ಒಂಬತ್ತು ವರ್ಷದ ಬಾಲಕಿಯನ್ನು ಕಾಮ ಪಿಪಾಸುಗಳು ಅಪಹರಿಸಿ, ಅತ್ಯಾಚಾರಗೈದು ಆಕೆಯನ್ನು ಕೊಲೆ ಮಾಡಿ ಚರಂಡಿಯಲ್ಲಿ ಎಸೆದ ದಾರುಣ ಘಟನೆ ಪುದುಚೇರಿಯ ಸೊಲೈ ನಗರದಲ್ಲಿ ನಡೆದಿದೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
“ಐದನೇಯ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಆರೋಪಿಗಳು ಅಪಹರಣ ಮಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಅಲ್ಲದೇ, ಬಾಲಕಿಯ ಕೈ-ಕಾಲು ಕಟ್ಟಿ ಹಾಕಿ ಬಾಲಕಿಯ ಮನೆಯ ಪಕ್ಕದ ಚರಂಡಿಯಲ್ಲಿ ಎಸೆದಿದ್ದಾರೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘೋರ ಘಟನೆಯ ನಂತರ ಈ ಪ್ರದೇಶದಲ್ಲಿ ಬುಧವಾರ ಪ್ರತಿಭಟನೆಗಳು ಭುಗಿಲೆದ್ದಿವೆ. ಇಂಡಿಯಾ ಮೈತ್ರಿಕೂಟ ಹಾಗೂ ಎಐಎಡಿಎಂಕೆ ಶುಕ್ರವಾರ ಸೊಲೈ ಬಂದ್ಗೆ ಕರೆ ನೀಡಿವೆ.
ಪುದುಚೇರಿ ಮುಖ್ಯಮಂತ್ರಿ ಎನ್ ರಂಗಸಾಮಿ ಬಾಲಕಿಯ ಪೋಷಕರನ್ನು ಭೇಟಿ ಮಾಡಿದ್ದು, ಕುಟುಂಬಕ್ಕೆ ₹20 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಪೊಲೀಸರು ಬುಧವಾರ ಮುತ್ಯಾಲಪೇಟೆಯ ವಿವೇಕಾನಂದನ್ (56) ಮತ್ತು ಕರುಣಾಸ್ (19) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಾಲಕಿಯ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಆರೋಪದಡಿ ಐಪಿಸಿ ಸೆಕ್ಷನ್ಗಳು, ಪೋಕ್ಸೊ ಕಾಯ್ದೆ ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಘೋರ ಅಪರಾಧದಲ್ಲಿ ಭಾಗಿಯಾಗಿರುವವರು ಮಾದಕ ವ್ಯಸನಿಗಳು ಮತ್ತು ದಂಧೆಕೋರರು ಎಂದು ಹೇಳಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿಯನ್ನು ವಿರೋಧಿಸಿ ಡಿಎಂಕೆ ಮತ್ತು ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ’ ಮೈತ್ರಿ ಪಕ್ಷಗಳು ಮತ್ತು ಎಐಎಡಿಎಂಕೆ ಶುಕ್ರವಾರ ಬಂದ್ಗೆ ಕರೆ ನೀಡಿವೆ. ಮಾದಕ ದ್ರವ್ಯ ಮತ್ತು ನಿಷೇಧಿತ ವಸ್ತುಗಳ ಮಾರಾಟವನ್ನು ನಿರ್ಮೂಲನೆ ಮಾಡಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.
