ತಿಂಗಳು ಕಳೆದರೂ ತಣ್ಣಗಾಗದ ಮಣಿಪುರ ಹಿಂಸಾಚಾರ
ನಿರಂತರ ಹಿಂಸಾಚಾರಕ್ಕೆ ನೂರಕ್ಕೂ ಹೆಚ್ಚು ಮಂದಿ ಬಲಿ
ಈಶಾನ್ಯ ರಾಜ್ಯ ಮಣಿಪುರದಲ್ಲಿ ತಿಂಗಳು ಕಳೆದರೂ ಹಿಂಸಾಚಾರ ಮಾತ್ರ ನಿಲ್ಲುತ್ತಿಲ್ಲ. ಕೇಂದ್ರ ಸರ್ಕಾರ ಈ ಹಿಂಸಾಚಾರವನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿರುವಾಗಲೇ ಬಹುಭಾಷಾ ನಟ ಕಿಶೋರ್ ಕುಮಾರ್, ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಣಿಪುರ ಹಿಂಸಾಚಾರದ ಕುರಿತ ಮಾಧ್ಯಮ ವರದಿಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಪ್ರತಿಕ್ರಿಯಿಸಿರುವ ಕಿಶೋರ್, “ಒಂದು ಕರೆಯಲ್ಲಿ ಉಕ್ರೇನ್ ಯುದ್ಧ ನಿಲ್ಲಿಸಿದೆವೆಂದು ಬಡಾಯಿ ಕೊಚ್ಚುವ ಜನ ಮಣಿಪುರವನ್ನು ತಿಂಗಳಿಂದ ಹೊತ್ತಿ ಉರಿಯಲು ಬಿಟ್ಟಿದ್ದೇಕೆ? ಲಾಭ.. ಲಾಭ.. ಲಾಭ.. ಎಲ್ಲದರಲ್ಲೂ ಲಾಭ… ಪಾಪದ ಜನರ ಸಾವಿನಲ್ಲೂ ಲಾಭದ ಧಂದೆ ಮಾಡುವ ವ್ಯಾಪಾರಿಯ ಕೈಗೆ ದೇಶ ಕೊಟ್ಟಂತಾಯ್ತು. ಜನ ಸಾಯುತ್ತಲೇ ಇರಲಿ, ಗುಜರಾತಿನಲ್ಲೊ, ಪುಲ್ವಾಮದಲ್ಲೊ, ಒಡಿಶಾದಲ್ಲೊ, ಮಣಿಪುರದಲ್ಲೊ… ದೇಶದ ಮೂಲೆ ಮೂಲೆಯಲ್ಲಿ ಹಿಂಸೆಯ ರೋಗವನ್ನು ಹರಡಿ ಲಾಭ ಹೆಕ್ಕುತ್ತಲೇ ಇರುತ್ತಾರೆ ದ್ವೇಷದ ವ್ಯಾಪಾರಿಗಳು. ಯಾರೂ ಪ್ರಶ್ನಿಸಬೇಡಿ, ಪತ್ರಿಕೆಯಾದರೂ ಸರಿ ಟ್ವಿಟರ್ನಲ್ಲಾದರೂ ಸರಿ. ತುಮ್ ಬಸ್ ಚುಪ್ ರಹೋ ಯೇ ಉನ್ ಕೀ ಮನ್ ಕೀ ಬಾತ್ ಹೈ (ನೀವೆಲ್ಲರೂ ಸುಮ್ಮನಿರಿ ಇದು ಅವರ ಮನದ ಮಾತು)” ಎಂದು ವ್ಯಂಗ್ಯವಾಡಿದ್ದಾರೆ.
ಪರಿಶಿಷ್ಟ ಪಂಗಡಗಳ ಸ್ಥಾನಮಾನಕ್ಕೆ ಆಗ್ರಹಿಸಿ ರಾಜ್ಯದ 10 ಜಿಲ್ಲೆಗಳಲ್ಲಿ ಶುರುವಾಗಿದ್ದ ಪ್ರತಿಭಟನೆ ಜನಾಂಗೀಯ ಹಿಂಸೆಗೆ ತಿರುಗಿ ತಿಂಗಳು ಕಳೆದಿದೆ. ಈವರೆಗೆ ನೂರಕ್ಕೂ ಹೆಚ್ಚು ಜನರು ಈ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದು, 50 ಸಾವಿರಕ್ಕೂ ಅಧಿಕ ಮಂದಿ ತಮ್ಮ ಶಾಶ್ವತ ನೆಲೆಗಳನ್ನು ಕಳೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪಠ್ಯ ಪರಿಷ್ಕರಣೆ ಮಾಡುವುದು ತಪ್ಪೇ? ಗೀತಾ ಶಿವರಾಜ್ಕುಮಾರ್
ಉದ್ರಿಕ್ತರ ಗುಂಪೊಂದು ಗುರುವಾರ ಸಂಜೆ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಆರ್.ಕೆ ರಂಜನ್ ಸಿಂಗ್ ಅವರ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದು, ಇಡೀ ಮನೆಯನ್ನು ಸುಟ್ಟು ಹಾಕಿದ್ದಾರೆ. ಜೂನ್ 15ರಂದು ಮಣಿಪುರದ ಸಚಿವೆ ನೆಮ್ಚಾ ಕಿಪ್ಗೆನ್ ಅವರ ಅಧಿಕೃತ ನಿವಾಸಕ್ಕೂ ಅಪರಿಚಿತರು ಬೆಂಕಿ ಹಚ್ಚಿದ್ದರು.





