ಇತ್ತೀಚೆಗೆ, ರಾಜಸ್ಥಾನದ ಜೈಸಲ್ಮೇರ್ನಲ್ಲಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ 21 ಮಂದಿ ಪ್ರಯಾಣಿಕರು ಸಾವಪ್ಪಿದ್ದಾರೆ. 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ತುರ್ತು ನಿರ್ಗಮನ ದ್ವಾರವಿಲ್ಲದೆ ಜೀವಕ್ಕೆ ಹೇಗೆ ಅಪಾಯವಾಗಬಹುದು ಎಂಬುದನ್ನು ಬಿಚ್ಚಿಡುತ್ತದೆ. ಗಂಭೀರ ಚಿಂತನೆಗೆ ಹಚ್ಚುತ್ತದೆ.
ಜೈಸಲ್ಮೇರ್ ಮಾರ್ಗವಾಗಿ ಜೋಧ್ಪುರಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡು, ಸುಟ್ಟು ಕರಕಲಾಯಿತು. ಆ ಘಟನೆಯನ್ನು ಪ್ರತ್ಯಕ್ಷವಾಗಿ ಕಂಡವರು ಹೇಳುವಂತೆ; ಬಸ್ಗೆ ಒಂದೇ ಬಾಗಿಲು ಇದ್ದ ಕಾರಣ, ಪ್ರಯಾಣಿಕರು ತ್ವರಿತವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಾಗಿಲು ತೆರೆಯಲು ಅಗೆಯುವ ಯಂತ್ರವನ್ನು ಕರೆಸಬೇಕಾಯಿತು. ಸ್ಥಳಕ್ಕೆ ತುರ್ತು ಸೇವೆಗಳು ತಲುಪುವ ವೇಳೆಗೆ, ಅನೇಕರು ಸಾವನ್ನಪ್ಪಿದ್ದರು. ಇತರರು ತೀವ್ರವಾಗಿ ಗಾಯಗೊಂಡಿದ್ದರು. ಕಿಟಕಿಗಳನ್ನು ಒಡೆದು ಹೊರಗೆ ಹಾರಿದ ಕೆಲವು ಪ್ರಯಾಣಿಕರು ಬೆಂಕಿಯಿಂದ ಬದುಕುಳಿದರು.
ಘಟನೆ ನಡೆದ ಸಮಯದಲ್ಲಿ, ಬಸ್ ಥೈಯಾತ್ ಗ್ರಾಮದ ಬಳಿ ಇತ್ತು. ಈ ಗ್ರಾಮದಲ್ಲಿ 1971ರಲ್ಲಿ ನಡೆದ ಲೋಂಗೆವಾಲಾ ಕದನವನ್ನು ಸ್ಮರಿಸುವ ಯುದ್ಧ ವಸ್ತುಸಂಗ್ರಹಾಲಯವಿದೆ.
ಬಸ್ಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದಾಗಿ ದುರಂತ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಆ ಬಸ್ಅನ್ನು ಮಾರ್ಪಡಿಸಲಾಗಿತ್ತು. ಅಲ್ಲದೆ, ದುರಂತಕ್ಕೆ ಕಾರಣವಾಗುವ ಬಹಳಷ್ಟು ದಹನಕಾರಿ ವಸ್ತುಗಳು ಬಸ್ನಲ್ಲಿದ್ದವು ಎಂದು ಹೇಳಲಾಗಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 57 ಪ್ರಯಾಣಿಕರು ಬಸ್ನಲ್ಲಿದ್ದರು. ಬಲಿಪಶುಗಳ ಅನೇಕ ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ ಮತ್ತು ಡಿಎನ್ಎ ಪರೀಕ್ಷೆಯ ಮೂಲಕ ಅವರ ಗುರುತುಗಳನ್ನು ಕಂಡುಹಿಡಿಯಲಾಗುತ್ತಿದೆ.
ಈ ಲೇಖನ ಓದಿದ್ದೀರಾ?: ಎಸ್ಟಿ ಒಳಮೀಸಲಾತಿ ಮುನ್ನಲೆಗೆ; ‘ನಾಯಕ- ಕುರುಬ’ರ ನಡುವೆ ಬಿಕ್ಕಟ್ಟು ಮೂಡುವುದೇ?
ಸ್ಥಳೀಯ ಶಾಸಕ ಪ್ರತಾಪ್ ಪುರಿ ಹೇಳುವಂತೆ; “ಬಸ್ನಲ್ಲಿ ಬೆಂಕಿ ಹೊತ್ತಿಕೊಳ್ಳಬಹುದಾದ ವಸ್ತು ಇತ್ತು. ಬಸ್ನ ನಿರ್ಗಮನ ದ್ವಾರವು ‘ತುಂಬಾ ಕಿರಿದಾಗಿತ್ತು’. ಬಸ್ಗೆ ಎರಡನೇ ಬಾಗಿಲು ಕೂಡ ಇರಲಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಆದಾfಯೂ, ಎಸಿಯಿಂದ ಅನಿಲ ಸೋರಿಕೆಯಾಗಿದ್ದರಿಂದಲೂ ಘಟನೆ ನಡೆದಿರುವಂತೆ ಕಾಣುತ್ತದೆ” ಎಂದು ಹೇಳಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. “ಜೈಸಲ್ಮೇರ್ನಲ್ಲಿ ಬಸ್ಗೆ ಬೆಂಕಿ ಹೊತ್ತಿಕೊಂಡ ಘಟನೆ ಅತ್ಯಂತ ಹೃದಯ ವಿದ್ರಾವಕವಾಗಿದೆ. ಈ ದುರಂತ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ನಾನು ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಹೇಳಿದ್ದಾರೆ.




