ಅಯೋಧ್ಯೆಯ ರಾಮ ಪ್ರಾಣ ಪ್ರತಿಷ್ಠಾಪನೆಯ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ರಾಮನ ಪರವಾಗಿ ನ್ಯಾಯ ನೀಡಿದ ನ್ಯಾಯಾಂಗಕ್ಕೆ ಧನ್ಯವಾದ ತಿಳಿಸಿದರು.
“ಸಂವಿಧಾನ ಅಸ್ತಿತ್ವ ಬಂದ ನಂತರವೂ ರಾಮನ ಅಸ್ತಿತ್ವದ ಬಗ್ಗೆ ಹಲವು ದಶಕಗಳ ಕಾಲ ಕಾನೂನು ಸಮರ ಉಂಟಾಗಿತ್ತು. ಕಾನೂನು ರೀತಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ತೀರ್ಪು ನೀಡಿದ ನ್ಯಾಯಾಂಗಕ್ಕೆ ಧನ್ಯವಾದ ಹೇಳುತ್ತೇನೆ” ಎಂದು ನರೇಂದ್ರ ಮೋದಿ ಹೇಳಿದರು.
“ಜನವರಿ 22 ಉದ್ಘಾಟನೆಯ ದಿನ ಮಾತ್ರವಲ್ಲ. ಇದು ಹೊಸ ಯುಗದ ಆಗಮನವನ್ನು ಸೂಚಿಸುತ್ತದೆ. ನಮ್ಮ ತಪಸ್ಸಿನಲ್ಲಿ ನ್ಯೂನತೆಗಳಿದ್ದ ಕಾರಣ ಬೇಗನೆ ಮಂದಿರ ನಿರ್ಮಾಣವಾಗದಿರುವುದಕ್ಕೆ ನಾನು ರಾಮನಲ್ಲಿ ಕ್ಷಮೆ ಕೋರುತ್ತೇನೆ. ಈಗ ಆ ವಿಳಂಬವನ್ನು ನಿವಾರಿಸಲಾಗಿದೆ” ಎಂದು ಹೇಳಿದರು.
2019ರ ನವೆಂಬರ್ 9ರಂದು ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದ ರಂಜನ್ ಗೊಗಾಯ್ ನೇತೃತ್ವದ ಐವರು ಹಿರಿಯ ನ್ಯಾಯಾಧೀಶರ ಪೀಠ ಮಸೀದಿ ಇದ್ದ ಜಾಗದಲ್ಲಿ ಮಂದಿರದ ಕುರುಹುಗಳಿವೆ ಎಂಬ ಭಾರತದ ಪುರಾತತ್ವ ಇಲಾಖೆಯ ವರದಿಯನ್ನು ಆಧರಿಸಿ ರಾಮನ ಜನ್ಮಸ್ಥಾನ ಎಂದು ರಾಮ್ಲಲ್ಲಾ ಟ್ರಸ್ಟ್ ಪರವಾಗಿ ತೀರ್ಪು ನೀಡಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುವಜನರ ವಿಶ್ವಾಸ ಉಳಿಸಿಕೊಳ್ಳುವುದೇ ಕೆಪಿಎಸ್ಸಿ?
ಇದಲ್ಲದೆ 1992ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದಕ್ಕೆ ಹಾಗೂ ಅದರಿಂದ ಉಂಟಾದ ಗಲಭೆಯಿಂದ 2 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿತ್ತು. ಮಸೀದಿಗೆ ಹಾನಿಮಾಡಿದ್ದು, ಕಾನೂನು ಕೈಗೆ ತೆಗೆದುಕೊಂಡಿದ್ದೂ ಸರಿಯಲ್ಲ. ವಿವಾದಿತ ಜಾಗವನ್ನು ಮೂರು ಭಾಗ ಮಾಡಿದ್ದಕ್ಕೆ ಎಲ್ಲೆಡೆಯಿಂದಲೂ ವಿರೋಧವಿದೆ ಎಂದು ಹೇಳಿದ್ದ ಕೋರ್ಟ್, 450 ವರ್ಷಗಳ ಹಿಂದೆ ನಿರ್ಮಿಸಲಾದ ಮಸೀದಿಯಿಂದ ಮುಸ್ಲಿಂ ಸಮುದಾಯವನ್ನು ತಪ್ಪಾಗಿ ವಂಚಿಸಲಾಗಿದೆ ಎಂದು ತಿಳಿಸಿತ್ತು.
“ಸುನ್ನಿ ವಕ್ಫ್ ಬೋರ್ಡ್ಗೆ ಮಸೀದಿ ನಿರ್ಮಾಣಕ್ಕೆ ಬೇರೆಡೆ ಪ್ರತ್ಯೇಕ 5 ಎಕರೆ ಭೂಮಿ ನೀಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿತ್ತು. ಬಾಬ್ರಿ ಮಸೀದಿಯನ್ನು ಖಾಲಿ ಜಾಗದಲ್ಲಿ ನಿರ್ಮಿಸಲಾಗಿಲ್ಲ, ವಿವಾದಿತ ಕಟ್ಟಡ ಇಸ್ಲಾಮಿಕ್ ಸಂರಚನೆ ಹೊಂದಿಲ್ಲ” ಎಂದೂ ನ್ಯಾಯಪೀಠ ಹೇಳಿತು.
ಅಂದು ಆದೇಶ ನೀಡಿದ ಐವರು ನ್ಯಾಯಾಧೀಶರಲ್ಲಿ ಹಾಲಿ ಮುಖ್ಯ ನ್ಯಾಯಾಧೀಶರಾಗಿರುವ ಡಿ ವೈ ಚಂದ್ರಚೂಡ್ ಕೂಡ ಇಂದಿನ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಂದಿರ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಪಕ್ಷಗಳ ‘ಇಂಡಿಯಾ’ ಒಕ್ಕೂಟದ ಪ್ರತಿನಿಧಿಗಳು ಪಾಲ್ಗೊಂಡಿರಲಿಲ್ಲ. ಅಪೂರ್ಣಗೊಂಡಿರುವ ಮಂದಿರವನ್ನು ಉದ್ಘಾಟನೆಗೊಳಿಸಲಾಗುತ್ತಿದ್ದು, ಬಿಜೆಪಿ ಮತ್ತು ಆರ್ಎಸ್ಎಸ್ ಇದನ್ನು ಧರ್ಮದ ರಾಜಕೀಯವನ್ನಾಗಿ ಬಳಸಿ ಲಾಭ ಪಡೆದುಕೊಳ್ಳಲು ಬಯಸುತ್ತಿದೆ ಎಂದು ಹಲವು ನಾಯಕರು ತಿರಸ್ಕರಿಸಿದ್ದರು.
ಮಂದಿರ ಅಪೂರ್ಣಗೊಂಡಿರುವ ಕಾರಣಕ್ಕೆ ಪುರಿ, ಜೋಷಿಮಠ್ ಶಂಕರಾಚಾರ್ಯರು ಸೇರಿದಂತೆ ಪ್ರಮುಖ ನಾಲ್ವರು ಮಠಾಧೀಶರು ಉದ್ಘಾಟನೆಯಿಂದ ಹೊರಗುಳಿದಿದ್ದರು.





