ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಗುಜರಾತ್ನ ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿಯವರ ವಿದೇಶಾಂಗ ನೀತಿ ಮತ್ತು ರೈತರ ಹಿತಾಸಕ್ತಿಗಳ ರಕ್ಷಣೆಯಲ್ಲಿನ ವೈಫಲ್ಯವನ್ನು ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರ 25 ನಿಮಿಷಗಳ ಭಾಷಣವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, “ಪ್ರಧಾನಿಗಳು ಅಮೆರಿಕ ಮತ್ತು ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಅವರು ಅಮೆರಿಕಕ್ಕೆ ಸಂಪೂರ್ಣವಾಗಿ ಶರಣಾಗಿದ್ದಾರೆ. ಅವರು 100% ಟ್ರಂಪ್ ನಿಯಂತ್ರಣದಲ್ಲಿದ್ದಾರೆ. ಆ ಕಾರಣಕ್ಕಾಗಿಯೇ ಅವರು ಅಮೆರಿಕದ ವಿರುದ್ಧ ಒಂದು ಪದವನ್ನೂ ಮಾತನಾಡುತ್ತಿಲ್ಲ. ಈ ಮೌನ ದೇಶದ ಭದ್ರತೆಗೆ ಗಂಭೀರ ಸಮಸ್ಯೆಯ ಮುನ್ಸೂಚನೆ” ಎಂದು ಆರೋಪಿಸಿದ್ದಾರೆ.
“ಅಮೆರಿಕದೊಂದಿಗೆ ಮಾಡಿಕೊಂಡಿರುವ ತಾತ್ಕಾಲಿಕ ವ್ಯಾಪಾರ ಒಪ್ಪಂದಗಳು ದೇಶದ ಕೃಷಿ ವಲಯವನ್ನು ನಾಶಮಾಡಲಿವೆ. ಭಾರತದಲ್ಲಿ ರೈತರು ಸಣ್ಣ ಜಮೀನುಗಳಲ್ಲಿ ಶ್ರಮಪಡುತ್ತಾರೆ. ಆದರೆ, ಅಮೆರಿಕದಲ್ಲಿ ಬೃಹತ್ ಯಂತ್ರೋಪಕರಣಗಳ ಕೃಷಿ ಇದೆ. ಅಲ್ಲಿನ ಉತ್ಪನ್ನಗಳಿಗೆ ಮುಕ್ತ ಪ್ರವೇಶ ನೀಡಿದರೆ ನಮ್ಮ ರೈತರು ಜಾಗತಿಕ ಸ್ಪರ್ಧೆಯಲ್ಲಿ ಸೋತು ನಾಶವಾಗುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಆದಿವಾಸಿಗಳೆಂದರೆ ಈ ದೇಶದ ಮೂಲ ನಿವಾಸಿಗಳು ಮತ್ತು ಜಲ-ಜಂಗಲ್-ಜಮೀನಿನ ಮಾಲೀಕರು. ಆದರೆ, ಬಿಜೆಪಿ ಅವರನ್ನು ‘ವನವಾಸಿ’ ಎಂದು ಕರೆಯುವ ಮೂಲಕ ಅವರು ಕೇವಲ ಅರಣ್ಯವಾಸಿಗಳೇ ಹೊರತು ಸಂಪನ್ಮೂಲಗಳ ಮಾಲೀಕರಲ್ಲ ಎಂಬ ಸಂದೇಶ ನೀಡುತ್ತಿದೆ. ಇದು ಬಿರ್ಸಾ ಮುಂಡಾ ಅವರ ಹೋರಾಟಕ್ಕೆ ಮತ್ತು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ” ಎಂದು ಕಿಡಿಕಾರಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಜೆಪಿ ಅಸ್ತ್ರಕ್ಕೆ ಟಿಎಂಸಿ ಪ್ರತ್ಯಸ್ತ್ರ; ಸುವೇಂದು ಎದುರು ಸ್ಪರ್ಧಿಸಿರುವ ‘ಪಬಿತ್ರ ಕರ್’ ಯಾರು ಗೊತ್ತೆ?
ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಲೋಕಸಭೆಯಲ್ಲಿ ಪ್ರಧಾನಿಯವರು ಮಾಡಿದ ಭಾಷಣದಲ್ಲಿ ಯಾವುದೇ ಹೊಸತನವಿಲ್ಲ” ಎಂದು ಹೇಳಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ಮಾಡಿದ ತಮ್ಮ ಭಾಷಣದಲ್ಲಿ, “ಪಶ್ಚಿಮ ಏಷ್ಯಾ ಯುದ್ಧದಿಂದ ಎದುರಾಗಿರುವ ಆರ್ಥಿಕ ಮತ್ತು ಭದ್ರತಾ ಸವಾಲುಗಳನ್ನು ಭಾರತ ಸಮರ್ಥವಾಗಿ ಎದುರಿಸುತ್ತಿದೆ. ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ವ್ಯತ್ಯಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ವಾಣಿಜ್ಯ ಹಡಗುಗಳ ಮೇಲಿನ ದಾಳಿ ಸ್ವೀಕಾರಾರ್ಯವಲ್ಲ. ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸರ್ಕಾರ ನಿರಂತರ ನಿಗಾ ವಹಿಸಿದೆ” ಎಂದು ಹೇಳಿದ್ದರು.




