ಅದಾನಿ ಮತ್ತು ಎನ್ಟಿಪಿಸಿ – ಈ ಕಂಪನಿಗಳು ಸ್ವತಂತ್ರ ಭಾರತದ ಈಸ್ಟ್ ಇಂಡಿಯಾ ಕಂಪನಿಗಳಾಗಿವೆ. ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಹೋರಾಡಿದ ರೀತಿಯಲ್ಲಿಯೇ, ನಾವೂ ಈ ಕಂಪನಿಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ.
ಭಾರತದಲ್ಲಿ ಪರಿಸರ ಸಂರಕ್ಷಣೆಗಾಗಿ ಹೋರಾಟಗಳು ಇತ್ತೀಚಿನ ದಿನಗಳಲ್ಲಿ ತೀವ್ರಗೊಂಡಿವೆ. ಜಾರ್ಖಂಡ್ನ ಹಜಾರಿಬಾಗ್ ಮತ್ತು ಗೋಡ್ಡಾ ಪ್ರದೇಶಗಳಲ್ಲಿ ಅದಾನಿ ಗ್ರೂಪ್ನ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳ ವಿರುದ್ಧ ಆದಿವಾಸಿಗಳು ಮತ್ತು ಪರಿಸರವಾದಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತೆಯೇ, ಉತ್ತರಾಖಂಡದ ಹೃಷಿಕೇಶದಲ್ಲಿ ಗಂಗಾ ನದಿಯ ದಡದಲ್ಲಿ ಗಣಿಗಾರಿಕೆಗಾಗಿ ಬಡವರ ಭೂಮಿ ಕಸಿದುಕೊಳ್ಳಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಗಳು ಭುಗಿಲೆದ್ದಿವೆ. ಛತ್ತೀಸ್ಗಢದ ರಾಯ್ಗಢ ಜಿಲ್ಲೆಯ ತಮ್ನಾರ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆ ವಿರುದ್ಧ ಹೋರಾಟಗಳು ನಡೆಯುತ್ತಿದ್ದು, ಅಲ್ಲಿ ಶನಿವಾರ ಹಿಂಸಾಚಾರ ನಡೆದಿದೆ. ಈ ಮೂರು ರಾಜ್ಯಗಳಲ್ಲಿಯೂ ಬಿಜೆಪಿಯೇ ಅಧಿಕಾರದಲ್ಲಿದ್ದು, ಅಲ್ಲಿನ ಸರ್ಕಾರಗಳು ಪ್ರಧಾನಿ ಮೋದಿ ಅವರ ಅತ್ಯಾಪ್ತ ಉದ್ಯಮಿ ಅದಾನಿಗೆ ಲಾಭ ಮಾಡಿಕೊಡಲು ತಂತ್ರ-ಕುತಂತ್ರಗಳನ್ನು ರೂಪಿಸುತ್ತಿವೆ ಎಂದು ಆರೋಪಿಸಲಾಗಿದೆ.
ಹೃಷಿಕೇಶ್ ಮತ್ತು ಹರಿದ್ವಾರದಲ್ಲಿ ಪ್ರತಿಭಟನೆಗಳು
ಉತ್ತರಾಖಂಡದ ಹೃಷಿಕೇಶ್ ಮತ್ತು ಹರಿದ್ವಾರದಲ್ಲಿ ಸರ್ಕಾರವು ಗಣಿಗಾರಿಕೆ ಯೋಜನೆಗಳನ್ನು ರೂಪಿಸಿದೆ. ಗಣಿಗಾರಿಕೆ ನಡೆಸಲು ಅದಾನಿ ಗ್ರೂಪ್ಗೆ ಅನುಮತಿ ನೀಡುವ ಉದ್ದೇಶದಿಂದ, ತಮ್ಮ ಭೂಮಿಯನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ, ಅರಣ್ಯ ಪ್ರದೇಶವನ್ನು ನಾಶ ಮಾಡಲು ಮುಂದಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಡಿಸೆಂಬರ್ 29ರಂದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೇ ಮಾರ್ಗಗಳನ್ನು ನಿರ್ಬಂಧಿಸಿದ್ದಾರೆ. ತಮ್ಮ ಭೂಮಿಯ ಸರ್ವೇಗಾಗಿ ಬಂದ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಅಂದಹಾಗೆ, ಹೃಷಿಕೇಶ್ ಮತ್ತು ಹರಿದ್ವಾರದಲ್ಲಿ ಸ್ಥಳೀಯ ನಿವಾಸಿಗಳು ಸುಮಾರು 2,866 ಏಕರೆ ರಕ್ಷಿತ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಸರ್ಕಾರವು ಆರೋಪಿಸಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ‘ಸರ್ಕಾರ ಸ್ಥಾಪಿಸಿರುವ ‘ತನಿಖಾ ಸಮಿತಿ’ಯು ಅತಿಕ್ರಮಣಗೊಂಡ ಅರಣ್ಯ ಭೂಮಿಯನ್ನು ಸರ್ವೇ ನಡೆಸಿ, ವರದಿ ನೀಡಬೇಕು’ ಎಂದು ಡಿಸೆಂಬರ್ 22ರಂದು ಆದೇಶಿಸಿದೆ.

