ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳಿಂದ ಬಂಧನವಾಗಿ ನ್ಯಾಯಾಂಗ ವಶದಲ್ಲಿರುವ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ವಿಶ್ವಾಸಮತ ಯಾಚನೆ ಸಲುವಾಗಿ ವಿಧಾನಸಭೆಗೆ ಆಗಮಿಸಿದ್ದಾರೆ.
ಮುಖ್ಯಮಂತ್ರಿಯಾಗಿ ನಿಯೋಜಿತಗೊಂಡಿರುವ ಚಂಪೈ ಸೊರೇನ್ ಅವರು ಬಹುಮತ ಸಾಬೀತುಪಡಿಸಲು ಇಂದು ವಿಶ್ವಾಸಮತ ಯಾಚಿಸುತ್ತಿರುವ ಕಾರಣ ಸೊರೇನ್ಗೆ ಜಾರ್ಖಂಡ್ ವಿಧಾನಸಭೆಗೆ ಹಾಜರಾಗಲು ಪಿಎಂಎಲ್ಎ ನ್ಯಾಯಾಲಯ ಅನುಮತಿ ನೀಡಿದೆ.
ಈ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ ಹೇಮಂತ್ ಸೊರೇನ್, ತಮ್ಮ ಬಂಧನ ಭಾರತದ ಪ್ರಜಾಪ್ರಭುತ್ವದಲ್ಲಿ ಕರಾಳ ಅಧ್ಯಾಯ ಎಂದು ಹೇಳಿದ್ದಾರೆ. “ಭೂಹಗರಣದಲ್ಲಿ ಜನವರಿ 31ರಂದು ಇ.ಡಿ ತಮ್ಮನ್ನು ಬಂಧಿಸುವಲ್ಲಿ ರಾಜ್ಯಪಾಲರು ಕೂಡ ಭಾಗಿಯಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ರೂ. 8.5 ಕೋಟಿ ಭೂ ಹಗರಣದಲ್ಲಿ ಅವರು ನನ್ನನ್ನು ಬಂಧಿಸಿದ್ದಾರೆ. ಅವರಿಗೆ ಧೈರ್ಯವಿದ್ದರೆ ಭೂಹಗರಣದಲ್ಲಿ ನನ್ನ ಹೆಸರಿರುವುದನ್ನು ಸಾಬೀತುಪಡಿಸಲಿ. ಅವರು ಸಾಬೀತುಪಡಿಸಿದರೆ ನಾನು ರಾಜಕಾರಣವನ್ನು ತ್ಯಜಿಸುತ್ತೇನೆ” ಎಂದು ಸವಾಲು ಹಾಕಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪೇ?
“ಭೂ ಹಗರಣದಲ್ಲಿ ಇ.ಡಿ ಬಂಧನವನ್ನು ನ್ಯಾಯಾಲಯಲ್ಲಿ ಪ್ರಶ್ನಿಸುತ್ತೇನೆ. ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಅವರಿಂದ ಕಲಿಯಬೇಕು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಬುಡಕಟ್ಟು ಹಾಗೂ ದಲಿತರ ಕಣ್ಣಿರಿಗೆ ಬೆಲೆಯಿಲ್ಲ” ಎಂದು ಸೊರೇನ್ ಆರೋಪಿಸಿದರು.
“ನಾನು ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಅವರು ನನ್ನನ್ನು ಜೈಲಿನಲ್ಲಿ ಇಡಬಹುದು ಎಂದು ಭಾವಿಸಿದರೆ ಜಾರ್ಖಂಡ್ನ ಮೂಲೆಮೂಲೆಯಲ್ಲಿರುವ ಬುಡಕಟ್ಟು, ದಲಿತ ಸಮುದಾಯದವರು ತಮ್ಮ ಪ್ರಾಣವನ್ನು ಅರ್ಪಿಸಲಿದ್ದಾರೆ. ಅವರು 2019ರ ನಂತರದ ಹಗರಣಗಳನ್ನು ಮಾತ್ರ ನೋಡುತ್ತಿದ್ದಾರೆ. 2000ದಿಂದ ರಾಜ್ಯದಲ್ಲಿ ನಡೆದ ಹಗರಣಗಳನ್ನು ನೋಡುತ್ತಿಲ್ಲ. ಅವರಿಗೆ ಬುಡಕಟ್ಟು ಸಮುದಾಯದವರು ಮುಖ್ಯಮಂತ್ರಿ, ಐಎಎಸ್, ಐಪಿಎಸ್ ಅಧಿಕಾರಿಗಳಾಗುವುದು ಇಷ್ಟವಿಲ್ಲ. ನನ್ನ ಬಗ್ಗೆ ಹಾಸ್ಯ ಮಾಡಿದರು. ನಾನು ಏರಿದ ವಿಮಾನ, ತಂಗಿದ ಹೊಟೇಲ್ಗಳವರೆಗೆ ಹಾಸ್ಯ ಮಾಡಿದರು. ಬುಡಕಟ್ಟು ಸಮುದಾಯದವರನ್ನು 5 ವರ್ಷ ಸಿಎಂ ಆಗಿ ಶಾಂತಿಯುತವಾಗಿ ಅಧಿಕಾರ ನಡೆಸಲು ಅವರು ಬಿಡುವುದಿಲ್ಲ. ಇದು ಮೊದಲೇ ರಚಿಸಿದ ನಾಟಕ. ನನಗೆ ಬಲೆ ಬೀಸಬಹುದು ಎನ್ನುವ ಅಂದಾಜು ನನಗೆ ಮೊದಲೇ ತಿಳಿದಿತ್ತು” ಎಂದು ಹೇಳಿದರು.





