ಭಾಗವಾಗಲು ನನಗೆ ಸಂತೋಷವಾಗಿದೆ” ಎಂದು ಹೇಳಿದ್ದಾರೆ.
“ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸಲು ಸುಪ್ರೀಂ ಕೋರ್ಟ್ ಮುಂದಡಿ ಇಡುತ್ತಿದೆ” ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು.
“ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಬಂಧಿತರಾದ ವ್ಯಕ್ತಿಗಳಿಗೆ ಬಂಧನದ ಲಿಖಿತ ಕಾರಣಗಳನ್ನು ಜಾರಿ ನಿರ್ದೇಶನಾಲಯ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಈಚೆಗೆ ನೀಡಿದ ತೀರ್ಪು ಸ್ವಲ್ಪ ಬಲಹೀನವಾಗಿತ್ತು” ಎಂದು ಅವರು ತಿಳಿಸಿದ್ದಾರೆ.