ಬುಧವಾರ ಪುದುಚೇರಿ ವಿಧಾನಸೌಧದ ಮುಂಭಾಗ ಮಹಿಳೆಯರ ಗುಂಪೊಂದು ಮುಖ್ಯಮಂತ್ರಿ ಕಾರನ್ನು ತಡೆದಿದ್ದಾರೆ. ಕೆಲವು ಕಾರ್ಯಕರ್ತರು ಬೀಚ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
“ಈ ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ಕಾರಣದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ” ಎಂದು ಗೃಹ ಸಚಿವ ಎ ನಮಸ್ಶಿವಾಯಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರೋಪಿಗಳು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆ ಎಂಬುದನ್ನು ದೃಢಪಡಿಸಲು ಸಾಧ್ಯವಾಗದಿದ್ದರೂ, ಈ ಪ್ರದೇಶದಲ್ಲಿ ಮಾದಕ ದ್ರವ್ಯ ಹಾವಳಿಯನ್ನು ಕೊನೆಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಮಸ್ಶಿವಾಯಂ ಹೇಳಿದ್ದಾರೆ.
ಪುದುಚೇರಿ ಆಡಳಿತಾಧಿಕಾರಿ ಡಾ. ತಮಿಳಿಸೈ ಸೌಂದರರಾಜನ್ ಬಾಲಕಿಯ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ. “ಅಪರಾಧದಲ್ಲಿ ಭಾಗಿಯಾದವರಿಗೆ ತ್ವರಿತ ನ್ಯಾಯ ಒದಗಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಇನ್ನು ಅಪರಾಧಿಗಳಿಗೆ ಮರಣದಂಡನೆ ನೀಡಬೇಕು ಎಂಬ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, “ಕಾನೂನನ್ನು ನಮ್ಮ ಕೈಗೆ ತೆಗೆದುಕೊಳ್ಳಲಾಗುವುದಿಲ್ಲ. ಆದರೆ, ಸಂತ್ರಸ್ತ ಕುಟುಂಬದೊಂದಿಗೆ ನಾನಿದ್ದೇನೆ. ಮಾದಕವಸ್ತು ಕಳ್ಳಸಾಗಣೆ ತಡೆಗೆ ಕ್ರಮಗಳನ್ನು ತೀವ್ರಗೊಳಿಸಲಾಗುತ್ತದೆ. ತಮಿಳುನಾಡಿನಲ್ಲಿ ಕೆಲವು ಮಾದಕ ವ್ಯಸನಿಗಳನ್ನು ಬಂಧಿಸಲಾಗಿದೆ. ಅವರ ಕೆಲವು ಸಹಚರರು ಪುದುಚೇರಿಯಲ್ಲಿದ್ದಾರೆ ಎಂಬ ವರದಿಗಳಿವೆ. ಅವರನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಹೇಳಿದರು.
“ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿನಿ ಸಾವಿಗೆ ಸಂತಾಪ ಸೂಚಿಸಿ ಬಾಲಕಿ ಓದುತ್ತಿದ್ದ ಶಾಲೆಗೆ ಬುಧವಾರ ರಜೆ ಘೋಷಿಸಲಾಗಿದೆ ಎಂದು ಶಾಲಾ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಳ: ಹವಾಮಾನ ಇಲಾಖೆ ತಜ್ಞ
ಮುತ್ಯಾಲಪೇಟೆಯ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವ ಬಾಲಕಿ ಮಾರ್ಚ್ 2 ರಂದು ಸಂಜೆ ನಾಪತ್ತೆಯಾಗಿದ್ದಳು. ತಕ್ಷಣ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿ ಹಲವೆಡೆ ಹುಡುಕಾಡಿದ್ದರು. ಆದರೆ, ಬಾಲಕಿಯ ಮನೆ ಸಮೀಪದ ಚರಂಡಿಯಲ್ಲಿ ಗೋಣಿಚೀಲ ತೇಲುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದಾಗ, ಆಕೆಯ ಮೃತದೇಹ ಪತ್ತೆಯಾಗಿತ್ತು. ಕಾಮುಕರು ಬಾಲಕಿಯ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ಗೋಣಿಚೀಲದಲ್ಲಿ ಹಾಕಿ, ಚರಂಡಿಯಲ್ಲಿ ಎಸೆದಿದ್ದರು.




