ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಸಮಯದ ನಿಯಮಗಳನ್ನು ಉಲ್ಲಂಘಿಸಿ ದೀಪಾವಳಿ ಪ್ರಯುಕ್ತ ಜನರು ಪಟಾಕಿ ಸಿಡಿಸಿದ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿಯ ಗುಣಮಟ್ಟ ತೀವ್ರವಾಗಿ ಹದೆಗೆಟ್ಟಿದೆ.
ಸೋಮವಾರ (ನಿನ್ನೆ) ರಾತ್ರಿಯಿಡೀ ಜನರು ಪಟಾಕಿಗಳನ್ನು ಸಿಡಿಸಿದ ಪರಿಣಾಮ, ಮಂಗಳವಾರ (ಇಂದು) ಬೆಳಿಗ್ಗೆ ರಾಜಧಾನಿ ನಗರದಾದ್ಯಂತ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬೆಳಿಗ್ಗೆ 7 ಗಂಟೆಯ ಸುಮಾರಿಗೆ 451 ತಲುಪಿತ್ತು. ಇದು ರಾಷ್ಟ್ರೀಯ ಸರಾಸರಿಗಿಂತ 1.8 ಪಟ್ಟು ಹೆಚ್ಚು ಮತ್ತು ತೀವ್ರ ವಾಯಮಾಲಿನ್ಯವನ್ನು ಸೂಚಿಸುತ್ತದೆ.
ದೀಪಾವಳಿ ರಾತ್ರಿ (ಸೋಮವಾರ ರಾತ್ರಿ) ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ‘ತೀವ್ರ ಕಳಪೆ’ ಮಟ್ಟಕ್ಕೆ ಇಳಿದಿತ್ತು. ದೆಹಲಿಯ ಸ್ಯಾಟ್ಲೈಟ್ ನಗರಗಳಾದ ನೋಯ್ಡಾ ಮತ್ತು ಗುರ್ಗಾಂವ್ನಲ್ಲೂ ಪರಿಸ್ಥಿತಿ ತೀವ್ರವಾಗಿ ಹದೆಗೆಟ್ಟಿದೆ. ಮಂಗಳವಾರ ಬೆಳಿಗ್ಗೆ ಈ ನಗರಗಳಲ್ಲಿ ಕ್ರಮವಾಗಿ 407 ಮತ್ತು 402 ಎಕ್ಯೂಐ ದಾಖಲಾಗಿದೆ.
ದೆಹಲಿಯ ಬಹುತೇಕ ವಾಯು ಗುಣಮಟ್ಟ ಮಾಪನ ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ‘ರೆಡ್ಝೋನ್’ ತಲುಪಿರುವುದಾಗಿ ದಾಖಲಾಗಿದೆ. ವಝೀರ್ಪುರ (435), ದ್ವಾರಕಾ (422), ಅಶೋಕ್ ವಿಹಾರ್ (445), ಮತ್ತು ಆನಂದ್ ವಿಹಾರ್ (440)ಗಳಲ್ಲಿ ಗಾಳಿಯು ತೀವ್ರ ಕಳಪೆ ಮಟ್ಟಕ್ಕೆ ಇಳಿದಿದೆ. ಇದು ವಾಯು ಮಾಲಿನ್ಯದ ಗಂಭೀರ ಸ್ಥಿತಿಯನ್ನು ಸೂಚಿಸುತ್ತದೆ ಎಂದು ವರದಿಗಳು ವಿವರಿಸಿವೆ.
0 ಯಿಂದ 50ರ ನಡುವಿನ ವಾಯುಗುಟ್ಟವನ್ನು ‘ಉತ್ತಮ’, 51 ರಿಂದ 100 ‘ತೃಪ್ತಿದಾಯಕ’, 101 ರಿಂದ 200 ‘ಮಧ್ಯಮ’, 201 ರಿಂದ 300 ‘ಕಳಪೆ’, 301 ರಿಂದ 400 ‘ಅತೀ ಕಳಪೆ’ ಮತ್ತು 401 ರಿಂದ 500 ‘ತೀವ್ರ ಕಳಪೆ’ ಅಥವಾ ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ.
2020ರಿಂದ ದೆಹಲಿಯಲ್ಲಿ ದೀಪಾವಳಿಯಂದು ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ.




