ಪುದುಚೆರಿಯ ಆಡಳಿತಾರೂಢ ಎಐಎನ್ಆರ್ಸಿ ಮತ್ತು ಬಿಜೆಪಿ ಮೈತ್ರಿಯ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಪುದುಚೆರಿ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿ, ಎಐಎನ್ಆರ್ಸಿ ಮುಖ್ಯಸ್ಥ ಎನ್.ರಂಗಸ್ವಾಮಿ ಅವರು ಮೈತ್ರಿಯ ನೇತೃತ್ವ ನಮಗೆ ನೀಡದಿದ್ದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿಯೂ ಬಿಜೆಪಿಗೆ ಎಚ್ಚರಿಕೆ ನೀಡಿದ್ದರು. ಆದರೆ ಈಗ ಎಐಎನ್ಆರ್ಸಿ ನೇತೃತ್ವದಲ್ಲೇ ಚುನಾವಣೆ ಎದುರಿಸಲು ಬಿಜೆಪಿ ಒಪ್ಪಿದೆ. ಉಭಯ ಪಕ್ಷಗಳು ಸೀಟು ಹಂಚಿಕೆಯನ್ನೂ ಮಾಡಿಕೊಂಡಿವೆ.
ಆಡಳಿತರೂಢ ಎಐಎನ್ಆರ್ಸಿ ಮತ್ತು ಬಿಜೆಪಿ – ಎಐಎಡಿಎಂಕೆ ಮೈತ್ರಿ ಪಕ್ಷಗಳು ಚುನಾವಣೆಗಾಗಿ ಸೀಟು ಹಂಚಿಕೆಯ ಬಗ್ಗೆ ಒಪ್ಪಂದ ಮಾಡಿಕೊಂಡಿವೆ. ಒಟ್ಟು 30 ವಿಧಾನಸಭಾ ಕ್ಷೇತ್ರಗಳಿರುವ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಾಗಿ ಎಐಎನ್ಆರ್ಸಿ 16 ಕ್ಷೇತ್ರಗಳಲ್ಲ ಹಾಗೂ ಬಿಜೆಪಿ 14 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.
ಮುಖ್ಯಮಂತ್ರಿ ಎನ್.ರಂಗಸ್ವಾಮಿ ಮತ್ತು ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರು ಪುದುಚೆರಿಯ ಖಾಸಗಿ ಹೋಟೆಲ್ವೊಂದರಲ್ಲಿ ಮೈತ್ರಿಗೆ ಸಂಬಂಧಿಸಿದಂತೆ ಸಭೆ ನಡೆಸಿದ್ದರು. ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಾಂಡವೀಯ, ರಂಗಸ್ವಾಮಿ ನೇತೃತ್ವದಲ್ಲೇ ಚುನಾವಣೆಯನ್ನು ಎದುರಿಸಲಿದ್ದೇವೆ. ನಮ್ಮ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ.
ಇನ್ನು, ಬಿಜೆಪಿ ತನ್ನ ಪಾಲಿಗೆ ಸಿಕ್ಕ 14 ಕ್ಷೆತ್ರಗಳ ಪೈಕಿ, ಎಐಎಡಿಎಂಕೆ ಹಾಗೂ ಹೊಸದಾಗಿ ಸ್ಥಾಪನೆಯಾಗದ ಎಲ್ಜೆಕೆ ಮೈತ್ರಿ ಪಕ್ಷಗಳಿಗೆ ತಲಾ 2 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಇರಾನ್-ಕತಾರ್ ಅನಿಲ ಘಟಕಗಳಿಗೆ ಹತ್ತಿದ ಕಿಚ್ಚು: ಭಾರತಕ್ಕೂ ತಟ್ಟಲಿದೆಯಾ ಬಿಸಿ?





