‘ಆಪರೇಷನ್ ಕಾಲನೇಮಿ’ ಅಡಿಯಲ್ಲಿ ಉತ್ತರಾಖಂಡದ ಮೂರು ಜಿಲ್ಲೆಗಳಲ್ಲಿ ಇದುವರೆಗೆ 19 ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ ಒಟ್ಟು 511 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉತ್ತರಾಖಂಡ ಸರಕಾರ 2025ರ ಜುಲೈನಲ್ಲಿ ‘ಆಪರೇಷನ್ ಕಾಲನೇಮಿ‘ ಕಾರ್ಯಾಚರಣೆ ಆರಂಭಿಸಿದೆ.
ಈ ಅಭಿಯಾನದಡಿಯಲ್ಲಿ ಹರಿದ್ವಾರ, ಡೆಹ್ರಾಡೂನ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿ 4,800ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಲಾಗಿದ್ದು, ಅವರಲ್ಲಿ 511 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ರಾಜ್ಯದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 19 ಬಾಂಗ್ಲಾ ಪ್ರಜೆಗಳೂ ಸೇರಿದ್ದಾರೆ. ಅವರಲ್ಲಿ 10 ಜನರನ್ನು ಬಾಂಗ್ಲಾಕ್ಕೆ ವಾಪಸ್ ಕಳುಹಿಸಲಾಗಿದೆ. ಉಳಿದ 9 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಸ್ಮಸ್ ಆಚರಣೆಗೆ ಅಡ್ಡಿ; ಭಾರತದ ಬಹುತ್ವದ ಮೇಲಿನ ಈ ದಾಳಿ ಅಕ್ಷಮ್ಯ
“ಈ ಅಭಿಯಾನವು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧವಲ್ಲ, ಬದಲಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮತ್ತು ‘ದೇವಭೂಮಿ’ಯ ಘನತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಜನರ ನಂಬಿಕೆಯನ್ನು ಗೌರವಿಸಲಾಗುತ್ತದೆಯಾದರೂ, ನಂಬಿಕೆಯ ಸೋಗಿನಲ್ಲಿ ಅಪರಾಧ, ಬೂಟಾಟಿಕೆ ಮತ್ತು ವಂಚನೆ ಸಹಿಸಲಾಗದು” ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.





