ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುನ್ನು ‘ಅನೂರ್ಜಿತ’ವೆಂದು ಘೋಷಿಸಬೇಕು. ಹೊಸದಾಗಿ ತೀರ್ಪು ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಈ ಹಿಂದೆ, ಇದೇ ಅರ್ಜಿಯನ್ನು ತಿರಸ್ಕರಿಸಿ ಸಿವಿಲ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ಈ ವರ್ಷದ ಆರಂಭದಲ್ಲಿ ಪುಣೆಯಲ್ಲಿ ನಡೆಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಿಜೆಐ (ಬಾಬ್ರಿ ಮಸೀದಿ ತೀರ್ಪು ನೀಡಿದ ಪೀಠದ ಭಾಗವೂ ಆಗಿದ್ದರು) ಡಿ.ವೈ ಚಂದ್ರಚೂಡ್ ಅವರು, “ತಾವು ತೀರ್ಪು ಬರೆಯುವುದಕ್ಕೂ ಮುನ್ನ ಭಗವಾನ್ ಶ್ರೀರಾಮ್ ವಿರಾಜಮಾನ್ ಎದುರು ಕುಳಿತು ಪ್ರಾರ್ಥಿಸಿದೆ. ದೇವರು ತೋರಿಸಿದ ಪರಿಹಾರ ಮಾರ್ಗ ಮತ್ತು ಮಾರ್ಗದರ್ಶನದಿಂದ ತೀರ್ಪು ಬರೆದೆ” ಎಂದು ಹೇಳಿಕೊಂಡಿದ್ದರು.
ಅವರ ಈ ಹೇಳಿಕೆಯು ಬಾಬ್ರಿ ಮಸೀದಿ ತೀರ್ಪಿನಲ್ಲಿ ಧಾರ್ಮಿಕ ಪ್ರಭಾವ ಬೀರಿದೆ ಎಂಬುದನ್ನು ಸಾಬೀತು ಮಾಡಿದೆ ಎಂಬ ಚರ್ಚೆಗಳು ಭುಗಿಲೆದ್ದಿದ್ದವು. ಅವರ ಹೇಳಿಕೆಯನ್ನು ಆಧಾರಿಸಿ, 2019ರ ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅನೂರ್ಜಿತಗೊಳಿಸಬೇಕೆಂದು 2025ರ ಏಪ್ರಿಲ್ನಲ್ಲಿ ವಕೀಲ ಮೆಹಮೂದ್ ಪ್ರಾಚಾ ಅವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಧರ್ಮೇಂದರ್ ರಾಣಾ, ಕಾನೂನಿನಲ್ಲಿ ಅಥವಾ ಯಾವುದೇ ಧರ್ಮದಲ್ಲಿ ಅನ್ಯಾಯದ ಲಾಭವನ್ನು ಪಡೆಯಲು ಸರ್ವಶಕ್ತನಿಂದ ಮಾರ್ಗದರ್ಶನ ಪಡೆದಿದ್ದಾಗಿ ಭಾವಿಸಿದರೆ, ಅದನ್ನು ವಂಚನೆಯ ಕೃತ್ಯವೆಂದು ಹೇಳಲಾಗುವುದಿಲ್ಲ” ಎಂದು ಹೇಳಿದ್ದರು. ಅರ್ಜಿಯನ್ನು ವಜಾಗೊಳಿಸಿತ್ತು. ಮಾತ್ರವಲ್ಲದೆ, 1 ಲಕ್ಷ ರೂ. ದಂಡ ವಿಧಿಸಿತ್ತು.
ಸಿವಿಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಾಚಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ಆಲಿಸಿದ ನ್ಯಾಯಾಲಯವು, ಸಿವಿಲ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರ ತೀರ್ಪನ್ನು ಎತ್ತಿ ಹಿಡಿದೆ. “ಕ್ಷುಲ್ಲಕ ಮತ್ತು ಐಷಾರಾಮಿ ಮೊಕದ್ದಮೆಗಳ ಬೆದರಿಕೆಯನ್ನು ಪರಿಣಾಮಕಾರಿಯಾಗಿ ಪರಿಶೀಲಿಸಬೇಕು” ಎಂದು ಹೇಳಿರುವ ಹೈಕೋರ್ಟ್, ಅರ್ಜಿದಾರ ವಕೀಲರಿಗೆ ವಿಧಿಸಲಾಗಿದ್ದ ದಂಡವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ.




