ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದ ಕಾರಣಕ್ಕಾಗಿ, ಕುಟುಂಬವೊಂದಕ್ಕೆ ಗ್ರಾಮ ಪಂಚಾಯತಿಯು ಸಾಮಾಜಿಕ ಬಹಿಷ್ಕಾರ ಹಾಕಿರುವ ಪ್ರಕರಣ ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಖಾಪ್ ಪಂಚಾಯತಿಯು ರತಲ್ ಲಾಲ್ ಎಂಬವರ ಕುಟುಂಬಕ್ಕೆ ಬಹಿಷ್ಕಾರ ಹಾಕಿದೆ. ಮಾತ್ರವಲ್ಲದೆ, ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿದರೆ, ಅವರಿಗೆ 1 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಬೆದರಿಕೆ ಹಾಕಿದೆ.
ಸಂತ್ರಸ್ತ ರತನ್ ಲಾಲ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ದೂರು ನೀಡಿ ಒಂದು ವಾರಕ್ಕೂ ಹೆಚ್ಚು ಸಮಯವಾಗಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರತನ್ ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಮತ್ತೊಂದು ದೂರು ಸಲ್ಲಿಸಿದ್ದಾರೆ.
“ಭೂ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯಗಳನ್ನು ಕೇಳದೆಯೇ ಸಾಮಾಜಿಕ ಬಹಿಷ್ಕರ ಹಾಕಲಾಗಿದೆ. ಇದು ನಮಗೆ ಮಾನಸಿಕ ಮತ್ತು ಸಾಮಾಜಿಕ ಕಿರುಕುಳ ಉಂಟುಮಾಡಿದೆ” ಎಂದು ರತನ್ ಹೇಳಿಕೊಂಡಿದ್ದಾರೆ.
“ಗ್ರಾಮದಿಂದ ಹೊರಹಾಕಲ್ಪಟ್ಟಾಗಿನಿಂದ ನಾನು ಮತ್ತು ನನ್ನ ಇಡೀ ಕುಟುಂಬವು ನೋವು ಅನುಭವಿಸುತ್ತಿದೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂಬುದನ್ನು ತಿಳಿದ ಕೆಲವು ಗ್ರಾಮಸ್ಥರು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ಕುಟುಂಬ ಇನ್ನಷ್ಟು ಆಘಾತಕ್ಕೆ ಒಳಗಾಗಿದೆ. ನಮಗೆ ನ್ಯಾಯ ಒದಗಿಸಬೇಕು. ಬಹಿಷ್ಕರ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಅವರು ಒತ್ತಾಯಿಸಿದ್ದಾರೆ.




