ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿದ ‘ಸಂಸತ್ತಿನಲ್ಲಿ ನಾಟಕ ಬೇಡ, ಕೆಲಸ ಬೇಕು’ ಎಂಬ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಅವರು, ಸಂಸತ್ತು ಇರುವುದೇ ಜನರ ಸಮಸ್ಯೆಗಳನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಮಂಡಿಸಲು ಮತ್ತು ಚರ್ಚಿಸಲು. ಅದನ್ನು ನಾಟಕವೆಂದು ಕರೆಯುವುದು ಸರಿಯಲ್ಲ. ಸಂಸತ್ತಿನಲ್ಲಿ ಎಸ್ಐಆರ್ ಮತ್ತು ದೆಹಲಿಯ ವಾಯು ಮಾಲಿನ್ಯದಂತಹ ಗಂಭೀರ ವಿಷಯಗಳನ್ನು ಚರ್ಚಿಸುವುದು ನಾಟಕವಲ್ಲ ಎಂದು ಹೇಳಿದ್ದಾರೆ.
ಜನರ ಸಮಸ್ಯೆಗಳ ಬಗ್ಗೆ ಪ್ರಜಾಸತ್ತಾತ್ಮಕ ಚರ್ಚೆಗೆ ಅವಕಾಶ ನೀಡದೇ ತಡೆಯುವ ಕೆಲಸವೇ ನಿಜವಾದ ‘ಡ್ರಾಮಾ’ ಎಂದು ಪ್ರಧಾನಿಗೆ ತಿರುಗೇಟು ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಕೊಟ್ಟ ಮಾತು’ ಗದ್ದಲ ಸೃಷ್ಟಿಸಿದ ಬಳಿಕ ಎಚ್ಚೆತ್ತ ಕಾಂಗ್ರೆಸ್
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಮಂತ್ರಿ ಮೋದಿ, ವಿಪಕ್ಷಗಳು ಕಳೆದ 10 ವರ್ಷಗಳಿಂದ ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸುವ ಮೂಲಕ ಕೆಲಸಕ್ಕೆ ಅಡ್ಡಿ ಮಾಡುತ್ತಿರುವುದಾಗಿ ಆರೋಪಿಸಿದ್ದರು. ಸಂಸತ್ತು ನಾಟಕ ಪ್ರದರ್ಶಿಸುವ ಸ್ಥಳವಲ್ಲ, ನೀತಿಗಳ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಾದ ವೇದಿಕೆ ಎಂದು ಅವರು ಹೇಳಿದರು.
ಈ ಬಾರಿ ಚಳಿಗಾಲದ ಅಧಿವೇಶನ ಕೇವಲ 15 ದಿನ ಮಾತ್ರ ನಡೆಯಲಿದ್ದು, ಸಾಮಾನ್ಯವಾಗಿ ಇರುವ 20 ದಿನಗಳ ಅವಧಿಗಿಂತ ಕಡಿಮೆ. ಸರ್ಕಾರವು 14 ಮಸೂದೆಗಳನ್ನು ಮಂಡಿಸಲು ತಯಾರಿ ನಡೆಸಿದೆ. ಇದೇ ವೇಳೆ ವಿಪಕ್ಷಗಳು ಎಸ್ಐಆರ್ ಪ್ರಕ್ರಿಯೆ, ಬೂತ್ ಮಟ್ಟದ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು ಹಾಗೂ ಇತ್ತೀಚಿನ ದೆಹಲಿ ಭಯೋತ್ಪಾದಕ ದಾಳಿಯ ಕುರಿತಂತೆ ತುರ್ತು ಚರ್ಚೆ ನಡೆಸಬೇಕು ಎಂದು ಒತ್ತಾಯಿಸುತ್ತಿವೆ.
ಈ ಮಧ್ಯೆ ಲೋಕಸಭೆಯಲ್ಲಿ ಸರ್ಕಾರ ಕೇಂದ್ರ ಸುಂಕ (ತಿದ್ದುಪಡಿ) ಮಸೂದೆ ಸೇರಿದಂತೆ ಪ್ರಮುಖ ಮಸೂದೆ ಮಂಡಿಸಲು ಸರ್ಕಾರ ಮುಂದಾಗಿದೆ. ಚಳಿಗಾಲದ ಅಧಿವೇಶನದ ಮೊದಲ ದಿನವೇ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಗದ್ದಲ ಉಂಟಾದ ಪರಿಣಾಮ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೂ ಮುಂದೂಡಲಾಯಿತು.





