ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಸೇರಿದಂತೆ ಮೂವರನ್ನು ಶ್ರೀನಗರದಲ್ಲಿ ಆಪರೇಷನ್ ಮಹಾದೇವ್ ನಡೆಸಿ ಎನ್ಕೌಂಟರ್ ಮಾಡಲಾಗಿದೆ. ಮೂವರು ಪಾಕಿಸ್ತಾನಿ ಭಯೋತ್ಪಾದಕರು ಎಂದು ವರದಿಯಾಗಿದೆ.
ಲಷ್ಕರ್-ಎ-ತೈಬಾದ ಉನ್ನತ ಕಮಾಂಡರ್ ಸುಲೇಮಾನ್ ಶಾ, ಮೂಸಾ ಫೌಜಿ ಎಂದೂ ಕರೆಯಲ್ಪಡುವ ಉಗ್ರನ ಹತ್ಯೆ ಮಾಡಲಾಗಿದ್ದು ಈತ 26 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ಪ್ರಮುಖ ಸಂಚುಕೋರ ಮತ್ತು ಕಾರ್ಯನಿರ್ವಾಹಕ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿಯ ನಂತರದ ಯುದ್ಧೋನ್ಮಾದ ಸರಿಯೇ?
ಪಾಕಿಸ್ತಾನ ಸೇನೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ಸುಲೇಮಾನ್ನ ಬಗ್ಗೆ ಸುಳಿವು ನೀಡಿದವರಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು 20 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದರು. ಇನ್ನುಳಿದಂತೆ ಅಬು ಹಮ್ಜಾ ಮತ್ತು ಯಾಸಿರ್ ಎಂಬವರ ಹತ್ಯೆಯಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಆಫ್ ಆರ್ಮಿ, “ತೀವ್ರ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ” ಎಂದು ಹೇಳಿದ್ದಾರೆ. ಇನ್ನು ಸೇನೆ, ಸಿಆರ್ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ, ಭಯೋತ್ಪಾದಕರ ಅಡಗುತಾಣದಿಂದ 17 ಗ್ರೆನೇಡ್ಗಳು, ಒಂದು ಎಂಎ ಕಾರ್ಬೈನ್ ಮತ್ತು ಎರಡು ಎಕೆ-47 ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.





