ಪಂಜಾಬ್ನ ಆಡಳಿತಾರೂಢ ಎಎಪಿ ನಾಯಕ ದಲ್ಜಿತ್ ಸಿಂಗ್ ರಾಜು ಮೇಲೆ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದಾರೆ. ಪಂಜಾಬ್ನ ಫಾಗ್ವಾರಾ-ಜಂಡಿಯಾಲಾ ರಸ್ತೆಯ ದರ್ವೇಶ್ ಪಿಂಡ್ ಗ್ರಾಮದಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆಡಳಿತಾರೂಢ ಎಎಪಿ ಪಂಜಾಬ್ನಲ್ಲಿ ‘ಯುದ್ಧ ನಾಶಿಯಾನ್ ವಿರುಧ್’ ಅಭಿಯಾನ (ಮಾದಕವಸ್ತುಗಳ ವಿರುದ್ಧದ ಅಭಿಯಾನ) ನಡೆಯುತ್ತಿದೆ. ಅಭಿಯಾನದಲ್ಲಿ ದಲ್ಜಿತ್ ಸಿಂಗ್ ರಾಜು ಅವರು ಮುಂಚೂಣಿಯಲ್ಲಿದ್ದಾರೆ. ರಾಜು ಅವರನ್ನು ಹೋಶಿಯಾರ್ಪುರ ಸಂಸದ ರಾಜ್ ಕುಮಾರ್ ಚಬ್ಬೇವಾಲ್ ಅವರ ಆಪ್ತ ಎಂದು ಪರಿಗಣಿಸಲಾಗಿದೆ. ಅವರ ಮನೆಯ ಮೇಲೆ ದುಷ್ಕರ್ಮಿಗಳು ಬರೋಬ್ಬರಿ 23 ಸುತ್ತು ಗುಂಡು ಹಾರಿಸಿದ್ದಾರೆ. ಮನೆಯ ಕಿಟಕಿ ಮತ್ತು ಬಾಗಿಲಿನ ಗಾಜುಗಳು ಪುಡಿಪುಡಿಯಾಗಿವೆ.
“ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಲಾಗುತ್ತಿದೆ ಮತ್ತು ಸ್ಥಳದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಗುಂಡಿನ ದಾಳಿಯ ಕುರಿತು ಎಲ್ಲಾ ಕೋನಗಳಿಂದಲೂ ಕೂಲಂಕಷವಾಗಿ ತನಿಖೆ ನಡೆಯುತ್ತಿದೆ” ಎಂದು ಫಾಗ್ವಾರಾ ಉಪ ವಿಭಾಗೀಯ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಮಾಧ್ವಿ ಶರ್ಮಾ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಮೋಟಾರ್ ಸೈಕಲ್ನಲ್ಲಿ ಬಂದು ತಮ್ಮ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ರಾಜು ತಿಳಿಸಿದ್ದಾರೆ.
“ಮೊದಲು ನಾನು ಪಟಾಕಿ ಇರಬಹುದು ಎಂದು ಭಾವಿಸಿದೆ. ಆದರೆ, ನಂತರ ನನ್ನ ಹೆಂಡತಿ, ಇಬ್ಬರು ಪುರುಷರು ಮನೆಯ ಮೇಲೆ ಗುಂಡಿನ ದಾಳಿ ನಡೆಸುತ್ತಿರುವುದನ್ನು ನೋಡಿದರು”. ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದೆ ಎಂದು ರಾಜು ಹೇಳಿದ್ದಾರೆ.
ಸ್ಥಳದಲ್ಲಿ ಕೈಬರಹದ ಪತ್ರ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದ್ದು, ಇಂಗ್ಲಿಷ್ನಲ್ಲಿ ಬರೆಯಲಾದ ಅದರಲ್ಲಿ ಒಂದು ನಿರ್ದಿಷ್ಟ ಗುಂಪಿನ ಹೆಸರು ಮತ್ತು 5 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ ಎಂದು ಅವರು ಹೇಳಿದ್ದಾರೆ.




