ಮಹಾರಾಷ್ಟ್ರದಲ್ಲಿ ಮುಂಬರುವ ಪಿಂಪ್ರಿ-ಚಿಂಚವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಬಣದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಭಾನುವಾರ ಘೋಷಿಸಿದ್ದಾರೆ.
ಭಾನುವಾರ ಪಿಂಪ್ರಿ-ಚಿಂಚವಾಡದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್, ಉಭಯ ಬಣಗಳ ನಡುವಿನ ಒಗ್ಗಟ್ಟನ್ನು ಒತ್ತಿಹೇಳಿದರು. “ಪರಿವಾರ (ಕುಟುಂಬ) ಒಂದಾಗಿದೆ,” ಎಂದು ಹೇಳಿದರು.
“ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ, ಎರಡೂ ಬಣಗಳು ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಈ ಬೆಳವಣಿಗೆಯ ಬಗ್ಗೆ ಹಲವು ಪ್ರಶ್ನೆಗಳು ಏಳಬಹುದು. ಆದರೆ, ಮಹಾರಾಷ್ಟ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಕೆಲವೊಮ್ಮೆ ಇಂತಹ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ,” ಎಂದು ಅಜಿತ್ ಪವಾರ್ ಸಮರ್ಥಿಸಿಕೊಂಡರು.
ಸ್ಥಳೀಯ ನಾಯಕರೊಂದಿಗೆ ಸೀಟು ಹಂಚಿಕೆ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದ್ದು, ಶೀಘ್ರದಲ್ಲೇ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | SIR – ಬಿಜೆಪಿಗಾಗಿ ಚುನಾವಣಾ ಆಯೋಗ ನಡೆಸುತ್ತಿರುವ ರಕ್ತರಹಿತ ನರಮೇಧ
ಪಿಂಪ್ರಿ-ಚಿಂಚವಾಡ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಿಗೆ ಜನವರಿ 15 ರಂದು ಮತದಾನ ನಡೆಯಲಿದೆ. ಮರುದಿನವೇ (ಜ.16) ಮತ ಎಣಿಕೆ ಕಾರ್ಯ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಡಿಸೆಂಬರ್ 30 ಕಡೆಯ ದಿನವಾಗಿದೆ.
ವಿರೋಧದ ನಡುವೆಯೂ ಮಲಿಕ್ ಕುಟುಂಬಕ್ಕೆ ಮಣೆ: ಎನ್ಸಿಪಿ ಪಟ್ಟಿ ಬಿಡುಗಡೆ
ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗೆ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷವು, ಬಿಜೆಪಿ ವಿರೋಧದ ನಡುವೆಯೂ ನವಾಬ್ ಮಲಿಕ್ ಕುಟುಂಬದ ಮೂವರು ಸದಸ್ಯರಿಗೆ ಟಿಕೆಟ್ ಘೋಷಿಸಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆಗಿನ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಲಿಕ್ ಆರೋಪಿಯಾಗಿದ್ದಾರೆ. ಹೀಗಾಗಿ ಮಲಿಕ್ ಅವರನ್ನು ಮುಂಬೈ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೂ, ಅಜಿತ್ ಪವಾರ್ ಅವರು ಮಲಿಕ್ ಸಹೋದರ ಕಪ್ತಾನ್, ಸಹೋದರಿ ಡಾ. ಸಯೀದಾ ಮತ್ತು ಸೊಸೆ ಬುಶ್ರಾ ಅವರಿಗೆ ಟಿಕೆಟ್ ನೀಡಿದ್ದಾರೆ.
ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ, ಏಕನಾಥ್ ಶಿಂಧೆ ಶಿವಸೇನೆ ಮತ್ತು ಆರ್ಪಿಐ ಮೈತ್ರಿ ಮಾಡಿಕೊಂಡಿದ್ದು, ಎನ್ಸಿಪಿಯನ್ನು ಈ ಮೈತ್ರಿಯಿಂದ ದೂರವಿಟ್ಟಿವೆ. ಹೀಗಾಗಿ ಎನ್ಸಿಪಿ ಏಕಾಂಗಿಯಾಗಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ. ಸದ್ಯ ವೈದ್ಯಕೀಯ ಕಾರಣಗಳ ಮೇಲೆ ಜಾಮೀನು ಪಡೆದಿರುವ ಮಲಿಕ್ ಅವರ ಕುಟುಂಬಕ್ಕೆ ಮಣೆ ಹಾಕಿರುವುದು ಮಹಾಯುತಿ ಒಕ್ಕೂಟದಲ್ಲಿನ ಒಳಜಗಳವನ್ನು ಎತ್ತಿ ತೋರಿಸಿದೆ. ಕುರ್ಲಾ-ಅಣುಶಕ್ತಿ ನಗರ ಭಾಗದಲ್ಲಿ ಮಲಿಕ್ ಕುಟುಂಬದ ಪ್ರಾಬಲ್ಯವಿದ್ದು, ಮಲಿಕ್ ಪುತ್ರಿ ಸನಾ ಮಲಿಕ್ ಇಲ್ಲಿನ ಶಾಸಕಿಯಾಗಿದ್ದಾರೆ.





