ಮಹಿಳೆಯೊಬ್ಬರ ತಲೆ ಇಲ್ಲದ ಮೃತದೇಹ ಪತ್ತೆಯಾಗಿರುವ ಘಟನೆ ಒಡಿಶಾದ ಮಲಕನಗಿರಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯ ಮೃತದೇಹ ಪತ್ತೆಯಾದ ಬಳಿಕ, ಜಿಲ್ಲೆಯ ಎರಡು ಗ್ರಾಮಗಳ ನಡುವೆ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿದೆ. ಹಿಂಸಾಚಾರವನ್ನು ತಡೆಯಲು ಪೊಲೀಸ್ ಪಡೆಗಳನ್ನಜ ನಿಯೋಜನೆ ಮಾಡಲಾಗಿದ್ದು, ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮೃತ ಮಹಿಳೆಯನ್ನು ಜಿಲ್ಲೆಯ ರಾಖೇಲ್ಗುಡ ಗ್ರಾಮದ ಬುಡಕಟ್ಟು ಸಮುದಾಯದ ಲೇಕ್ ಪಡಿಯಾಮಿ ಎಂದು ಗುರುತಿಸಲಾಗಿದೆ. ಆಕೆಯ ಸಾವಿಗೆ MV-26 ಗ್ರಾಮದವರು ಕಾರಣವೆಂದು ರಾಖೇಲ್ಗುಡ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ನೂರಾರು ಬುಡಕಟ್ಟು ಪುರುಷರು ಮತ್ತು ಮಹಿಳೆಯರು ಶಸ್ತ್ರಾಸ್ತ್ರಗಳನ್ನು ಹಿಡಿದು MV-26 ಗ್ರಾಮಕ್ಕೆ ನುಗ್ಗಿ, ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಗ್ರಾಮಕ್ಕೆ ವೈಜ್ಞಾನಿಕ ತಂಡ, ಸ್ನಿಫರ್-ಡಾಗ್ ಸ್ಕ್ವಾಡ್ ಹಾಗೂ ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯ ಪಡೆಗಳು ಧಾವಿಸಿದ್ದು, ನಾಪತ್ತೆಯಾಗಿರುವ ಮಹಿಳೆಯ ರುಂಡವನ್ನು ಪತ್ತೆಹಚ್ಚಲು ಶೋಧ ನಡೆಸುತ್ತಿದ್ದಾರೆ.
ಮಹಿಳೆಯ ಸಾವು (ಕೊಲೆ) ಎರಡು ಗ್ರಾಮಗಳ ನಡುವಿನ ಹಿಂಸಾಚಾರಕ್ಕೆ ಕಾರಣವಾಗಿದ್ದು, ನಾಲ್ಕು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಸುಮಾರು 163 ಮನೆಗಳಿಗೆ ಹಾನಿಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಎರಡೂ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಉಭಯ ಗ್ರಾಮಗಳ ನಡುವೆ ಅಧಿಕಾರಿಗಳು ಸಂಧಾನ ಸಭೆ ನಡೆಸಿದ್ದಾರೆ. ಮೃತ ಮಹಿಳೆಯ ಮಗನಿಗೆ 30,000 ರೂ. ಪರಿಹಾರ ನೀಡಲಾಗಿದೆ. ಮುಖ್ಯಮಂತ್ರಿ ನಿಧಿಯಿಂದ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




