ಬಹಿರಂಗ ಪತ್ರಗಳಲ್ಲಿ ಕಾದಾಟಕ್ಕಿಳಿದ ಶಶಿ ತರೂರ್ ಮತ್ತು ಮಣಿ ಶಂಕರ್ ಅಯ್ಯರ್, ವಿದೇಶಾಂಗ ನೀತಿ, ಸೈದ್ಧಾಂತಿಕ ಅಭಿಪ್ರಾಯ ಹಾಗೂ ತಮ್ಮ ವೈಯಕ್ತಿಕ ಹೇಳಿಕೆಗಳ ಕುರಿತು ಒಬ್ಬರಿಗೊಬ್ಬರು ಸಾರ್ವಜನಿಕವಾಗಿ ಬಿರುಸು ನುಡಿಗಳನ್ನಾಡಿದ್ದಾರೆ.
ತರೂರ್ಗೆ ಐಯರ್ ಬರೆದ ಬಹಿರಂಗ ಪತ್ರವು ಫ್ರಂಟ್ ಲೈನ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಬಳಿಕ ಈ ವಾದ-ವಿವಾದ ಮುನ್ನಲೆಗೆ ಬಂದಿದೆ. ಇತ್ತೀಚಿಗೆ ಖಾಸಗಿ ವಾಹಿನಿಯಲ್ಲಿ ನಡೆದ ಮಧ್ಯಪ್ರಾಚ್ಯ ಯುದ್ಧಗಳ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶಶಿ ತರೂರ್ ನೀಡಿರುವ ಹೇಳಿಕೆಗಳು ನಾನು ತಡರಾತ್ರಿ ನಿದ್ರೆಯಿಂದ ಎಚ್ಚರಗೊಂಡು ಈ ಸಂದೇಶ ಬರೆಯುವಂತೆ ಮಾಡಿವೆ ಎಂದು ಅಯ್ಯರ್ ಹೇಳಿದ್ದಾರೆ.
“ತರೂರ್ ಅವರ ಹೇಳಿಕೆಗಳಿಂದ ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಶಶಿ ತರೂರ್ ಸೋತಮೇಲೂ ಅವರಿಗೆ ಯಾವುದಾದರು ಗೌರವಾನ್ವಿತ ಸ್ಥಾನ ಕೊಡುವಂತೆ ಖರ್ಗೆಯೊಂದಿಗೆ ಸಾರ್ವಜನಿಕವಾಗಿ ವಾದಿಸಿದ್ದೆ. ಆ ಕುರಿತು ಈಗ ನನಗೆ ವಿಷಾದವಿದೆ” ಎಂದು ಅಯ್ಯರ್ ಹೇಳಿದ್ದಾರೆ. ಮುಂದುವರೆದು, ವಿದೇಶಾಂಗ ವ್ಯವಹಾರಗಳ ಕುರಿತ ಸಂಸತ್ತಿನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ತರೂರ್ ಅಮೆರಿಕದ ಬಲಾಡ್ಯತೆಯನ್ನು ಸಮರ್ಥಿಕೊಂಡದ್ದನ್ನು, ಸಾಮ್ರಾಜ್ಯಶಾಹಿ ಅಮೆರಿಕದ ಎದುರು ಚೀನಾ ಮತ್ತು ರಷ್ಯಾ ತೋರಿದ ಗಟ್ಟಿತನ ಹಾಗೂ ಭಾರತ ತನ್ನ ನಿಲುವನ್ನು ನಿರ್ಭೀತವಾಗಿ ಹೇಳಲಾಗದ ಸ್ಥಿತಿಗೆ ತಲುಪುವಿರುವುದನ್ನು ಕಿಂಚಿತ್ತೂ ವಿರೋಧಿಸದ ತರೂರ್ ಅವರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಶಬರಿ ಮಲೆ ದೇವಸ್ಥಾನಕ್ಕೆ ಋತುಸ್ರಾವದಲ್ಲಿರುವ ಮಹಿಳೆಯರ ಪ್ರವೇಶವನ್ನು ಸುಪ್ರೀಂ ಕೋರ್ಟ್ ತೀರ್ಪು ಎತ್ತಿಹಿಡಿದಾಗ ತರೂರ್ ಸುಪ್ರೀಂ ತೀರ್ಪಿನ ಕುರಿತು ಅಸಮಧಾನ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲೇ ಶಶಿ ತರೂರ್ ಸೈದ್ದಾಂತಿಕ ನಿಲುವುಗಳ ಕುರಿತು ತಮಗೆ ಅನುಮಾನ ಮೂಡಿತ್ತು. ಈ ಭಿನ್ನಾಭಿಪ್ರಾಯಗಳು ನಮ್ಮ ದಾರಿಗಳನ್ನು ಬೇರ್ಪಡಿಸುವ ಹಂತಕ್ಕೆ ತಂದಿವೆ ಎಂದರು.