ಆದರೆ, ಸಮೀಕ್ಷೆಯನ್ನು ವಿರೋಧಿಸಿರುವ ಸ್ಥಳೀಯರು ಹಲವಾರು ದಶಕಗಳಿಂದ ನಾವು ಇಲ್ಲಿ ವಾಸಿಸುತ್ತಿದ್ದೇವೆ. ಕೃಷಿ ಮಾಡಿ ಬದುಕುತ್ತಿದ್ದೇವೆ. ‘ಸಮೀಕ್ಷೆಯ ಹೆಸರಿನಲ್ಲಿ ನಮ್ಮ ಭೂಮಿಯನ್ನು ಕಸಿದುಕೊಂಡರೆ, ನಾವೆಲ್ಲಿಗೆ ಹೋಗಬೇಕು’ ಎಂದು ಸ್ಥಳೀಯ ನಿವಾಸಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಅಲ್ಲದೆ, ಗಂಗಾ ನದಿ ತೀರದಲ್ಲಿರುವ ಈ ಪ್ರದೇಶಗಳಲ್ಲಿ ಸೋಲಾರ್ ಪವರ್ ಪ್ರಾಜೆಕ್ಟ್ ಮತ್ತು ರೇತು-ಕಲ್ಲು ಗಣಿಗಾರಿಕೆ ನಡೆಸಲು ಸರ್ಕಾರ ಯೋಜಿಸಿದೆ. ಅದಕ್ಕಾಗಿ, ನಮ್ಮನ್ನು ಈ ಪ್ರದೇಶದಿಂದ ಹೊರಹಾಕಲು ಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈಗಾಗಲೇ, ಸರ್ಕಾರವು ಪರಿಸರ ನಿಯಮಗಳನ್ನು ಸಡಿಲಗೊಳಿಸಿ ಈ ಪ್ರದೇಶದಲ್ಲಿ ಅದಾನಿ ಗ್ರೂಪ್ ನಡೆಸುತ್ತಿರುವ ಚಾರ್ ಧಾಮ್ ಯೋಜನೆಗಾಗಿ ಗುಡ್ಡಗಳನ್ನು ಅಗೆಯಲಾಗುತ್ತಿದೆ. ಹೈಡ್ರೋಪವರ್ ಯೋಜನೆಗಳಿಂದಾಗಿ ನದಿ ಮತ್ತು ಅರಣ್ಯಕ್ಕೆ ಸಾಕಷ್ಟು ತೊಂದರೆಯಾಗಿದೆ. ಈಗ, ಅದಾನಿ ಗ್ರೂಪ್ಗೆ ಸೋಲಾರ್ ಪವರ್ ಯೋಜನೆ ಮತ್ತು ರೇತು-ಕಲ್ಲು ಗಣಿಗಾರಿಕೆಗಳ ನೀಡುವ ಮೂಲಕ ಗಂಗಾ ನದಿ ಮತ್ತು ಅರಣ್ಯಕ್ಕೆ ಮತ್ತಷ್ಟು ಕೊಡಲಿ ಪೆಟ್ಟು ಕೊಡಲು ಸರ್ಕಾರ ಮುಂದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದು, ಹಲವರನ್ನು ಬಂಧಿಸಿದ್ದಾರೆ.
