ಸ್ವಯಂ ಘೋಷಿತ ಯೋಗ ಗುರು ಬಾಬಾ ರಾಮ್ದೇವ್ ಮತ್ತು ಅವರ ಸಹಚರ ಆಚಾರ್ಯ ಬಾಲಕೃಷ್ಣ ವಿರುದ್ಧ ಕೇರಳ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
ರಾಮ್ದೇವ್ ಅವರ ಪತಂಜಲಿ ಆಯುರ್ವೇದ ಬ್ರಾಂಡ್ನ ಪ್ರಚಾರಕ್ಕಾಗಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನೀಡಿದ್ದಕ್ಕಾಗಿ ಅವರ ವಿರುದ್ಧ ಕೇರಳ ಔಷಧ ನಿಯಂತ್ರಕರು ದೂರು ದಾಖಲಿಸಿದೆ. ಅವರ ದೂರಿನ ವಿಚಾರಣೆ ನಡೆಸಿರುವ ಕೇರಳದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯವು ಜಾಮೀನು ನೀಡಬಹುದಾದ ಬಂಧನ ವಾರಂಟ್ ಹೊರಡಿಸಿದೆ.
ಕಣ್ಣೂರು ಮೂಲದ ನೇತ್ರಶಾಸ್ತ್ರಜ್ಞ ಕೆ.ವಿ. ಬಾಬು ಅವರು ಪತಂಜಲಿ ವಿರುದ್ಧ 2023ರ ನವೆಂಬರ್ನಲ್ಲಿ ಹಲವಾರು ದೂರುಗಳನ್ನು ಸಲ್ಲಿಸಿದ್ದರು. ಅವರ ದೂರನ್ನು ಪರಿಶೀಲಿಸಿದ್ದ ಕೇರಳದ ಔಷಧ ನಿಯಂತ್ರಣ ಇಲಾಖೆಯು ರಾಮ್ದೇವ್ ಅವರು ತಮ್ಮ ಪತಂಜಲಿ ಆಯುರ್ವೇದ ಉತ್ಪನ್ನಗಳ ಪ್ರಚಾರ ಜಾಹೀರಾತುಗಳಲ್ಲಿ ‘ಔಷಧಗಳು ಮತ್ತು ಮ್ಯಾಜಿಕ್ ಪರಿಹಾರಗಳು (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ-1954’ಅನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಕಂಡುಕೊಂಡಿತ್ತು. ಪತಂಜಲಿ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
ಕೆಲವು ಪತಂಜಲಿ ಆಯುರ್ವೇದ ಉತ್ಪನ್ನಗಳು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂದು ಜಾಹೀರಾತುಗಳಲ್ಲಿ ಹೇಳಲಾಗಿತ್ತು. ಆದಾಗ್ಯೂ, ಅಂತಹ ಜಾಹೀರಾತುಗಳನ್ನು ಡಿಎಂಆರ್ ಕಾಯ್ದೆಯಡಿಯಲ್ಲಿ ನಿಷೇಧಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ದಾರಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದರೆ ಅಂತಹ ಸರ್ಕಾರಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ, ಪಾಲಕ್ಕಾಡ್ ನ್ಯಾಯಾಲಯದಿಂದ ಬಂಧನ ವಾರಂಟ್ ಜಾರಿಯಾಗಿದೆ.




