ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಲು ಅವಕಾಶ ನಿರಾಕರಿಸಿದ ಬೆನ್ನಲ್ಲೇ, ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು (ಫೆ. 3) ಸಂಸತ್ತಿನ ಹೊರಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ನಮ್ಮ ಪ್ರಧಾನಿಯವರು ರಾಜಿ ಮಾಡಿಕೊಂಡಿದ್ದಾರೆ ಮತ್ತು ಅವರು ದೇಶವನ್ನು ಮಾರಾಟ ಮಾಡಿದ್ದಾರೆ,” ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು.
ಇತ್ತೀಚೆಗೆ ಅಮೆರಿಕದೊಂದಿಗೆ ಸಹಿ ಹಾಕಲಾದ ‘ವ್ಯಾಪಾರ ಒಪ್ಪಂದ’ದ (Trade Deal) ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀವ್ರ ಒತ್ತಡಕ್ಕೆ ಮಣಿದು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಆರೋಪಿಸಿದರು. “ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಒಪ್ಪಂದಕ್ಕೆ, ಏಕಾಏಕಿ ನಿನ್ನೆ ಸಂಜೆ ಏಕೆ ಸಹಿ ಹಾಕಲಾಯಿತು? ಪ್ರಧಾನಿ ಮೋದಿ ವಿಚಲಿತರಾಗಿದ್ದಾರೆ ” ಎಂದು ಅವರು ಹೇಳಿದರು.
ಅಮೆರಿಕದಲ್ಲಿ ಗೌತಮ್ ಅದಾನಿ ವಿರುದ್ಧ 1,111 ಪ್ರಕರಣಗಳಿವೆ. ಅದಾನಿ ಸಮೂಹ ಕೇವಲ ಒಂದು ಉದ್ಯಮವಲ್ಲ, ಅದು ಪ್ರಧಾನಿ ಮೋದಿಯವರ “ಆರ್ಥಿಕ ಆಧಾರಸ್ತಂಭ”. ಅದಾನಿಯವರನ್ನು ಗುರಿಯಾಗಿಸುವುದು ಎಂದರೆ ಮೋದಿಯವರನ್ನೇ ಗುರಿಯಾಗಿಸಿದಂತೆ ಎಂದು ರಾಹುಲ್ ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!
ಎಪ್ಸ್ಟೀನ್ ಫೈಲ್ಸ್ನಲ್ಲಿ ಇನ್ನೂ ಬಹಿರಂಗವಾಗದ ಅನೇಕ ಅಂಶಗಳಿದ್ದು, ಇಡೀ ದೇಶಕ್ಕೆ ಆ ಸತ್ಯ ತಿಳಿಯಬೇಕಿದೆ. ಇದು ಮೋದಿಯವರ ಮೇಲಿರುವ ಇನ್ನೊಂದು ದೊಡ್ಡ ಒತ್ತಡ ಎಂದು ಅವರು ಪ್ರತಿಪಾದಿಸಿದರು.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಕುರಿತು ಮಾತನಾಡಲು ವಿಪಕ್ಷ ನಾಯಕನಿಗೆ ಅವಕಾಶ ನೀಡಲಿಲ್ಲ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಪಕ್ಷ ನಾಯಕನ ಭಾಷಣಕ್ಕೆ ತಡೆಯೊಡ್ಡಲಾಗಿದೆ ಎಂದು ಅವರು ದೂರಿದರು.
ಸಂಸತ್ತಿನ ಕಲಾಪದಲ್ಲಿ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಆತ್ಮಕಥೆಯ ಕೆಲವು ಭಾಗಗಳನ್ನು ಉಲ್ಲೇಖಿಸಲು ರಾಹುಲ್ ಪ್ರಯತ್ನಿಸಿದಾಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ತೀವ್ರ ವಿರೋಧ ವ್ಯಕ್ತಪಡಿಸಿದರು. ಆ ಪುಸ್ತಕ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ ಎಂಬುದು ಆಡಳಿತ ಪಕ್ಷದ ವಾದವಾಗಿತ್ತು.
ದೇಶದ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, “ಈ ವ್ಯಾಪಾರ ಒಪ್ಪಂದದಲ್ಲಿ ಪ್ರಧಾನಿ ಮೋದಿ ನಿಮ್ಮ ರಕ್ತ ಮತ್ತು ಬೆವರನ್ನು ಮಾರಾಟ ಮಾಡಿದ್ದಾರೆ. ಅವರು ಕೇವಲ ನಿಮ್ಮನ್ನು ಮಾರಿಲ್ಲ, ಪೂರ್ತಿ ದೇಶವನ್ನೇ ಮಾರಾಟ ಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.





