ಚುನಾವಣಾ ತಂತ್ರಜ್ಞನಿಂದ ರಾಜಕಾರಣಿಯಾಗಿ ಬದಲಾಗಿರುವ ಪ್ರಶಾಂತ್ ಕಿಶೋರ್ ಅವರು ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ‘ಜನ ಸುರಾಜ್’ ಪಕ್ಷದ ಸಂಘಟನಾ ಕಾರ್ಯಗಳತ್ತ ಗಮನ ಹರಿಸಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಪ್ರಕಟವಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಘೋಪುರ ಕ್ಷೇತ್ರದಿಂದ ಚಂಚಲ್ ಸಿಂಗ್ ಅವರನ್ನು ಹಾಗೂ ಕಾರ್ಗಹಾರ್ ಕ್ಷೇತ್ರದಿಂದ ರಿತೇಶ್ ರಂಜನ್ (ಪಾಂಡೆ) ಅವರನ್ನು ಜನ ಸುರಾಜ್ ಪಕ್ಷ ಪ್ರಕಟಿಸಿತ್ತು. ಇದರಿಂದಲೇ ಕಿಶೋರ್ ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸದಿರುವುದು ದೃಢಪಟ್ಟಿತು.
ರಾಘೋಪುರ ಕ್ಷೇತ್ರವು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಕ್ಷೇತ್ರವಾಗಿದ್ದು, ಅಲ್ಲಿ ಕಿಶೋರ್ ಸ್ಪರ್ಧಿಸಿದ್ದರೆ ಕಠಿಣ ಹೋರಾಟ ಎದುರಿಸಬೇಕಾಗಿತ್ತು. ಪಕ್ಷದ ಪ್ರಮುಖ ಮುಖವಾಗಿರುವುದರಿಂದ ಅವರು ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ರಾಜ್ಯದಾದ್ಯಂತ ಪ್ರಚಾರ ಮತ್ತು ಸಂಘಟನೆಗೆ ಗಮನ ಹರಿಸುವುದು ಸೂಕ್ತ ಎಂದು ಪಕ್ಷ ನಿರ್ಧರಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪಟೇಲರನ್ನು ಹೈಜಾಕ್ ಮಾಡುವುದು ಆರ್ಎಸ್ಎಸ್ಗೆ ಸುಲಭವಲ್ಲ!
‘ಜನ ಸುರಾಜ್ ಪಕ್ಷದ ನಿರ್ಧಾರದಿಂದ ನಾನು ಸಂಘಟನಾ ಕಾರ್ಯಗಳತ್ತ ಸಂಪೂರ್ಣ ಗಮನ ಹರಿಸುತ್ತೇನೆ,’ ಎಂದು ಕಿಶೋರ್ ಹೇಳಿದರು. ಪಕ್ಷಕ್ಕೆ 150ಕ್ಕಿಂತ ಕಡಿಮೆ ಸ್ಥಾನಗಳು ಬಂದರೆ ಅದನ್ನು ‘ಸೋಲು’ ಎಂದು ಪರಿಗಣಿಸುವುದಾಗಿ ಅವರು ಘೋಷಿಸಿದರು.
ಎನ್ಡಿಎ ಸರ್ಕಾರ ಸೋಲುವುದು ಖಚಿತ ಎಂದು ಕಿಶೋರ್ ಇದೇ ಸಂದರ್ಭದಲ್ಲಿ ತಿಳಿಸಿದರು. ನೀತೀಶ್ ಕುಮಾರ್ ನೇತೃತ್ವದ ಜೆಡಿಯು ಈ ಬಾರಿ 25 ಸ್ಥಾನಗಳಿಗೂ ತಲುಪುವುದಿಲ್ಲ. ಎನ್ಡಿಎ ಸರ್ಕಾರ ಹಿನ್ನಡೆಯಲ್ಲಿದೆ ಮತ್ತು ನೀತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗುವ ಸಾಧ್ಯತೆ ಇಲ್ಲ ಎಂದರು.
ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ಮತದಾನ ನವೆಂಬರ್ 6 ಮತ್ತು 11ರಂದು ನಡೆಯಲಿದ್ದು, ಫಲಿತಾಂಶ ನವೆಂಬರ್ 14ರಂದು ಪ್ರಕಟವಾಗಲಿದೆ.