ಜಾರ್ಖಂಡ್ನ ಹಜಾರಿಬಾಗ್ನಲ್ಲಿ ಜನಾಕ್ರೋಶ
ಅಂತೆಯೇ, ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿರುವ ಬರ್ಕಗಾಂವ್ ಬ್ಲಾಕ್ನಲ್ಲಿ ಸ್ಥಳೀಯರು ಬೃಹತ್ ಮಹಾಪಂಚಾಯತಿ ನಡೆಸಿದ್ದಾರೆ. ಕಲ್ಲಿದ್ದಲು ಸಮೃದ್ಧ ರಾಜ್ಯವಾದ ಜಾರ್ಖಂಡ್ನಲ್ಲಿ ಅದಾನಿ ಎಂಟರ್ಪ್ರೈಸಸ್ ಕಂಪನಿಯು ಗಣಿಗಾರಿಕೆಯನ್ನು ನಡೆಸುತ್ತಿದೆ. ಹಜಾರಿಬಾಗ್ಗೂ ಗಣಿಗಾರಿಕೆ ವಿಸ್ತರಿಸಲು ಮುಂದಾಗಿದೆ. ಕಲ್ಲಿದ್ದಲು ಗಣಿಗಾರಿಕೆಗಾಗಿ ಪರಿಸರವನ್ನೂ, ಜನರ ಬದುಕನ್ನೂ ಕಸಿದುಕೊಳ್ಳಲಾಗುತ್ತಿದೆ ಎಂದು ಜನರು ಪ್ರತಿಭಟನೆಗೆ ಇಳಿದಿದ್ದಾರೆ. “ನಾವು ನಮ್ಮ ಮನೆಗಳನ್ನು ಅಥವಾ ನಮ್ಮ ಕಾಡುಗಳನ್ನು ಬಿಡುವುದಿಲ್ಲ! ನಮ್ಮ ತಾಯಿ ಭೂಮಿಯನ್ನೂ ಬಿಡುವುದಿಲ್ಲ. ನಾವು ನಮ್ಮ ಹೋರಾಟವನ್ನು ಬಿಡುವುದಿಲ್ಲ…” ಎಂದು ಘೋಷಣೆ ಕೂಗಿದ್ದಾರೆ.
ಹಜಾರಿಬಾಗ್ನ ಬರ್ಕಗಾಮವ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಸರ್ಕಾರಗಳು ಪ್ರಸ್ತಾಪಿಸಿವೆ. ಯೊಜನೆಯ ಅನುಷ್ಠಾನಕ್ಕಾಗಿ ಅದಾನಿ ಕಂಪನಿಗೆ ಸುಮಾರು 513 ಹೆಕ್ಟೇರ್ ಭೂಮಿಯನ್ನು ಸರ್ಕಾರ ಮಾರಾಟ ಮಾಡಿದೆ. ಇದರಲ್ಲಿ, 40%ರಷ್ಟು ಅರಣ್ಯ ಭೂಮಿಯಾಗಿದೆ. ಉಳಿದ ಭೂಮಿಯನ್ನು ಸ್ಥಳೀಯರಿಂದ ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ. ಪ್ರಸ್ತಾಪಿತ ಯೋಜನೆಯ ವಿರುದ್ಧ ಕಳೆದ ಎರಡು ವರ್ಷಗಳಿಂದ ಇಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಈವಾರ, ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಗೊಂಡಲ್ಪುರ, ಮಕ್ತೂಬ್ ಹಾಗೂ ಹಾರ್ಲಿ ಪ್ರದೇಶಗಳ ಜನರು ಅದಾನಿ ಗ್ರೂಪ್ ವಿರುದ್ಧದ ಬೃಹತ್ ಪ್ರತಿಭಟನೆಯಲ್ಲಿ ಒಗ್ಗೂಡಿದ್ದಾರೆ.

