ದೇವಸ್ಥಾನವೊಂದರಲ್ಲಿ ಪ್ರಸಾದ ಸೇವಿಸಿದ ಆರೋಪದ ಮೇಲೆ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ದೆಹಲಿಯ ಸುಂದರ್ ನಗರಿ ಪ್ರದೇಶದಲ್ಲಿ ಮಂಗಳವಾರ(ಸೆ.26 ರಂದು) ನಡೆದಿದೆ. ಅಂಗವಿಕಲ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿದೆ.
ಮೃತಪಟ್ಟಿರುವ 26 ವರ್ಷದ ಅಂಗವಿಕಲ ವ್ಯಕ್ತಿ ಮೊಹಮ್ಮದ್ ಇಸಾರ್ ಎಂಬಾತ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ ಎನ್ನುವ ಕಾರಣಕ್ಕೆ ಕೆಲವರು ಇಸಾರನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಹಲ್ಲೆಗೊಳಗಾದ ಪರಿಣಾಮ ಕೆಲ ಸಮಯದ ಬಳಿಕ ಇಸಾರ್ ಮೃತಪಟ್ಟಿದ್ದಾನೆ.
ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಗುಂಪೊಂದು ವ್ಯಕ್ತಿಯನ್ನು ಕೋಲುಗಳಿಂದ ಹಲ್ಲೆ ಮಾಡುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಹೆಚ್ಚಾದ ಹಿಂಸಾಚಾರ: ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ವೆಂದು ಘೋಷಿಸಿದ ಸರ್ಕಾರ
ದೃಶ್ಯವನ್ನು ಪೊಲೀಸರು ಪರಿಶೀಲಿಸಿದ್ದು, ಸದ್ಯ ಅಹಿತಕರ ಘಟನೆ ನಡೆಯದಂತೆ ಘಟನಾ ಸ್ಥಳದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಮತ್ತೊಂದು ಸಮುದಾಯದ ಹುಡುಗನೊಬ್ಬನ ಹತ್ಯೆ ಆಗಿತ್ತು. ನಂತರ ಈ ಪ್ರದೇಶದಲ್ಲಿಉದ್ವಿಗ್ನತೆ ಉಂಟಾಗಿತ್ತು.
ಆದರೆ ಕೋಮುವಾದಿ ಗಲಭೆಯನ್ನು ನಿರಾಕರಿಸಿದ ಪೊಲೀಸರು, ಇಸಾರ್ ಮೇಲೆ ದಾಳಿ ಮಾಡಿದ ವ್ಯಕ್ತಿಗಳು ಎರಡೂ ಸಮುದಾಯಗಳಿಗೆ ಸೇರಿದವರು ಎಂದು ಪ್ರಾಥಮಿಕ ತನಿಖೆ ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಪ್ರಕರಣ ದಾಖಲಾಗಿದ್ದು, ಕೆಲ ಆರೋಪಿಗಳನ್ನು ಗುರುತಿಸಲಾಗಿದ್ದು, ಇತರರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಶೀಘ್ರದಲ್ಲೇ ಅವರನ್ನು ಕೂಡ ಬಂಧಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





