ತಮಿಳುನಾಡಿನಲ್ಲಿ ಜನವರಿ 2ನೇ ವಾರ ಪೊಂಗಲ್ ಹಬ್ಬ ನಡೆಯಲಿದೆ. ಹಬ್ಬಕ್ಕೂ ಮುನ್ನ, ಸರ್ಕಾರವು ಎಲ್ಲ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ತಲಾ 3,000 ರೂ. ನಗದು ಉಡುಗೊರೆ ಘೋಷಿಸಿದೆ.
ಶ್ರೀಲಂಕಾದ ತಮಿಳು ಪುನರ್ವಸತಿ ಶಿಬಿರಗಳಲ್ಲಿ ವಾಸಿಸುವ ಕುಟುಂಬಗಳು ಸೇರಿದಂತೆ ಎಲ್ಲ ಪಡಿತರ ಚೀಟಿದಾರ ಕುಟುಂಬಗಳಿಗೆ 3,000 ರೂಪಾಯಿ ನಗದು ಸಹಾಯವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಿಳಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 2.23 ಕೋಟಿ ಪಡಿತರ ಚೀಟಿದಾರರು ಮತ್ತು ಪುನರ್ವಸತಿ ಶಿಬಿರಗಳಲ್ಲಿ ಸುಮಾರು 19,000 ಕುಟುಂಬಗಳು ವಾಸಿಸುತ್ತಿದ್ದಾರೆ. ಅವರೆಲ್ಲರಿಗೂ ನಗದು ಉಡುಗೊರೆ ನೀಡಲಾಗುತ್ತದೆ ಎಂದಿದ್ದಾರೆ.
2014ರಲ್ಲಿ ಪೊಂಗಲ್ ಹಬ್ಬದ ಸಮಯದಲ್ಲಿ ಪಡಿತರ ಚೀಟಿದಾರರಿಗೆ ನಗದು ಉಡುಗೊರೆ ನೀಡುವುದನ್ನು ಪರಿಚರಿಸಲಾಯಿತು. ಆರಂಭದಲ್ಲಿ, ಪ್ರತಿ ವರ್ಷದ ಹಬ್ಬದ ಸಮಯದಲ್ಲಿ 100 ರೂ. ನೀಡಲಾಗುತ್ತಿತ್ತು. 2019ರಲ್ಲಿ 1,000 ರೂ.ಗೆ ಹೆಚ್ಚಿಸಲಾಗಿತ್ತು. 2021ರಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ ಸರ್ಕಾರ, ನಗದು ಹಣವನ್ನು 3,000 ರೂ.ಗೆ ಏರಿಕೆ ಮಾಡಿತು.
ಈ ವರ್ಷ, ರಾಜ್ಯ ಸರ್ಕಾರವು ಪೊಂಗಲ್ ಉಡುಗೊರೆ ಯೋಜನೆಯ ಅನುಷ್ಠಾನಕ್ಕಾಗಿ 6,936.18 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಪಡಿತರ ಅಂಗಡಿ ನೌಕರರ ಮೂಲಕ ನಗದು ಸಹಾಯವನ್ನು ವಿತರಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಈ ಲೇಖನ ಓದಿದ್ದೀರಾ?:2025ರಲ್ಲಿ ಧರ್ಮಾಧಾರಿತ ಹಿಂಸಾಚಾರ, ಗುಂಪು ದಾಳಿಗಳು ಹೆಚ್ಚಳ !- ವರದಿ
ನಗದು ಉಡುಗೊರೆಯ ಜೊತೆಗೆ, ಫಲಾನುಭವಿಗಳಿಗೆ ತಲಾ 1 ಕೆ.ಜಿ ಹಸಿ ಅಕ್ಕಿ, ಸಕ್ಕರೆ ಹಾಗೂ ಒಂದು ಕಬ್ಬನ್ನು ನೀಡಲಾಗುತ್ತದೆ. ಅಲ್ಲದೆ, 1.76 ಕೋಟಿ ಪಡಿತರ ಚೀಟಿದಾರರಿಗೆ ಉಚಿತ ಧೋತಿ ಮತ್ತು ಸೀರೆಗಳನ್ನು ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಮೂಲತಃ, ಪೊಂಗಲ್ ಸಮಯದಲ್ಲಿ ನಗದು ಉಡುಗೊರೆ ನೀಡುವ ಪದ್ಧತಿಯನ್ನು ಮೊದಲು 1990ರಲ್ಲಿ ಅಂದಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಪರಿಚಯಿಸಿದರು. ಅವರು ಪಿಂಚಣಿದಾರರಿಗೆ 100 ರೂ. ಘೋಷಿಸಿದ್ದರು. ಇದನ್ನು, 1998 ರಲ್ಲಿ 150 ರೂ.ಗೆ ಹೆಚ್ಚಿಸಲಾಯಿತು. 2014ರಲ್ಲಿ ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಈ ಯೋಜನೆಯನ್ನು ಪಡಿತರದಾರರಿಗೆ ವಿಸ್ತರಿಸಿದರು.




