ಉದ್ಯಮಿಯೊಬ್ಬರ ಹತೈ ಪ್ರಕರಣದಲ್ಲಿ ಆರೋಪಿಯಾಗಿರುವ ಅಖಿಲ ಭಾರತ ಹಿಂದೂ ಮಹಾಸಭಾ (ABHM) ನಾಯಜಿ ಪೂಜಾ ಶಕುನ್ ಪಾಂಡೆ ವಿರುದ್ದ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಆಕೆ ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆಯನ್ನು ರಾಜಸ್ಥಾನದ ಭರತ್ಪುರದಲ್ಲಿ ಬಂಧಿಸಲಾಗಿದೆ.
ಉತ್ತರ ಪ್ರದೇಶದ ಅಲಿಗಢದಲ್ಲಿ ಉದ್ಯಮಿ ಅಭಿಷೇಕ್ ಗುಪ್ತಾ ಅವರನ್ನು ಸೆಪ್ಟೆಂಬರ್ 26ರಂದು ಹತ್ಯೆ ಮಾಡಲಾಗಿತ್ತು. ಹತ್ಯೆಗೆ ಪೂಜಾ ಶಕುನ್ ಪಾಂಡೆಯೇ ರುವಾರಿ ಎಂದು ಆರೋಪಿಸಲಾಗಿದೆ. ಇದೀಗ, ಅಭಿಷೇಕ್ ಅವರಿಗೆ ಪೂಜಾ ಪಾಂಡೆ ಲೈಂಗಿಕ ಕಿರುಕುಳ ನೀಡಿದ್ದರು ಎಂಬುದು ಬೆಳಕಿಗೆ ಬಂದಿದೆ.
ದ್ವಿಚಕ್ರ ವಾಹನ ಶೋರೂಂ ಮಾಲೀಕ ಅಭಿಷೇಕ್ ಗುಪ್ತಾ ಅವರು ಹತ್ರಾಸ್ಗೆ ತೆರಳಲು ಅಲಿಗಢದಲ್ಲಿ ಬಸ್ ಹತ್ತುವಾಗ, ಅವರನ್ನು ರೋರಾವರ್ ಪ್ರದೇಶದಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಈ ಹತ್ಯೆಗೆ ಪೂಜಾ ಶಕುನ್ ಪಾಂಡೆ ಮತ್ತು ಆಕೆಯ ಪತಿ, ABHM ವಕ್ತಾರ ಅಶೋಕ್ ಪಾಂಡೆ ರೂವಾರಿಗಳಾಗಿದ್ದು, ಮೊಹಮ್ಮದ್ ಫಜಲ್ ಮತ್ತು ಆಸಿಫ್ ಎಂಬ ಇಬ್ಬರು ಶೂಟರ್ಗಳಿಗೆ ಸುಫಾರಿ ನೀಡಿದ್ದರು ಎಂದು ಆರೋಪಿಸಲಾಗಿದೆ.
ಅಲಿಗಢದ ರೋರವರ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಆರಂಭಿಸಿದ್ದರು.
ಆರೋಪಿ ಪೂಜಾ ಪಾಂಡೆ ಕೆಲವು ದಿನಗಳಿಂದ ಅಭಿಷೇಕ್ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಆಕೆಯಿಂದ ದೂರ ಉಳಿಯಲು ಅಭಿಷೇಕ್ ಮುಂದಾಗಿದ್ದರಿಂದ, ಅವರನ್ನು ಕೊಲ್ಲಲು ಪೂಜಾ ಪಾಂಡೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಜೊತೆಗೆ, ಇಬ್ಬರ ನಡುವಿನ ವ್ಯವಹಾರಗಳೂ ಹತ್ಯೆಗೆ ಕಾರಣ ಇರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ.




