ಎಲ್ಪಿಜಿ ಕೊರತೆ ಕಾಣಿಸಿಕೊಂಡಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಪ್ರಧಾನಿ ಜನರಲ್ಲಿ ಭಯಪಡಬೇಡಿ ಎಂದು ಹೇಳುತ್ತಾರೆ. ಆದರೆ ತಾವೇ ಭಯಭೀತರಾಗಿದ್ದಾರೆ” ಎಂದು ಹೇಳಿದ್ದಾರೆ.
ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆಯ ಕುರಿತು ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಪ್ರಧಾನಿ ಮೋದಿ ಮಾನಸಿಕವಾಗಿ ಕುಗ್ಗಿದ್ದಾರೆ, ಅವರ ಸರ್ಕಾರ ಶೀಘ್ರವೇ ಉರುಳಲಿದೆ: ರಾಹುಲ್ ಗಾಂಧಿ
ಪ್ರತಿಭಟನೆ ನಂತರ ಮಾತನಾಡಿದ ರಾಹುಲ್ ಗಾಂಧಿ, “ಎಪ್ಸ್ಟೀನ್ ಫೈಲ್ಸ್ ವಿಷಯ ಮತ್ತು ಅಮೆರಿಕದಲ್ಲಿ ನಡೆಯುತ್ತಿರುವ ಅದಾನಿ ಪ್ರಕರಣದಿಂದಾಗಿ ಪ್ರಧಾನಿ ಭಯಭೀತರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್ಪಿ ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿ, ‘ನಾಮ್ ನರೇಂದರ್, ಕಾಮ್ ಸರೆಂಡರ್’ – (ಹೆಸರು ನರೇಂದ್ರ, ಆದರೆ ಸರೆಂಡರ್ ಅಂದರೆ ಆಗುವುದೇ ಕೆಲಸ) ಎಂದು ಘೋಷಣೆ ಕೂಗಿದ್ದಾರೆ. ‘ಮೋದಿ ಜಿ, ಎಲ್ಪಿಜಿ’ ಮುಂತಾದ ಘೋಷಣೆಗಳನ್ನೂ ಕೂಗಿದರು. ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಮಹಿಳಾ ಸಂಸದರು ನಕಲಿ ಇಟ್ಟಿಗೆ ಅಡುಗೆ ಒಲೆಯ ಮುಂದೆ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇನ್ನು ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ಭಾರತದ ಮೇಲೆ ಅದರ ಪರಿಣಾಮದ ಬಗ್ಗೆ ಪೂರ್ಣ ಪ್ರಮಾಣದ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಇತ್ತ ಯುದ್ಧದ ನಡುವೆ ದೇಶದಲ್ಲಿ ಹಲವೆಡೆ ಎಲ್ಪಿಜಿ ಸಮಸ್ಯೆ ಉಂಟಾಗಿದೆ. ಪ್ರಧಾನಿ ಪ್ರಧಾನಿ ಮೋದಿ ಮಾತ್ರ ಬುಧವಾರ ಜನರು ಭಯಭೀತರಾಗದಂತೆ ಮನವಿ ಮಾಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸಲಾಗುವುದು ಎಂದು ಹೇಳಿದ್ದಾರೆ.





