ಬಿಜೆಪಿ ಶಾಸಕರು, ಸಂಸದರು, ನಾಯಕರ ವಿಕೃತಿಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿವೆ. ಕೋಮುದ್ವೇಷ, ಪ್ರಚೋದನಾಕಾರಿ ಹೇಳಿಕೆಗಳಿಂದಲೇ ಬಿಜೆಪಿಗರು ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ, ಉತ್ತರ ಪ್ರದೇಶದ ಬಿಜೆಪಿ ಮಾಜಿ ಶಾಸಕರೊಬ್ಬರು ಅಂತಹದ್ದೇ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ‘ಹಿಂದು ಯುವಕರು 10 ಮುಸ್ಲಿಂ ಯುವತಿಯರನ್ನು ಕರೆದೊಯ್ದು/ಎಳೆದೊಯ್ದು, ಮದುವೆಯಾಗಿ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಅವರ ಹೇಳಿಕೆ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ.
ಸಿದ್ಧಾರ್ಥನಗರ ಜಿಲ್ಲೆಯ ದುಮಾರಿಯಾಗಂಜ್ನ ಮಾಜಿ ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ, ದುಮಾರಿಯಾಗಂಜ್ ಕ್ಷೇತ್ರ ವ್ಯಾಪ್ತಿಯ ಧಂಖರ್ಪುರ ಗ್ರಾಮದಲ್ಲಿ ಇಬ್ಬರು ಹಿಂದು ಯುವತಿಯರನ್ನು ಮುಸ್ಲಿಂ ಯುವಕರು ಮದುವೆಯಾಗಿದ್ದು, ಬಲವಂತವಾಗಿ ಮತಾಂತರ ಮಾಡಿಸಿಲಾಗಿದೆ ಎಂದು ಆರೋಪಿಸಲಾಗಿದೆ. ಈ ಆರೋಪ ಸುದ್ದಿಯಾಗುತ್ತಿದ್ದಂತೆಯೇ ಪ್ರತಾಪ್ ಸಿಂಗ್ ಆ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಹಿಂದು ಯುವಕರನ್ನು ಉದ್ದೇಶಿಸಿ ಮಾತನಾಡಿದ ಪ್ರತಾಪ್ ಸಿಂಗ್, ‘ಇಬ್ಬರು ಹಿಂದು ಯುವತಿಯರಿಗೆ ಪ್ರತಿಯಾಗಿ, 10 ಮುಸ್ಲಿಂ ಮಹಿಳೆಯರನ್ನು ಕರೆದೊಯ್ದು ಮದುವೆಯಾಗಿ’ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
“ಮುಸ್ಲಿಂ ಹುಡುಗಿಯೊಂದಿಗೆ ಓಡಿಹೋದ ಯಾವುದೇ ಹಿಂದು ಯುವಕನ ಮದುವೆಯನ್ನು ನಾನು ಏರ್ಪಡಿಸುತ್ತೇನೆ. ಜೊತೆಗೆ, ಅಂತಹ ಯುವಕರಿಗೆ ಉದ್ಯೋಗವನ್ನೂ ಕೊಡಿಸುತ್ತೇನೆ” ಎಂದು ಪ್ರತಾಪ್ ಸಿಂಗ್ ಹೇಳಿದ್ದಾರೆ.
“ಇದು ಅಖಿಲೇಶ್ ಯಾದವ್ ಅವರ ಕಾಲವಲ್ಲ. ಭಯಪಡುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ. ಮುಸ್ಲಿಂ ಹುಡುಗರು ಇಬ್ಬರು ಹಿಂದು ಹುಡುಗಿಯರನ್ನು ಮದುವೆಯಾಗುವ ವಿಷಯವನ್ನು ಸುಮ್ಮನೆ ಬಿಡಬಾರದು. ಇಬ್ಬರ ಬದಲು, ಹಿಂದು ಯುವಕರು ಕನಿಷ್ಠ 10 ಮುಸ್ಲಿಂ ಹುಡುಗಿಯರನ್ನು ಕರೆತಂದು ಮದುವೆಯಾಗಬೇಕು. ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ” ಎಂದು ಅವರು ಪ್ರಚೋದನಾಕಾರಿ ಭಾಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದುಗಳು ಭಯವಿಲ್ಲದೆ ಏನು ಬೇಕಾದರೂ ಮಾಡಬಹುದು ಎಂಬ ಸಂದೇಶ ರವಾಸಿದ್ದು, ಪ್ರಚೋದನೆ ನೀಡಿದ್ದಾರೆ.
ಈ ಹೇಳಿಕೆಗಳನ್ನು ಸಮಾಜವಾದಿ ಪಕ್ಷ ಖಂಡಿಸಿದೆ. “ಕೋಮು ಸಾಮರಸ್ಯವನ್ನು ಹಾಳುಮಾಡಲು ಪದೇ ಪದೇ ಪ್ರಯತ್ನಗಳು ನಡೆಯುತ್ತಿವೆ. ಮುಸ್ಲಿಮರನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ನಿತೀಶ್ ಕುಮಾರ್ ಮತ್ತು ಬಿಜೆಪಿಯ ಸ್ವಯಂ ಸೋಲು
ಪ್ರತಾಪ್ ಸಿಂಗ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ದುಮಾರಿಯಾಂಗಂಜ್ ಶಾಸಕ ಸೈಯಾದ ಖಾಟೂನ್, “ಅವರ ಹೇಳಿಕೆಗಳು ಕೋಮು ಅಶಾಂತಿಯನ್ನು ಸೃಷ್ಟಿಸುವ ತಂತ್ರದ ಭಾಗವಾಗಿವೆ” ಎಂದು ಹೇಳಿದ್ದಾರೆ.
“ಪ್ರತಾಪ್ ಸಿಂಗ್ ಅವರ ಹೇಳಿಕೆಗಳು ಮಹಿಳೆಯರನ್ನು ಅವಮಾನಿಸಿವೆ. ಅವರು ಮುಸ್ಲಿಮರನ್ನು ಅವಮಾನಿಸುತ್ತಲೇ ಇದ್ದಾರೆ. ಮುಸ್ಲಿಮರು ಭಾರತದ ನಾಗರಿಕರಲ್ಲವೇ, ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲಿಲ್ಲವೇ? ಅವರ ಹೇಳಿಕೆ ವಿರುದ್ಧ ನಾನು ದೂರು ದಾಖಲಿಸಿದ್ಧೇನೆ. ಆದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಆಡಳಿತವು ಮೂಕ ಪ್ರೇಕ್ಷಕನಂತಿದೆ. ಮುಂದೆ ಏನಾದರೂ ಸಂಭವಿಸಿದರೆ ಅದಕ್ಕೆ ಆಡಳಿತವೇ ಜವಾಬ್ದಾರವಾಗಿರುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




