ಈ ವರ್ಷದ ಜೂನ್ನಲ್ಲಿ ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 260 ಮಂದಿ ಮೃತಪಟ್ಟಿದ್ದಾರೆ. ಈ ದುರಂತಕ್ಕೆ ವಿಮಾನದ ಪೈಲಟ್ ಅನ್ನು ದೂಷಿಸಲಾಗದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. “ದುರಂತಕ್ಕೆ ಕಾರಣ ಏನೇ ಇರಲಿ, ಪೈಲಟ್ ಕಾರಣವಲ್ಲ” ಎಂದಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಾಲ ಬಾಗ್ಚಿ ಅವರ ಪೀಠವು, ವಿಮಾನದ ಪೈಲಟ್ಗಳಲ್ಲಿ ಒಬ್ಬರಾದ ಕಮಾಂಡರ್ ಸುಮೀತ್ ಸಭರ್ವಾಲ್ ಅವರ ತಂದೆ ಪುಷ್ಕರ್ ರಾಜ್ ಸಭರ್ವಾಲ್ ಅವರು, ಅಪಘಾತದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ಮೇಲ್ವಿಚಾರಣೆಯ ಸಮಿತಿಯನ್ನು ಕೋರಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದೆ.
ಇದನ್ನು ಓದಿದ್ದೀರಾ? ತಾಂತ್ರಿಕ ದೋಷ: ಮತ್ತೊಂದು ಏರ್ ಇಂಡಿಯಾ ವಿಮಾನ ರದ್ದು, ವಾರದಲ್ಲೇ ಮೂರನೇ ಘಟನೆ
ಪುಷ್ಕರ್ ರಾಜ್ ಸಭರ್ವಾಲ್ ಅವರು ಅರ್ಜಿಯಲ್ಲಿ ಅಪಘಾತದ ಪ್ರಾಥಮಿಕ ತನಿಖೆಯು ತೀವ್ರವಾಗಿ ದೋಷಪೂರಿತವಾಗಿದೆ ಎಂದು ವಾದಿಸಿದ್ದಾರೆ. ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ, ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ತನಿಖೆ ಸ್ವತಂತ್ರವಾಗಿಲ್ಲದ ಕಾರಣ ತಮ್ಮ ಕಕ್ಷಿದಾರರು ನಿಷ್ಪಕ್ಷಪಾತ ತನಿಖೆಯನ್ನು ಕೋರಿದ್ದಾರೆ ಎಂದು ವಾದಿಸಿದ್ದಾರೆ.
ವಕೀಲರ ಮಾತನ್ನು ಆಲಿಸಿದ ಪೀಠವು, “ಈ ಅಪಘಾತ ಸಂಭವಿಸಿದ್ದು ಅತ್ಯಂತ ದುರದೃಷ್ಟಕರ ಮತ್ತು ಅವರು ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ. ಆದರೆ ಅವರ ಮಗನ ಮೇಲೆ ಆರೋಪ ಹೊರಿಸಲಾಗುತ್ತಿದೆ ಅಥವಾ ದೂಷಿಸಲಾಗುತ್ತಿದೆ ಎಂಬ ಹೊರೆಯನ್ನು ಅವರು ಹೊರುವಂತಾಗಬಾರದು. ಈ ಬಗ್ಗೆ ನಾವು ಸ್ಪಷ್ಟಪಡಿಸುತ್ತೇವೆ. ಯಾರೂ ಪೈಲಟ್ ಅನ್ನು ದೂಷಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.
ಇನ್ನು ಶಂಕರನಾರಾಯಣ ಅವರು AAIB ತನಿಖೆಯ ಮಾಹಿತಿಯ ಆಧಾರದ ಮೇಲೆ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಿಸಿದ ಲೇಖನವನ್ನು ಉಲ್ಲೇಖಿಸಿದ್ದಾರೆ. “ವಿದೇಶಿ ಪತ್ರಿಕಾ ಹೇಗಿದೆ ಎಂಬುದರ ಬಗ್ಗೆ ನಮಗೆ ಚಿಂತೆ ಇಲ್ಲ. ನಿಮ್ಮ ಮೊಕದ್ದಮೆ ಅಮೆರಿಕದ ನ್ಯಾಯಾಲಯದಲ್ಲಿ WSJ ವಿರುದ್ಧ ಇರಬೇಕಿತ್ತು” ಎಂದು ಪೀಠ ಅಭಿಪ್ರಾಯಿಸಿದೆ.
“ಯಾರಿಗೂ ಪೈಲಟ್ನಲ್ಲಿ ತಪ್ಪಿದೆ ಎಂಬ ಭಾವನೆಯಿಲ್ಲ. ದುರಂತಕ್ಕೆ ಕಾರಣ ಏನೇ ಇರಲಿ, ಪೈಲಟ್ ಕಾರಣವಲ್ಲ” ಎಂದು ಹೇಳಿದ ಪೀಠ ನವೆಂಬರ್ 10ಕ್ಕೆ ವಿಚಾರಣೆ ಮುಂದೂಡಿದೆ.





