ಎಎಪಿ ಸಂಸದ ರಾಘವ್ ಚಡ್ಡಾ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಯುಕೆಗೆ ತೆರಳಿದ್ದಾರೆ. ಅವರಿಗೆ ದೃಷ್ಟಿ ಹೋಗುವ ಗಂಭೀರ ಸ್ಥಿತಿ ಎದುರಾಗಿತ್ತು ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಮಾಹಿತಿ ನೀಡಿದ್ದಾರೆ.
ರಾಘವ್ ಚಡ್ಡಾ ಅವರು ಚುನಾವಣಾ ಪ್ರಚಾರಕ್ಕೆ ಗೈರುಹಾಜರಾಗಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸೌರಭ್ ಭಾರದ್ವಾಜ್, “ರಾಘವ್ ಚಡ್ಡಾ ಕಣ್ಣುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅದಾದ ಬಳಿಕ ಚಿಕಿತ್ಸೆ ಪಡೆಯಲು ಯುಕೆಗೆ ಅವರು ತೆರಳಿದರು. ಸ್ಥಿತಿ ಗಂಭೀರವಾಗಿದ್ದು, ಸಕಾಲಿಕ ಚಿಕಿತ್ಸೆ ನೀಡದಿದ್ದರೆ ಕುರುಡುತನದ ಸಾಧ್ಯತೆಯಿದೆ ಎಂದು ನನಗೆ ತಿಳಿಸಲಾಗಿತ್ತು” ಎಂದು ಹೇಳಿದ್ದಾರೆ.
VIDEO | “Raghav Chadha has undergone major eye surgery in the UK. It is said that his condition was serious and there was a possibility of blindness. As soon as he gets better, he will come back to India and join us in the election campaigning,” says Delhi Minister and AAP leader… pic.twitter.com/o3A0hJYrAt
— Press Trust of India (@PTI_News) April 30, 2024
ಇದನ್ನು ಓದಿದ್ದೀರಾ? ಮುಂದುವರೆದ ಅಮಾನತು ಸರಣಿ: ಈ ಬಾರಿ ಎಎಪಿಯ ರಾಘವ್ ಚಡ್ಡಾ ಸರದಿ
“ರಾಘವ್ ಚಡ್ಡಾ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರು ಗುಣಮುಖರಾದ ತಕ್ಷಣ ಭಾರತಕ್ಕೆ ಹಿಂದಿರುಗಲಿದ್ದಾರೆ. ಬಳಿಕ ಪಕ್ಷದ ಪ್ರಚಾರದಲ್ಲಿ ಸೇರಲಿದ್ದಾರೆ” ಎಂದು ಸೌರಭ್ ಭಾರದ್ವಾಜ್ ತಿಳಿಸಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧನ ಮಾಡಿದ ಬಳಿಕ ಎಎಪಿ ಸಂಸದ ರಾಘವ್ ಚಡ್ಡಾ ನಾಪತ್ತೆಯಾಗಿದ್ದಾರೆ ಎಂದು ಬಿಜೆಪಿ ಆಗಾಗ ಆರೋಪ ಮಾಡುತ್ತಿತ್ತು. ಈ ಬಗ್ಗೆ ಸೌರಭ್ ಭಾರದ್ವಾಜ್ ಅವರನ್ನು ಪ್ರಶ್ನಿಸಿದ ಮಾಧ್ಯಮಗಳು ರಾಘವ್ ಚಡ್ಡಾ ನಿಮ್ಮೊಂದಿಗೆ ಇದ್ದಾರಾ ಎಂದು ಕೇಳಿದೆ.
ಇದನ್ನು ಓದಿದ್ದೀರಾ? ದೆಹಲಿ ಅಬಕಾರಿ ನೀತಿ ಪ್ರಕರಣ | ಇ.ಡಿ ಆರೋಪ ಪಟ್ಟಿಯಲ್ಲಿ ರಾಘವ್ ಚಡ್ಡಾ ಹೆಸರು ಉಲ್ಲೇಖ
ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಸಚಿವರು, “ಚಡ್ಡಾ ನಮ್ಮೊಂದಿಗೆ ಇಲ್ಲ ಎಂದು ನಿಮಗೆ ಯಾರು ಹೇಳಿದ್ದು. ಅವರು ನಮ್ಮೊಂದಿಗೆ ಇಲ್ಲದಿದ್ದರೆ ಈಗಾಗಲೇ ಬಿಜೆಪಿ ಅವರನ್ನು ಎಲ್ಲಾದರು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುತ್ತಿತ್ತು” ಎಂದು ಹೇಳಿದರು. ಜೊತೆಗೆ ದೃಷ್ಟಿ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು.
ಇನ್ನು ರಾಘವ್ ಚಡ್ಡಾ ವಿರುದ್ಧ ಸುಳ್ಳು ಸುದ್ದಿ ಹರಡಿದ ಯೂಟ್ಯೂಬ್ ಚಾನೆಲ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಲೂಧಿಯಾನ ಲೋಕಸಭಾ ಕ್ಷೇತ್ರದ ಆಪ್ ಅಭ್ಯರ್ಥಿ ಅಶೋಕ್ ಪಪ್ಪಿ ಪರಾಶರ್ ಅವರ ಪುತ್ರ ವಿಕಾಸ್ ಪರಾಶರ್ ದೂರಿನ ಆದಾರದಲ್ಲಿ ಕ್ಯಾಪಿಟಲ್ ಟಿವಿ ಹೆಸರಿನ ಯೂಟ್ಯೂಬ್ ಚಾನೆಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.




