ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ಭವಿಷ್ಯ ನಿಧಿ ಮತ್ತು ಪಿಂಚಣಿ ಖಾತೆಗಳಿಂದ ಹಣವನ್ನು ಹಿಂಪಡೆಯುವುದನ್ನು ಇನ್ನಷ್ಟು ಕಠಿಣಗೊಳಿಸಿದೆ. ಪಿಎಫ್ ಹಣ ಹಿಂಪಡೆಯುವಿಕೆ ಅವಧಿ 12 ತಿಂಗಳಿಗೆ, ಪಿಂಚಣಿ 36 ತಿಂಗಳಿಗೆ ಕೇಂದ್ರ ಸರ್ಕಾರವು ವಿಸ್ತರಿಸಿದೆ. ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದೆ ನಿರುದ್ಯೋಗದ ಎರಡು ತಿಂಗಳುಗಳ ಬಳಿಕ ಪಿಎಫ್ನ ಎರಡೂ ಖಾತೆಗಳಿಂದ ಹಣವನ್ನು ಹಿಂಪಡೆಯಬಹುದಿತ್ತು. ಆದರೆ ಇದೀಗ 12 ತಿಂಗಳು ಅಂದರೆ ಒಂದು ವರ್ಷಕ್ಕೆ ಏರಿಸಲಾಗಿದೆ. “ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವುದು ಈ ಕ್ರಮದ ಗುರಿಯಾಗಿದೆ” ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ ಉದ್ಯೋಗವಿಲ್ಲದ ಆರ್ಥಿಕ ಸಂಕಷ್ಟದ ಅವಧಿಯಲ್ಲಿ ತಮ್ಮ ಹಣವನ್ನೂ ಪಡೆಯಲು ಸಾಧ್ಯವಾಗದಂತಹ ಸ್ಥಿತಿಗೆ ಸರ್ಕಾರ ಕಾರ್ಮಿಕರನ್ನು ದೂಡುತ್ತಿದೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ಜನ್ಮ ದಿನಾಂಕಕ್ಕೆ ಆಧಾರ್ ಕಾರ್ಡ್ ಪುರಾವೆಯಲ್ಲ: ಇಪಿಎಫ್ಒ
ಪರಿಷ್ಕರಣೆಯಲ್ಲಿ ಭಾಗಶಃ ಹಣವನ್ನು ಹಿಂಪಡೆಯಲು ಅವಕಾಶವಿದೆ. ಇದರಿಂದಾಗಿ ಸದಸ್ಯರು ನಿವೃತ್ತಿ ಉಳಿತಾಯ ಅಥವಾ ಪಿಂಚಣಿ ಅರ್ಹತೆಗಳ ಮೇಲೆ ಪರಿಣಾಮ ಬೀರದಂತೆ ತಕ್ಷಣದ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಸಚಿವಾಲಯವು ಹೇಳಿದೆ.
ಇದರ ಜೊತೆಗೆ ಸದಸ್ಯರ ಖಾತೆಗಳಲ್ಲಿ ಕನಿಷ್ಠ ಶೇಕಡ 25ರಷ್ಟು ಮೊತ್ತವನ್ನು ಕಾಯ್ದುಕೊಳ್ಳಲೇಬೇಕು ಎಂಬ ನಿಬಂಧನೆಯನ್ನೂ ಪರಿಚಯಿಸಲಾಗಿದೆ. “ಇದರಿಂದಾಗಿ ಸದಸ್ಯರು ಪ್ರಸ್ತುತ ಇಪಿಎಫ್ಒ ನೀಡುವ ಹೆಚ್ಚಿನ ಬಡ್ಡಿದರವಾದ ಶೇಕಡ 8.25 ಅನ್ನು ಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಹೆಚ್ಚಿನ ನಿವೃತ್ತಿ ನಿಧಿಯನ್ನೂ ಪಡೆಯಬಹುದು” ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಕೇಂದ್ರದ ನಿರ್ಧಾರಕ್ಕೆ ಕಾರ್ಮಿಕ ಸಂಘಟನೆಗಳ ವಿರೋಧ
ನಿಯಮ ಬದಲಾವಣೆಯನ್ನು ಕಾರ್ಮಿಕ ಸಂಘಟನೆಗಳು, ಕಾರ್ಮಿಕ ತಜ್ಞರು ಮತ್ತು ವಿರೋಧ ಪಕ್ಷಗಳು ಟೀಕಿಸಿದೆ. ಹೊಸ ನಿಯಮಗಳು ಆರ್ಥಿಕ ಸಂಕಷ್ಟದ ಅವಧಿಯಲ್ಲಿ ತಮ್ಮ ಹಣವನ್ನೂ ಕಾರ್ಮಿಕರು ಪಡೆಯಲು ಸಾಧ್ಯವಾಗದಂತೆ ಮಾಡುತ್ತದೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿದೆ.
ನಿರುದ್ಯೋಗದ ವೇಳೆ ಪಿಎಫ್ ಹಣವೇ ಆರ್ಥಿಕ ಸಹಾಯವನ್ನು ಮಾಡುತ್ತದೆ. ಆದರೆ ಇದನ್ನು ಹಿಂಪಡೆಯುವ ಅವಧಿಯನ್ನು ವಿಸ್ತರಿಸುವುದು ಉದ್ಯೋಗ ಕಳೆದುಕೊಂಡಿರುವವರನ್ನು ಸಂಕಷ್ಟಕ್ಕೆ ದೂಡುತ್ತದೆ. ಆದರೆ ಶೇಕಡ 75ರಷ್ಟು ಹಣವನ್ನು ಒಂದು ತಿಂಗಳ ಬಳಿಕವೂ ಪಡೆಯಬಹುದು ಎಂದು ಸರ್ಕಾರ ಹೇಳಿಕೊಂಡಿದೆ.