ಯೋಜನೆಗೆ ಜನರ ಒಪ್ಪಿಗೆ ಇಲ್ಲದೆಯೇ, ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ. ಯೋಜನೆಗಾಗಿ ಜನರ ಬೆಂಬಲ ಪಡೆಯಲು ‘ನಕಲಿ ಗ್ರಾಮ ಸಭೆ’ಗಳನ್ನು ನಡೆಸಲಾಗಿದೆ. ಆದರೆ, ಈ ಸಭೆಗಳಲ್ಲಿ ಯಾವುದೇ ಗ್ರಾಮಸ್ಥರು ಭಾಗಿಯಾಗಿಲ್ಲ. ಬದಲಾಗಿ, ಪ್ರಸ್ತಾಪಿತ ಯೋಜನೆಯ ವಿರುದ್ಧ ‘ಅರಣ್ಯ-ಭೂಮಿ ಬಚಾವೋ’ ಆಂದೋಲನ ನಡೆಸುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
“ಈ ಪ್ರದೇಶದಲ್ಲಿ ಮೂರು ಪ್ರಮುಖ ಕಲ್ಲಿದ್ದಲು ಬ್ಲಾಕ್ಗಳು ಸೇರಿದಂತೆ ಒಟ್ಟು ಏಳು ಕಲ್ಲಿದ್ದಲು ಬ್ಲಾಕ್ಗಳಿವೆ. ಅದಾನಿ ಗ್ರೂಪ್, ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ಟಿಪಿಸಿ) ಮತ್ತು ಇತರ ಕಲ್ಲಿದ್ದಲು ಕಂಪನಿಗಳ ಒತ್ತಡಕ್ಕೆ ಮಣಿದು ಸರ್ಕಾರವು ನಕಲಿ ಗ್ರಾಮ ಸಭೆಗಳನ್ನು ನಡೆಸುತ್ತಲೇ ಇದೆ. ಇದರ ವಿರುದ್ಧ ಜನರು ಪ್ರತಿಭಟಿಸುತ್ತಾರೆ. ಇದರರ್ಥ ಸರ್ಕಾರ ಕೇಳುತ್ತಿರುವುದು ಆ ಕಂಪನಿಯ ಮಾತನ್ನೇ ಹೊರತು, ಜನರ ಮಾತನ್ನಲ್ಲ. ಆದ್ದರಿಂದ, ನಮ್ಮ ಧ್ವನಿಯನ್ನು ಗಟ್ಟಿಯಾಗಿ ಹೇಳಲು ಮಹಾಪಂಚಾಯತಿ ನಡೆಸುತ್ತಿದ್ದೇವೆ” ಎಂದು ಪರಿಸರ ಹೋರಾಟಗಾರ ಮಿಥ್ಲೇಶ್ ಕುಮಾರ್ ಡಾಂಗಿ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಹೆಸರು ಬೇಟಿ ಬಚಾವೋ, ರಕ್ಷಣೆ ಅತ್ಯಾಚಾರಿಗೆ; ಇದೇ ಮೋದಿ ಭಾರತ!
“ಅದಾನಿ ಮತ್ತು ಎನ್ಟಿಪಿಸಿ – ಈ ಕಂಪನಿಗಳು ಸ್ವತಂತ್ರ ಭಾರತದ ಈಸ್ಟ್ ಇಂಡಿಯಾ ಕಂಪನಿಗಳಾಗಿವೆ. ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಹೋರಾಡಿದ ರೀತಿಯಲ್ಲಿಯೇ, ನಾವೂ ಈ ಕಂಪನಿಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ. ನಮಗೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಅವರೆಲ್ಲರೂ ನಮ್ಮ ಭೂಮಿಯನ್ನು ನಮ್ಮಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಾವು ಅಸಹಾಯಕರಾಗಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘’ಭೂ ಸಂಘರ್ಷ ವಾಚ್’ ಹೇಳುವಂತೆ; ಪಕ್ರಿ ಬರ್ವಾಡಿಹ್ ಗಣಿಗಾರಿಕೆ ಸ್ಥಳವು ಅರಣ್ಯಭೂಮಿ ಮತ್ತು ರೈತರ ಕೃಷಿ ಭೂಮಿಯಾಗಿದೆ. ಇಲ್ಲಿ ಗಣಿಗಾರಿಕೆ ನಡೆಸುವುದು 23 ಹಳ್ಳಿಗಳ ಮೇಲೆ ಪರಿಣಾಮ ಬೀರುತ್ತದೆ. ತಮ್ಮ ಮೇಲಾಗುವ ದಬ್ಬಾಳಿಯ ವಿರುದ್ಧ ಬುಡಕಟ್ಟು ಜನಾಂಗದವರು, ದಲಿತರು, ಒಬಿಸಿಗಳು ಹಾಗೂ ಮುಸ್ಲಿಮರು ಸೇರಿದಂತೆ ಈ ಪ್ರದೇಶದ ಎಲ್ಲ ಸಮುದಾಯಗಳು ಒಗ್ಗೂಡಿವೆ.