ಇದಕ್ಕೆ ಬಹಿರಂಗ ಪತ್ರದ ಮೂಲಕವೇ ಪ್ರತಿಕ್ರಿಯಿಸಿದ ತರೂರ್ ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಸಹಜ. ಅಯ್ಯರ್ ತನ್ನ ವ್ಯಕ್ತಿತ್ವ ಹಾಗೂ ಉದ್ದೇಶಗಳನ್ನು ಪ್ರಶ್ನೆ ಮಾಡಿರುವುದು ಸರಿಯಲ್ಲವೆಂದು ಟೀಕಿಸಿದರು. ಅಂತಾರಾಷ್ಟ್ರೀಯ ವ್ಯವಹಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳು ಸ್ಪಷ್ಟ ರಾಷ್ಟ್ರೀಯವಾದಿ ದೃಷ್ಟಿಕೋನದಿಂದ ಹುಟ್ಟಿಕೊಂಡಿದೆ ಎಂದು ತರೂರ್ ಹೇಳಿದರು. ಜಾಗತಿಕ ರಾಜಕೀಯ ಹಾಗೂ ಇದರಿಂದ ಭಾರತಕ್ಕೆ ಉಂಟಾಗುವ ಆರ್ಥಿಕ ಪರಿಣಾಮಗಳನ್ನು ಸರಿದೂಗಿಸುವಾಗ ನೈತಿಕ ರಾಜಿಯ ಕುರಿತಾಗಿ ಯೋಚಿಸುವುದು ಸಲ್ಲ ಎಂದಿದ್ದಾರೆ.
“ಯಾವುದೇ ಪೀಳಿಗೆಯು ದೇಶಭಕ್ತಿಯ ಮೇಲೆ ಅಥವಾ ಗಾಂಧಿ ಅಥವಾ ನೆಹರು ಅವರ ವ್ಯಾಖ್ಯಾನದ ಮೇಲೆ ಏಕಸ್ವಾಮ್ಯ ಹೊಂದಿಲ್ಲ. ಅವರ ಪರಂಪರೆಗೆ ನಿಜವಾದ ಗೌರವ ಸಲ್ಲಿಸುವುದೇ ಆದರೆ ಅವರ ಮೌಲ್ಯಗಳನ್ನು ನಮ್ಮ ಕಾಲದ ವಾಸ್ತವಗಳಿಗೆ ಬುದ್ಧಿವಂತಿಕೆಯಿಂದ ಅನ್ವಯಿಸಿಕೊಳ್ಳುವುದರಲ್ಲಿದೆ” ಎಂದು ತರೂರ್ ಬರೆದಿದ್ದಾರೆ.
ಶಬರಿ ಮಲೆಯ ವಿಷಯದ ಕುರಿತಾದ ಟೀಕೆಗೆ ಪ್ರತಿಕ್ರಿಯಿಸಿದ ತರೂರ್ ಈ ಹಿಂದೆ ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವನ್ನು ಬೆಂಬಲಿಸಿದ್ದೇನೆ ಹಾಗೂ ತಮ್ಮ ನಿಲುವನ್ನು ವಿವರವಾಗಿ ಸ್ಪಷ್ಟ ಪಡಿಸಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಯ್ಯರ್ ಬೆಂಬಲವನ್ನು ಒಪ್ಪಿಕೊಂಡ ಅವರು, ಈ ಹಿಂದೆ ಹಲವು ಬಾರಿ ತಾನೂ ಅಯ್ಯರ್ ಅವರನ್ನು ಸಮರ್ಥಿಸಿಕೊಂಡಿದ್ದೇನೆ ಎಂದರು.
ಈ ಹಿಂದೆಯು ಅಯ್ಯರ್ ತರೂರರ ನಡುವೆ ಹುಟ್ಟಿಕೊಂಡ ಸಾಕಷ್ಟು ಭಿನ್ನಾಭಿಪ್ರಾಯಗಳು ಚರ್ಚೆಗೆ ಗ್ರಾಸವಾಗಿದ್ದು ಒಬ್ಬರು ಇನ್ನೊಬ್ಬರ ರಾಜಕೀಯ ನಿಲುವುಗಳನ್ನು ಕಟುವಾಗಿ ಟೀಕಿಸಿದ್ದರು ಹಿಂದೊಮ್ಮೆ ಅಯ್ಯರ್ ತರೂರರನ್ನು ʼತತ್ವರಹಿತ ವೃತ್ತಿಜೀವನಕಾರʼ ಎಂದು ಕರೆದಿದ್ದರೆ, ತರೂರ್ ಅಯ್ಯರ್ ʼರಾಹುಲೀಯನ್ʼ ಎಂದು ಹಂಗಿಸಿದ್ದರು.




