ಬಳಸಿ ಬಿಸಾಡಬೇಕಾದ (ಯೂಸ್ ಅಂಡ್ ಥ್ರೋ) ಪೇಪರ್ ಬಾಕ್ಸ್ಗಳನ್ನು ರೈಲಿನ ಸಿಬ್ಬಂದಿ ತೊಳೆದು ಮರುಬಳಕೆಗೆ ಎತ್ತಿಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಅಮೃತ್ ಭಾರತ್ ಎಕ್ಸ್ಪ್ರೆಸ್ನಲ್ಲಿ (16601) ನಡೆದಿದೆ ಎಂದು ಹೇಳಲಾಗಿದೆ. ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿ.ವಿ ಅವರು ಆಹಾರ ನೈರ್ಮಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ; ವ್ಯಕ್ತಿಯೊಬ್ಬ ಬಳಸಿ ಬಿಸಾಡುವ ಆಹಾರದ ಬಾಕ್ಸ್ಗಳನ್ನು ತೊಳೆಯುತ್ತಿರುವುದು ಕಂಡುಬಂದಿದೆ. ತೊಳೆದ ಆ ಬಾಕ್ಸ್ಗಳನ್ನು ಪ್ರಯಾಣಿಕರಿಗೆ ಊಟ ಬಡಿಸಲು ಮರುಬಳಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ವಿಡಿಯೋ ಹಂಚಿಕೊಂಡಿರುವ ಶ್ರೀನಿವಾಸ್, “ರೈಲ್ವೆ ಸಚಿವರೇ, ಇದು ನಿಮ್ಮ ಮೂಲಸೌಕರ್ಯ. ಸಾರ್ವಜನಿಕರಿಂದ ಪೂರ್ಣ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಆದರೆ ಮತ್ತೊಂದೆಡೆ, ಈ ನಾಚಿಕೆಗೇಡಿನ ಕೃತ್ಯ ಎಸಗಲಾಗುತ್ತದೆ. ಇಂತಹ ಘಟನೆಗಳಿಗೆ ನೀವು ನಾಚಿಕೆಪಡಬೇಕು” ಎಂದು ವಾಗ್ದಾಳಿ ನಡೆಸಿದ್ದಾರೆ.
रील मंत्री जी, यही है आपकी सुविधा 👇🏼
— Srinivas BV (@srinivasiyc) October 19, 2025
ये वीडियो अमृत भारत एक्सप्रेस (16601) का है- जहां गंदे डिस्पोजेबल फूड कंटेनर्स को धोकर दोबारा खाना देने के लिए रखा जा रहा है।
जनता से टिकट पर फुल वसूली की जाती है, लेकिन दूसरी ओर ये घटिया हरकत।
शर्म आनी चाहिए। pic.twitter.com/scIPVL9URp
ಈ ವಿಡಿಯೋ ರೈಲಿನಲ್ಲಿ ಆಹಾರ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೂ, ವಿಡಿಯೋ ಮತ್ತು ಘಟನೆ ಬಗ್ಗೆ ರೈಲ್ವೆ ಇಲಾಖೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ, IRCTC ಪ್ರತಿಕ್ರಿಯೆ ನೀಡಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
“ಅಮೃತ್ ಭಾರತ್ ಎಕ್ಸ್ಪ್ರೆಸ್ನಲ್ಲಿ ಬಳಸಿ ಬಿಸಾಡುವ ಆಹಾರದ ಬಾಕ್ಸ್ಗಳನ್ನು ತೊಳೆಯುವ ಮತ್ತು ಮರುಬಳಕೆ ಮಾಡುತ್ತಿರುವವರನ್ನು ಗುರುತಿಸಲಾಗಿದೆ. ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ರೈಲಿನಲ್ಲಿ ಆಹಾರ ಪೂರೈಕೆ ಮಾಡುತ್ತಿದ್ದವರಿಗೆ ಭಾರೀ ದಂಡ ವಿಧಿಸಲಾಗಿದೆ. ಜೊತೆಗೆ, ಪರವಾನಗಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದೆ.
ಘಟನೆ ಬಗ್ಗೆ ಹಲವಾರು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. “ಇದು ಪ್ರಯಾಣಿಕರಿಗೆ ಅನೈರ್ಮಲ್ಯ ಮತ್ತು ಅಸುರಕ್ಷಿತವಾಗಿದೆ” ಎಂದು ಕಿಡಿಕಾರಿದ್ದಾರೆ.