ಛತ್ತೀಸ್ಗಢದ ರಾಯ್ಗಢದಲ್ಲಿ ಹಿಂಸಾಚಾರ
ಛತ್ತೀಸ್ಗಢದ ರಾಯ್ಗಢ ಜಿಲ್ಲೆಯ ತಮ್ನಾರ್ ಪ್ರದೇಶದ ಗೇರ್ ಪೆಲ್ಮಾದಲ್ಲಿ ಖಾಸಗಿ ಕಂಪನಿಯ ಕಲ್ಲಿದ್ದಲು ಗಣಿಗಾರಿಕೆಗಾಗಿ ‘ಪರಿಸರ ಸಾರ್ವಜನಿಕ ವಿಚಾರಣೆ’ಯ ನಕಲಿ ವರದಿಯನ್ನು ಸಿದ್ದಪಡಿಸಿ, ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಗಣಿಗಾರಿಕೆ ವಿರುದ್ಧ ಕಳೆದ 15 ದಿನಗಳಿಂದ 14 ಹಳ್ಳಿಗಳ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಲ್ಲಿದ್ದಲು ಸಾಗಿಸುತ್ತಿದ್ದ ಭಾರೀ ವಾಹನವೊಂದು ಸೈಕಲ್ ಸವಾರಿ ಮಾಡುತ್ತಿದ್ದ ಸ್ಥಳೀಯ ಗ್ರಾಮಸ್ಥನಿಗೆ ಡಿಕ್ಕಿ ಹೊಡೆದಿದ್ದು, ಆತ ಲಾರಿಯ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ, ಕಲ್ಲಿದ್ದಲು ಗಣಿಗಾರಿಕೆ ವಿರುದ್ಧದ ಪ್ರತಿಭಟನೆ ಶನಿವಾರ ತೀವ್ರಗೊಂಡಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಅಧಿಕಾರಿಗಳು ಯತ್ನಿಸಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಭದ್ರತಾ ಪಡೆಗಳೊಂದಿಗೆ ಪ್ರತಿಭಟನಾಕಾರರು ಘರ್ಷಣೆ ನಡೆಸಿದ್ದಾರೆ. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪ್ರತಿಭಟನಾಕಾರರು ಮತ್ತು ಕೆಲವು ಪೊಲೀಸರಿಗೆ ಗಾಯಗಳಾಗಿವೆ.
ಘಟನೆಯನ್ನು ‘ಛತ್ತೀಸ್ಗಢ ಬಚಾವೋ ಆಂದೋಲನ’ವು ದುರದೃಷ್ಟಕರವೆಂದು ಕರೆದಿದೆ. ಘಟನೆಗೆ ರಾಜ್ಯ ಸರ್ಕಾರವನ್ನು ದೂಷಿಸಿದೆ. “ಹಸ್ದಿಯೊದಿಂದ ಅಮೇರಾವರೆಗೆ ಅರಣ್ಯ ಪ್ರದೇಶಗಳಲ್ಲಿ ರಾಜ್ಯಾದ್ಯಂತ ಗಣಿಗಾರಿಕೆಗಳು ನಡೆಯುತ್ತಿವೆ. ಅವುಗಳ ವಿರುದ್ಧ ನಡೆಯುತ್ತಿರುವ ಶಾಂತಿಯುತ, ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರಗಳು ಪೊಲೀಸ್ ಬಲವನ್ನು ಪ್ರಯೋಗಿಸುತ್ತಿವೆ. ಆದಿವಾಸಿ ಮತ್ತು ರೈತರ ಜೀವನೋಪಾಯವನ್ನು ಬಲಿಕೊಟ್ಟು ಛತ್ತೀಸ್ಗಢವನ್ನು ‘ಕಾರ್ಪೊರೇಟ್ ಲೂಟಿ’ಗೆ ಒಡ್ಡುತ್ತಿವೆ” ಎಂದು ಆರೋಪಿಸಿದೆ.




