ವಂದೇ ಮಾತರಂಅನ್ನು ವಿರೋಧಿಸುವುದು ಮತ್ತು ರಾಷ್ಟ್ರೀಯ ಚಿಹ್ನೆಗಳ ವಿರುದ್ಧ ಅವಮಾನಕರ ಹೇಳಿಕೆ ನೀಡುವುದು ದೇಶದ್ರೋಹಕ್ಕಿಂತ ಕಡಿಮೆಯಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶದ ಬಜೆಟ್ ಅಧಿವೇಶನದ ಸಮಯದಲ್ಲಿ ವಿಧಾನ ಪರಿಷತ್ತಿನಲ್ಲಿ ಅವರು ಮಾತನಾಡಿದರು. “ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸಂವಿಧಾನದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿವೆ. ರಾಷ್ಟ್ರೀಯ ಗೀತೆಯನ್ನು ಅಗೌರವಿಸುತ್ತಿವೆ ಎಂದು” ಆರೋಪಿಸಿದ್ದಾರೆ.
“ಭಾರತದ ಆತ್ಮದ ಮೇಲೆ ದಾಳಿ ಮಾಡಿದವರನ್ನು ಮತ್ತು ಆಕ್ರಮಣಕಾರರನ್ನು ರಾಜಕೀಯ ಲಾಭಕ್ಕಾಗಿ ಯಾರಾದರೂ ವೈಭವೀಕರಿಸಿದರೆ, ನವ ಭಾರತ ಮತ್ತು ಹೊಸ ಉತ್ತರ ಪ್ರದೇಶ ಅದನ್ನು ಸಹಿಸುವುದಿಲ್ಲ. ರಾಷ್ಟ್ರ ವಿರೋಧಿ ಅಂಶಗಳನ್ನು ಬೆಂಬಲಿಸುವ ಹೇಳಿಕೆಗಳನ್ನು ಅಥವಾ ರಾಷ್ಟ್ರೀಯ ಸಂಕೇತಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ದೇಶದ್ರೋಹಕ್ಕಿಂತ ಕಡಿಮೆಯಿಲ್ಲ” ಎಂದು ಹೇಳಿದ್ದಾರೆ.
“ನಾನು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಅನ್ನು ಕೇಳಲು ಬಯಸುತ್ತೇನೆ – ಒಂದು ಕಡೆ ನೀವು ಸಂವಿಧಾನದ ಹೆಸರಿನಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದೀರಿ. ಮತ್ತೊಂದೆಡೆ, ನಿಮ್ಮ ಸದಸ್ಯರು ವಂದೇ ಮಾತರಂ ಹಾಡುವಾಗ ಎದ್ದು ನಿಲ್ಲುವುದಿಲ್ಲ ಎಂದು ಹೇಳುತ್ತಾರೆ. ಇದರ ಅರ್ಥವೇನು? ನೀವು ಭಾರತದಲ್ಲಿ ವಾಸಿಸಲು ಬಯಸುತ್ತೀರಿ. ಆದರೆ, ರಾಷ್ಟ್ರೀಯ ಗೀತೆಯೊಂದಿಗೆ ಸಮಸ್ಯೆ ಇದೆಯೇ? ಇದನ್ನು ಸ್ವೀಕರಿಸಲು ಸಾಧ್ಯವಿಲ್ಲವೇ” ಎಂದಿದ್ದಾರೆ.
ಬಂಕಿಮ ಚಂದ್ರ ಚಟರ್ಜಿ ಅವರು ಬರೆದಿರುವ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು ದೇಶಾದ್ಯಂತ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಷ್ಟ್ರಗೀತೆಯೊಂದಿಗೆ ರಾಷ್ಟ್ರೀಯ ಗೀತೆ ವಂದೇ ಮಾತರಂಅನ್ನೂ ಹಾಡಬೇಕೆಂದು ಕಡ್ಡಾಯಗೊಳಿಸಿದೆ. ಆದರೆ, ವಂದೇ ಮಾತರಂನ 6 ಚರಣಗಳನ್ನೂ ಹಾಡಬೇಕೆಂದು ತಾಕೀತು ಮಾಡಿದೆ. ಇದು ಸಾಕಷ್ಟು ವಿರೋಧಕ್ಕೆ ಗುರಿಯಾಗಿದೆ. ವಂದೇ ಮಾತರಂನ ಮೊದಲ ಎರಡು ಚರಣಗಳು ದೇಶದ ವೈಭವವನ್ನು ವಿವರಿಸುತ್ತದೆ. ಈ ಎರಡು ಚರಣಗಳನ್ನು ಮಾತ್ರವೇ ರಾಷ್ಟ್ರೀಯ ಗೀತೆಯಾಗಿ ಸಂವಿಧಾನ ಸಭೆಯು ಆಯ್ಕೆ ಮಾಡಿದೆ. ಆದರೆ, ಉಳಿದ ಚರಣಗಳು ಕೋಮುದ್ವೇಷ, ರಕ್ತಪಾತವನ್ನು ಪ್ರಚೋದಿಸುತ್ತದೆ. ಹೀಗಾಗಿಯೇ, ಆ ನಾಲ್ಕು ಚರಣಗಳನ್ನು ಸಂವಿಧಾನ ಸಭೆಯು ರಾಷ್ಟ್ರೀಯ ಗೀತೆಯ ಘೋಷಣೆ ವೇಳೆ, ಕೈಬಿಟ್ಟಿತ್ತು. ಆದರೆ, ಬಿಜೆಪಿ ಮತ್ತು ಆರ್ಎಸ್ಎಸ್ ತಮ್ಮ ಕೋಮು ಅಜೆಂಡಾಗಳಿಗೆ ಪೂರಕವಾಗಿರುವ ಆ ನಾಲ್ಕು ಚರಣಗಳನ್ನು ಮುನ್ನೆಲೆಗೆ ತರಲು ಹವಣಿಸುತ್ತಿವೆ. ಅದಕ್ಕೆ, ಈ ಸಂದರ್ಭವನ್ನು ಬಳಸಿಕೊಳ್ಳುತ್ತಿವೆ ಎಂದು ಆರೋಫಗಳಿವೆ.





